ಕಲಬುರಗಿ: ಕೆಎಟಿಯಲ್ಲಿ ಸುತ್ತೋಲೆ ರದ್ದತಿಯಿಂದ 371ನೇ ಜೇ ಕಲಂ ಅಡಿ ಆಯ್ಕೆಯಾದ ನೂರಾರು ಎಇ,ಜೆಇ ಅಭ್ಯರ್ಥಿಗಳ ಜ್ವಲಂತ ಸಮಸ್ಯೆಯ ಬಗ್ಗೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ನೇತೃತ್ವದ ನೂರಾರು ಫಲಾನುಭವಿ ಅಭ್ಯರ್ಥಿಗಳ ನಿಯೋಗಕ್ಕೆ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ ಪಾಟೀಲರವರು ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ.
ಗ್ರಾಮೀಣ ಅಭಿವೃದ್ಧಿ ಮತ್ತು ನೈರ್ಮಲೀಕಣ ಇಲಾಖೆಯಡಿ ಕೆಪಿಎಸ್ಸಿಯಿಂದ ನಡೆದ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕದ ನೂರಾರು ಅಭ್ಯರ್ಥಿಗಳು ಎಇ,ಜೆಇ ಹುದ್ದೆಗಳಿಗೆ ಆಯ್ಕೆಯಾಗಿದ್ದರು. ನೇಮಕಾತಿ ಸುತ್ತೋಲೆಯಲ್ಲಿಯ ಲೋಪದಿಂದ ಕಲ್ಯಾಣ ಕರ್ನಾಟಕದಿಂದ ಆಯ್ಕೆಯಾದ ನೂರಾರು ಅಭ್ಯರ್ಥಿಗಳು ತಮ್ಮ ಹುದ್ದೆಗಳು ಕಳೆದುಕೊಳ್ಳುವ ಸ್ಥಿತಿ ಏರ್ಪಟ್ಟಿತು.
ಎತನ್ಮದ್ಯೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಎಚ್ಚೆತ್ತು ಕೊಂಡು ಫಲಾನುಭವಿಗಳ ಮನವಿಗೆ ಸ್ಪಂದಿಸಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರ ನೇತೃತ್ವದಲ್ಲಿ ಫಲಾನುಭವಿ ಅಭ್ಯರ್ಥಿಗಳ ಸಭೆ ನಡೆಸಿ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡಲು ಹೋರಾಟದ ರೂಪುರೇಷೆಗಳನ್ನು ಹಮ್ಮಿಕೊಂಡಿರುವಂತೆ, ಮೊದಲನೇ ಹಂತವಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆರವರ ಕಛೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಲಾಯಿತು.
ಅದರಂತೆ 371ನೇ ಜೇ ಕಲಂ ತಿದ್ದುಪಡಿಯ ಅನುಷ್ಠಾನ ಸಮಿತಿಯ ಸದಸ್ಯರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ ಪಾಟೀಲರವರ ನಿವಾಸಕ್ಕೆ ಭೇಟಿ ನೀಡಿ ಅವರೊಂದಿಗೆ ವಿವರವಾಗಿ ಚರ್ಚಿಸಿ ಮನವಿ ಪತ್ರ ಸಲ್ಲಿಸಲಾಯಿತು.ಇದಕ್ಕೆ ತಕ್ಷಣ ಸ್ಪಂದಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾಲಮಿತಿಯಲ್ಲಿ ಮತ್ತು ಸಮಾರೋಪಾದಿಯಲ್ಲಿ ಕ್ರಮ ಕೈಗೊಳ್ಳಲು ಆದೇಶ ನೀಡಿದರು ಹಾಗೂ ಈ ವಿಷಯಕ್ಕೆ ನ್ಯಾಯ ದೊರಕಿಸಿಕೊಡುವ ಬಗ್ಗೆ ಬಲವಾದ ಭರವಸೆ ನೀಡಿದರು.
ನಿಯೋಗದಲ್ಲಿ ಫಲಾನುಭವಿ ಅಭ್ಯರ್ಥಿಗಳ ಮುಖಂಡರಾದ ವಿನೋದಕುಮಾರ,ದಾವಲ್ ಅರ್ಜುಣಗಿ, ಸುನೀಲ್ ಕುಮಾರ,ಅಕ್ಷ್ಮೀ, ಅಶ್ವಿನಿ, ಮೆಹಬೂಬ ಸೇರಿದಂತೆ ನೂರಾರು ಜನ ಅಭ್ಯರ್ಥಿಗಳು ಮತ್ತು ಸಮಿತಿಯ ಮುಖಂಡರು ಉಪಸ್ಥಿತರಿದ್ದರು.