ಕಲಬುರಗಿ : ಶ್ರೀಶೈಲ್ ಮಲ್ಲಿಕಾರ್ಜುನ ಬಂದು ನೆಲೆಸಿದ್ದಾನೆಂದು ಪ್ರತೀತಿಯಿರುವ ಜಿಲ್ಲೆಯ ಪ್ರಮುಖ ಸುಕ್ಷೇತ್ರಗಳಲ್ಲಿ ಒಂದಾದ ಕಾಳಗಿ ತಾಲೂಕಿನ ಕನ್ನಡಗಿ ಗ್ರಾಮದ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ ಶ್ರಾವಣದ ಎರಡನೇ ಸೋಮವಾರದಂದು ಅತ್ಯಂತ ಸಡಗರ ಹಾಗೂ ಸಂಭ್ರಮದೊಂದಿಗೆ ಜರುಗಿತು.
ದೇವಸ್ಥಾನದ ಅರ್ಚಕರಾದ ಶರಣಯ್ಯಸ್ವಾಮಿ, ನಾಗಯ್ಯಸ್ವಾಮಿ, ಸಿದ್ದಲಿಂಗಪ್ಪ ಪೂಜಾರಿ ಅವರು ಸೋಮವಾರ ಬೆಳೆಗ್ಗೆ ಮಲ್ಲಿಕಾರ್ಜುನ ದೇವರಿಗೆ ರುದ್ರಾಬಿಷೇಕ, ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿಸಿದರು. ಮೂರ್ತಿಯು ಅಲಕೃಂತ ಹೂವುಗಳಿಂದ ಕಂಗೊಳಿಸಿತು. ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಸಂಜೆ ಜರುಗಿದ ಮಲ್ಲಿಕಾರ್ಜುನ ದೇವರ ಮೂರ್ತಿಯುಳ್ಳ ಅಲಕೃತ ಪಲ್ಲಕ್ಕಿಯು ದೇವಸ್ಥಾನದ ಪ್ರದಕ್ಷಿಣೆ ಹಾಕುತ್ತಿದ್ದಾಗ ‘ಕನ್ನಡಗಿ ಮಲ್ಲಿಕಾರ್ಜುನ ಮಹಾರಾಜ ಕೀ ಜೈ’ ಎಂಬ ಘೋಷಣೆ ಮುಗಿಲು ಮುಟ್ಟಿತ್ತು. ಉತ್ತತ್ತಿ, ನಾರನ್ನು ಎಸೆದು ಭಕ್ತರು ಭಕ್ತಿಯನ್ನು ಸಮರ್ಪಿಸಿದರು.
ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಭಜನೆ, ಡೊಳ್ಳು, ಪುರವಂತಿಕೆ ಕಲಾವಿದರಿಂದ ಜರುಗಿದ ಕಲಾ ಪ್ರದರ್ಶನ ಸಂಭ್ರಮವನ್ನು ಇಮ್ಮಡಿಗೊಳಿಸಿದವು. ಮಹಿಳೆಯರು, ಮಕ್ಕಳಿಂದ ಜಾತ್ರಾ ಸಾಮಾಗ್ರಿಗಳ ಖರೀದಿ ಜೋರಾಗಿತ್ತು. ಮಕ್ಕಳು ಜೋಕಾಲಿ ಸೇರಿದಂತೆ ವಿವಿಧ ಆಟದಲ್ಲಿ ತೊಡಗಿ ಸಂಭ್ರಮಿಸಿದರು. ಜಾತ್ರೆಗೆ ಆಗಮಿಸಿದ ಎಲ್ಲಾ ಭಕ್ತರಿಗೆ ದೇವಸ್ಥಾನ ಸಮಿತಿ ವತಿಯಿಂದ ಪ್ರಸಾದ, ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿತ್ತು. ಕಾಳಗಿ ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಮಾಡಿದ್ದರು.
ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುಭಾಷ್ಚಂದ್ರ ಎನ್.ಮಾಲಿಪಾಟೀಲ, ಉಪಾಧ್ಯಕ್ಷ ಶಿವಕುಮಾರ ಸಿ.ಪೊಲೀಸ್ ಪಾಟೀಲ, ಕಾರ್ಯದರ್ಶಿ ಸಿದ್ದಣ್ಣ ಎಸ್.ತಳವಾರ, ಸದಸ್ಯರುಗಳಾದ ಚನ್ನವೀರಪ್ಪ ಜಿ.ಮಾಲಿಪಾಟೀಲ, ಮಲ್ಲಣ್ಣ ಎ.ಕನ್ನಡಗಿ, ಶಾಮರಾಯ ಎಂ.ಕನ್ನಡಗಿ, ಗುರುಲಿಂಗಪ್ಪ ಎನ್.ಪೊಲೀಸ್ಪಾಟೀಲ, ವಿಜಯಕುಮಾರ ಎಂ.ಪೂಜಾರಿ, ಶಾಂತಕುಮಾರ ಎಸ್.ತಳವಾರ, ರಾಜಕುಮಾರ ಬಿ.ಕನ್ನಡಗಿ, ಜಗಣ್ಣ ಎಸ್.ಪೂಜಾರಿ, ಬಸವರಾಜ ಚಿಕ್ಕನಾಗಾಂವ, ಮಲ್ಲಣ್ಣ ಶೆಳ್ಳಗಿ, ಕನ್ನಡ ಜಾನಪದ ಪರಿಷತ್ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ ಕಲಬುರಗಿ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ ಸೇರಿದಂತೆ ಅನೇಕ ಭಕ್ತಾದಿಗಳು ಭಾಗವಹಿಸಿದ್ದರು.