ಕಲಬುರಗಿ: ರಣರು ನಡೆದಾಡಿದ ಕಲ್ಯಾಣ ನಾಡಿನಲ್ಲಿದೆ ಬೆಳೆಯುವ ತಾಕತ್ತು, ಪ್ರತಿಯೊಬ್ಬರೂ ಅವಕಾಶ ವಂಚಿತರಾಗದೆ ಅವಕಾಶ ಸೃಷ್ಟಿಸಿ ಸಾಧನೆಗೈಯಬೇಕು ಸಾಧನೆ ಮೈಗಳ್ಳರ ಸ್ವತ್ತಲ್ಲ ಪರಿಶ್ರಮ ವಾದಿಗಳ ಸ್ವತ್ತಾಗಿದೆ ಎಂದು “ಶ್ರೀಮಂತ” ಕನ್ನಡ ಚಲನಚಿತ್ರ ನಟರಾದ ಕ್ರಾಂತಿ ಹೇಳಿದರು.
ನಗರದ ಭವಾನಿ ನಗರದಲ್ಲಿರುವ ಬಬಲಾದ ಮಠದಲ್ಲಿ 163ನೇ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ನಮ್ಮ ಭಾಗದ ಪ್ರತಿಭೆಗಳಿಗೆ ಕೊರತೆ ಇಲ್ಲ, ಪ್ರೋತ್ಸಾಹಿಸುವ ವೇದಿಕೆ ಅವಶ್ಯಕತೆ ಇದೆ ಈ ನಿಟ್ಟಿನಲ್ಲಿ ಬಬಲಾದ ಮಠವು ಪ್ರತಿ ಸೋಮವಾರ ಶಿವಾನುಭವಗೋಷ್ಠಿ ಕಾರ್ಯಕ್ರಮ ಹಮ್ಮಿಕೊಂಡು ಈ ಭಾಗದ ಮಕ್ಕಳಿಗೆ, ಕಲಾವಿದರಿಗೆ, ವೇದಿಕೆ ಕಲ್ಪಿಸುವುದರೊಂದಿಗೆ ಸಂಸ್ಕಾರಯುತ ಸಮಾಜ ನಿರ್ಮಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಮಾರ್ಮಿಕವಾಗಿ ನುಡಿದರು.
ಉಪನ್ಯಾಸ ನೀಡಿದ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ರೇವಣಸಿದ್ದಪ್ಪ ದುಕಾನ ಮಾತನಾಡುತ್ತಾ ಭಾರತ ದೇಶ ವಿವಿಧತೆಯಲ್ಲಿ ಏಕತೆ ಹೊಂದಿದೆ, ಆಧ್ಯಾತ್ಮಿಕತೆಯಲ್ಲಿ ಜಗತ್ತಿಗೆ ಆದರ್ಶ ರಾಷ್ಟ್ರವಾಗಿದೆ ಆದಿ ಅನಾದಿ ಕಾಲದಿಂದಲೂ ಸಂತರು, ಶರಣರು ಜನಿಸಿ ಉತ್ತಮ ಸಮಾಜ ನಿರ್ಮಿಸುವ ಕಾರ್ಯ ಮಾಡಿ ಅಮರರಾಗಿ ಉಳಿದಿದ್ದಾರೆ. ಅಂಥವರ ವಿಚಾರಗಳು ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೆಂದು ಹೇಳಿದರು.
ಶ್ರೀ ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಗುರುಪಾದಲಿಂಗ ಮಹಾಸ್ವಾಮಿಗಳು ನೇತೃತ್ವ ವಹಿಸಿದರು. ಕಾರ್ಯಕ್ರಮದಲ್ಲಿ ನ್ಯಾಯವಾದಿ ಹಣಮಂತರಾಯ ಅಟ್ಟೂರ, ಸಂಗಮೇಶ ನಾಗೂರ, ಕವಿತಾ ದೇಗಾಂವ, ರೇವಣಸಿದ್ದಯ್ಯ ಶಾಸ್ತ್ರಿ, ಶರಣು ಜವಳಗಿ, ಸಿದ್ದಣ್ಣವಾಡಿ, ವಸಂತ ಜಾಧವ, ಮಾಣಿಕ ಮಿರ್ಕಲ್, ಗುರುರಾಜ ಹಸರಗುಂಡಗಿ, ಸಂಗೀತಾ ಗರೂರ, ಕುಮಾರಿ ಸಿಂಚನಾ, ಸಹನಾ, ವಿಶ್ವಜ್ಯೋತಿ ಸೇರಿದಂತೆ ಅನೇಕ ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಚಿತ್ರ ನಟರಿಗೆ ಶ್ರೀಮಠದ ವತಿಯಿಂದ ಗೌರವಿಸಲಾಯಿತು