ಸುರಪುರ: ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 24 ಮಕ್ಕಳು ಅಸ್ವಸ್ಥಗೊಂಡಿದ್ದು ಗ್ರಾಮದ ಜನರಲ್ಲಿ ಆತಂಕ ಮೂಡಿಸಿದೆ.ಗ್ರಾಮದಲ್ಲಿನ ಶುದ್ಧ ನೀರಿನ ಘಟಕ ಕೆಟ್ಟು ನಿಂತು ತಿಂಗಳುಗಳಾದರು ಇದುವರೆಗೆ ಅದನ್ನು ದುರಸ್ತಿಗೊಳಿಸಿಲ್ಲ,ಗ್ರಾಮದಲ್ಲಿನ ಜನರಿಗೆ ಈಗ ಕುಡಿಯಲು ಬೋರವೆಲ್ ನೀರೆ ಗತಿಯಾಗಿದೆ.ಆದರೆ ಕೆಟ್ಟು ನಿಂತಿದ್ದ ಬೋರವೆಲ್ ಕೂಡ ಇತ್ತೀಚೆಗೆ ಕೆಲ ದಿನಗಳ ಹಿಂದೆ ರಿಪೇರಿ ಮಾಡಲಾಗಿದ್ದು,ಈ ಬೋರವೆಲ್ಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ಹೇಳಲಾಗುತ್ತಿದೆ.ಆದರೆ ಶುದ್ಧ ನೀರು ಇಲ್ಲದ್ದರಿಂದ ಗ್ರಾಮದಲ್ಲಿ ಶಾಲೆಯ ಮಕ್ಕಳು ಬೋರವೆಲ್ ನೀರು ಕುಡಿದಿದ್ದರಿಂದ ಮಕ್ಕಳಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ.
ಶನಿವಾರ ದಿಂದಲೇ ವಾಂತಿ ಭೇದಿ ಕಾಣಿಸಿಕೊಂಡಿದ್ದು ಕೆಲವರು ಮೊದಲು ತಾಲೂಕು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡು ಹೋಗಿದ್ದಾರೆ.ಆದರೆ ದಿನೆ ದಿನೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.ರವಿವಾರ ರಾತ್ರಿ 5 ಮಕ್ಕಳು ಅಸ್ವಸ್ಥಗೊಂಡು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಅಲ್ಲದೆ ಸೋಮವಾರ ಮುಂಜಾನೆ ಗ್ರಾಮಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ ಭೇಟಿ ನೀಡಿ ಪರಿಶೀಲಿಸಿದ್ದು,ಗ್ರಾಮದಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಅಲ್ಲದೆ ಗ್ರಾಮದಲ್ಲಿನ ಎಲ್ಲರು ನೀರನ್ನು ಕಾಯಿಸಿ ಆರಿಸಿ ಸೋಸಿ ಕುಡಿಯುವಂತೆ ತಿಳಿಸಿದ್ದಾರೆ.
ಪ್ರಕರಣಗಳು ಹೆಚ್ಚುತ್ತಿರುವ ಕಾರಣ ತಾಲೂಕು ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗೂ ಮಕ್ಕಳನ್ನು ಕರೆದುಕೊಂಡು ಹೋಗಿರುವ ಮಾಹಿತಿ ತಿಳಿದ ತಾಲೂಕು ಆರೋಗ್ಯಾಧಿಕಾರಿಗಳು ತಕ್ಷಣಕ್ಕೆ ಗ್ರಾಮದ ಶಾಲೆಯಲ್ಲಿಯೇ ತಮ್ಮ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ಕರೆಯಿಸಿ ಚಿಕಿತ್ಸೆಯನ್ನು ನೀಡಲಾರಂಭಿಸಿದ್ದು,ಸದ್ಯ ಎಲ್ಲಾ ಮಕ್ಕಳು ಗುಣಮುಖರಾಗುತ್ತಿದ್ದಾರೆ ಎನ್ನಲಾಗಿದೆ.ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಇಓ ಬಸವರಾಜ ಸಜ್ಜನ್ ಸೇರಿ ಅನೇಕರು ಭಾಗವಹಿಸಿದ್ದರು.
ಬಾಕ್ಸ್ ಮಾಡಿ ಹಾಕಿಕೊಳ್ಳಿ: ಚಿಕ್ಕನಹಳ್ಳಿ ಭತ್ತ ನಾಟಿ ಕೆಲಸಕ್ಕೆಂದು ಆಗಮಿಸಿದ್ದ ಕೂಲಿ ಕಾರ್ಮಿಕರು ಅರೆಬೆಂದ ಮಾಂಸಹಾರ ಸೇವಿಸಿ ವಾಂತಿ ಭೇದಿಯಿಂದ ಬಳಲಿದ್ದಾರೆ.8 ಜನರು ಅಸ್ವಸ್ಥಗೊಂಡಿದ್ದು ಎಲ್ಲರಿಗೂ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಗುಣಮುಖರಾಗಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ ನಾಯಕ ತಿಳಿಸಿದ್ದಾರೆ.
ಚಿಕ್ಕನಹಳ್ಳಿ ಗ್ರಾಮದಲ್ಲಿ ಮೂರು ದಿನಗಳಿಂದ ಜನರು ವಾಂತಿ ಭೇದಿಗೆ ತುತ್ತಾಗುತ್ತಿರುವಾಗ ಗ್ರಾಮದಲ್ಲಿ ಖಾಸಗಿಯವರಿಂದ ಶುದ್ಧ ಕುಡಿಯುವ ನೀರಿನ ಘಟಕವೊಂದನ್ನು ಆರಂಭಿಸಲಾಗಿದ್ದು,ಅಧಿಕಾರಿಗಳು ತೋರಿರುವ ನಿರ್ಲಕ್ಷ್ಯ ದಿಂದ ಶುದ್ಧ ಕುಡಿಯುವ ನೀರಿನ ಘಟಕ ದುರಸ್ಥಿಗೊಳಿಸದೆ ಇರುವುದರಿಂದ ಜನರು ಶುದ್ಧ ನೀರನ್ನು ಖಾಸಗಿಯವರಿಂದ ಹಣ ಕೊಟ್ಟು ಖರಿದಿಸಿ ಕುಡಿಯುವ ಸ್ಥಿತಿ ನಿರ್ಮಾಣವಾಗಿದೆ.