ಅಖಿಲ ಕರ್ನಾಟಕ ಕೊರಮ ಸಂಘದಿಂದ ರಾಜ್ಯ ಸಮಿತಿಯ ಸಭೆ
ಬೆಂಗಳೂರು: ಅಖಿಲ ಕರ್ನಾಟಕ ಕೊರಮರ ಸಂಘದ ವತಿಯಿಂದ ಇಂದು ನಗರದ ಜರ್ನಲಿಸ್ಟ್ ಕಾಲೋನಿಯ ಕೊರಮರ ಸಂಘದ ಹಾಸ್ಟೆಲ್ ನಲ್ಲಿ ರಾಜ್ಯ ಸಮಿತಿಯ ಸಭೆ ಆಯೋಜಿಸಲಾಗಿತ್ತು.
ಅಖಿಲ ಕರ್ನಾಟಕ ಕೊರಮರ ಸಂಘದ ರಾಜ್ಯಾಧ್ಯಕ್ಷ ಜಿ.ಮಾದೇಶ್ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಸಮಿತಿಯ ಸಭೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕೊರಮ ಸಮುದಾಯದ ನೂರಾರು ಮುಖಂಡರು ಭಾಗವಹಿಸಿದ್ದರು.
ಇತ್ತೀಚೆಗೆ ನಡೆದ ಕೊರಮರ ಸಂಘದ ಚುನಾವಣೆ ಹಿನ್ನೆಲೆಯಲ್ಲಿ ಸಭೆಯಲ್ಲಿ ವಾಗ್ವಾದ ನಡೆಯಿತು. ಕಾನೂನು ರೀತಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆದಿಲ್ಲ ಎಂದು ಕೆಲವರು ಅಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಂಘದ ಅಧ್ಯಕ್ಷ ಮಾದೇಶ್, ಮುಂದಿನ ದಿನಗಳಲ್ಲಿ ಕಾನೂನು ರೀತಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಲಾಗುವುದೆಂದು ತಿಳಿಸಿದ್ದಾರೆ.
ಈ ವೇಳೆ ಸಂಘದ ಅಧ್ಯಕ್ಷ ಮಾದೇಶ್ ಮಾತನಾಡಿ, ಕೊರಮ ಸಮುದಾಯದ ಹಾಸ್ಟೆಲ್ ಕೋವಿಡ್ ಸಂದರ್ಭದಲ್ಲಿ ಮಾತ್ರ ನಿಲ್ಲಿಸಲಾಗಿತ್ತು. ಅದನ್ನು ಹೊರತು ಪಡಿಸಿ ಮತ್ಯಾವತ್ತು ನಿಂತಿಲ್ಲ. ಆದರೂ ಸಮುದಾಯದ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಒಂದು ರೂ. ಭ್ರಷ್ಟಾಚಾರ ಮಾಡಿಲ್ಲ. ನಾನೇನಾದ್ರು ಭ್ರಷ್ಟಾಚಾರ ಮಾಡಿರುವುದರ ಕುರಿತು ಸಾಕ್ಷಿ ಸಮೇತ ಸಾಬೀತು ಪಡಿಸಿದರೆ ನಾನು ಈ ಕೂಡಲೇ ತಲೆ ಬಾಗಿಸಿ ಸಂಘದಿಂದ ಹೊರ ನಡೆಯುತ್ತೇನೆ ಎಂದು ಅವರು ಸವಾಲು ಹಾಕಿದ್ದಾರೆ.
ಅಖಿಲ ಕರ್ನಾಟಕ ಕೊರಮರ ಸಂಘ ಪಾರದರ್ಶಕವಾಗಿದೆ. ಯಾರೂ ಬೇಕಾದರು ಪರಿಶೀಲಿಸಬಹುದು. ಮುಂದೆಯೂ ಕೊರಮರ ಸಂಘ ಸಮಾಜದಲ್ಲಿ ಮಾದರಿಯಾಗಿ ನಡೆದುಕೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊರಮಯೆಂದು ಹೆಮ್ಮೆಯಿಂದ ಹೇಳಿ: ಕೊರಮಯೆಂದು ಹೇಳಿಕೊಳ್ಳಲು ನಾಚಿಕೆ ಪಡಬೇಡಿ.
ಜನಗಣತಿ ಸಂದರ್ಭದಲ್ಲಿ ಕೊರಮ ಸಮುದಾಯವರು ತಮ್ಮ ಜಾತಿಯನ್ನು ಕೊರಮಯೆಂದು ನಮೂದಿಸಿಯೆಂದು ಸಂಘದ ಅಧ್ಯಕ್ಷ ಮಾದೇಶ್ ಮನವಿ ಮಾಡಿದ್ದಾರೆ.
ಈ ವೇಳೆ ಸಂಘದ ಗೌರವಾಧ್ಯಕ್ಷ ಮಲ್ಲೇಪುರಂ ಜಿ.ವೆಂಕಟೇಶ್, ಕೊರಮರ ಸಂಘದ ಜಂಟಿ ಕಾರ್ಯದರ್ಶಿ ಮುನಿರಾಮು, ಸಮಾಜದ ಮುಖಂಡ ಮೋಹನ್ ರಾಜ್, ಧನಂಜಯ್, ಕಾಂಗ್ರೆಸ್ ಮುಖಂಡ ವೆಂಕಟೇಶ್, ಅಜಿತ್ ಕುಮಾರ್, ಆನೇಕಲ್ ತಾಲ್ಲೂಕಿನ ಸೋಮಣ್ಣ, ಲಕ್ಷ್ಮಿ ನಾರಾಯಣ, ಕಂದಕುಮಾರ್, ಲೋಕೇಶ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.