ಶಹಾಬಾದ : ನಗರಸಭೆಯ ಅಧಿಕಾರಿಗಳ ಭ್ರಷ್ಟಾಚಾರವನ್ನು ಖಂಡಿಸಿ ಶಹಾಬಾದ ತಾಲೂಕ ಹೋರಾಟ ಸಮಿತಿ ವತಿಯಿಂದ ನಗರಸಭೆ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮಾತನಾಡಿ, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಸರಿಯಾದ ಸಮಯಕ್ಕೆ ಬರುವುದಿಲ್ಲ, ಸಾರ್ವಜನಿಕರು ಕೆಲಸಕ್ಕಾಗಿ ನಗರಸಭೆಗೆ ಬಂದರೆ ಇಲ್ಲಿನ ಅಧಿಕಾರಿಗಳು ಪ್ರತಿಯೊಂದು ಕೆಲಸಕ್ಕೆ ಲಂಚದ ಬೇಡಿಕೆ ಇಡುತ್ತಾರೆ, ಪೌರಕಾರ್ಮಿಕರ ಬೆಳಗಿನ ಉಪಹಾರ ಶುಚಿತ್ವ ಹಾಗೂ ಪೌಷ್ಟಿಕತೆ ಯಿಂದ ಕೂಡಿರುವುದಿಲ್ಲ, ಕಳಪೆ ಮಟ್ಟದ ಉಪಹಾರ ಸರಬರಾಜು ಮಾಡುತ್ತಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು
ನಗರದಲ್ಲಿ ವಿದ್ಯುತ್ ದುರಸ್ತಿ ಮತ್ತು ಸಲಕರಣೆಗಾಗಿ ಸುಮಾರು 16-18 ತಿಂಗಳಿಂದ ಟೆಂಡರ್ ನೀಡದೆ, ತಿಂಗಳಿಗೆ ಎರಡು ಲಕ್ಷ ರೂಪಾಯಿ ಪಾವತಿಸುತ್ತಿದ್ದಾರೆ. ಆಸ್ತಿ ವರ್ಗಾವಣೆ ಹಾಗೂ ಖಾತಾ ಪ್ರತಿಗಾಗಿ ಸಾವಿರಾರು ರೂಪಾಯಿ ತೆಗೆದುಕೊಂಡು ಸುಮಾರು 5-6 ತಿಂಗಳು ಗಳ ನಂತರ ಪತ್ರಗಳು ಕೊಡುತ್ತಾರೆ.
ನಗರಸಭೆಯ ಕರ್ತವ್ಯ ನಿರ್ವಹಣೆಗಾಗಿ ಅಧಿಕಾರಿಗಳಿಗೆ ಎಲ್ಲೋ ಬೋರ್ಡ್ ಬದಲಾಗಿ, ವೈಟ್ ಬೋರ್ಡ್ 2 ಕಾರುಗಳನ್ನ ಬಾಡಿಗೆಗೆ ಪಡೆದುಕೊಂಡು ಕಾನೂನು ಬಾಹಿರವಾಗಿ ಸಿಕ್ಕಾಪಟ್ಟೆ ಬಿಲ್ಗಳನ್ನು ಸೃಷ್ಟಿಸಿದ್ದಾರೆ. ನಗರಸಭೆಗೆ ಹಣವನ್ನು ವಂಚಿಸುವದರ ಜತೆಗೆÉ ವಿಶೇಷವಾಗಿ ಈ ಕಾರಿನ ಮಾಲಕರು ನಗರಸಭೆಯ ಸಿಬ್ಬಂದಿಗಳೇ ಆಗಿರುವದು ಆಶ್ಚರ್ಯಕರ ಸಂಗತಿಯಾಗಿದೆ ಎಂದು ದೂರಿದರು.
ಅಲ್ಲದೇ ಹತ್ತಾರು ಬೇಡಿಕೆಗಳ ಮನವಿ ಪತ್ರವನ್ನು ಮಾನ್ಯ ತಹಶೀಲ್ದಾರ್ ರ ಮುಖಾಂತರ ಮಾನ್ಯ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.
ಸತ್ಯಾಗ್ರಹದಲ್ಲಿ ಬಿಎಸ್ಪಿ ಜಿಲ್ಲಾ ಕಾರ್ಯದರ್ಶಿ ಶೇಖ ಬಾಬು ಗೋವಾ, ಕದಸಂಸ ಜಿಲ್ಲಾ ಸಂ ಬಸವರಾಜ ಮಯೂರ, ಬಿಎಸ್ಪಿ ಅಧ್ಯಕ್ಷ ಪುನಿತ್ ಹಳ್ಳಿ, ಮುಖಂಡ ಶಿವಶಾಲ ಪಟ್ಟಣಕರ, ಕಾಂಗ್ರೆಸ್ ನ ಮಹ್ಮದ ಮಸ್ತಾನ, ಕದಸಂಸ ಸಂಚಾಲಕ ಸತೀಶ ಕೋಬಾಳಕರ, ಸಿಐಟಿಯು ನ ಕಾರ್ಯದರ್ಶಿ ನಾಗಪ್ಪ ರಾಯಚೂರಕರ, ಬಿಎಸ್ಪಿ ಕಾರ್ಯದರ್ಶಿ ಆಂಜನೇಯ ಕುಸಾಳೆ, ನರಸಿಂಹಲು ರಾಯಚೂರಕರ, ಮಹೇಬೂಬ ಗೋಗಿ, ಅ. ಜಬ್ಬಾರ್ ಇದ್ದರು.