ಸುರಪುರ: ನಗರದ ಹಸನಾಪುರ ಯುಕೆಪಿ ಕ್ಯಾಂಪ್ಲ್ಲಿರುವ ಕಾರ್ಯನಿರ್ವಾಹಕ ಅಭಿಯಂತರರು ಹೊಲಗಾಲುವೆ ವಿಭಾಗ ಸಂಖ್ಯೆ-2ರ ಕಚೇರಿಯನ್ನು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ವರ್ತಿ ಗ್ರಾಮಕ್ಕೆ ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸಾಮೂಹಿಕ ಸಂಘಟನೆಗಳ ವೇದಿಕೆಯಿಂದ ನಗರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ,ನಮ್ಮ ಹಸನಾಪುರ ಕ್ಯಾಂಪ್ನ ಹೊಲಗಾಲುವೆ ಸಂಖ್ಯೆ-2ರ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯನ್ನು ಈಗ ಇಚಿಡಿ ತಾಲುಕಿನ ವರ್ತಿ ಗ್ರಾಮಕ್ಕೆ ಸ್ಥಳಾಂತರಿಸಿರುವುದು ಈ ಭಾಗದ ರೈತರಿಗೆ ಮಾಡುತ್ತಿರುವ ದೊಡ್ಡ ಅನ್ಯಾಯವಾಗಿದೆ ಎಂದರು.
ಅಲ್ಲದೆ ಇ ಕಚೇರಿಯಿಂದ ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ 8 ತಾಲೂಕಿನ ರೈತರ ಜಮೀನುಗಳಿಗೆ ನೀರು ಬರಲು ಈ ಕಚೇರಿ ಕಾರ್ಯ ತುಂಬಾ ಅವಶ್ಯಕವಾಗಿದೆ,ಈಗ ಇದನ್ನು ಸ್ಥಳಾಂತರಿಸುವ ಮೂಲಕ ರೈತರ ಬದುಕಿನ ಜೊತೆ ಸರಕಾರ ಚೆಲ್ಲಾಟವಾಡುತ್ತಿದೆ,ಕೂಡಲೇ ಕಚೇರಿ ಸ್ಥಳಾಂತರ ನಿಲ್ಲಿಸಬೇಕು ಇಲ್ಲವಾದಲ್ಲಿ ಮುಂದೆ ಈ ಭಾಗದ ಎಲ್ಲಾ ಸಂಘಟನೆಗಳು ಉಗ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಸ್ಥಳಕ್ಕೆ ಮಸರಕಲ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಗೋಪಾಲಕರಷ್ಣ ಅವರು ಆಗಮಿಸಿ ಭೀಮರಾಯನಗುಡಿಯ ಕಾಡಾ ಕಚೇರಿಯ ಆಡಳಿತಾಧಿಕಾರಿಗೆ ಬರೆದ ಮನವಿ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ,ತಾಲೂಕು ಅಧ್ಯಕ್ಷ ಹಣಮಂತ್ರಾಯ ಚಂದಲಾಪುರ,ಸಾಹೇಬಗೌಡ ಮದಲಿಂಗನಾಳ,ವೆಂಕಟೇಶ ಬೇಟೆಗಾರ,ಮಲ್ಲಯ್ಯ ಕಮತಗಿ,ದೇವಿಂದ್ರಪ್ಪಗೌಡ ಮಾಲಗತ್ತಿ,ಶಿವಲಿಂಗ ಹಸನಾಪುರ,ಖಾಜಾ ಅಜ್ಮೀರ್,ಭೀಮಣ್ಣ ತಿಪ್ಪನಟಗಿ,ತಿಪ್ಪಣ್ಣ ಜಂಪಾ,ಭೀಮನಗೌಡ ಕರ್ನಾಳ,ವೆಂಕಟೇಶ ಕುಪಗಲ್,ದೇವಪ್ಪ ತಿಪ್ಪನಟಗಿ,ಲೋಹಿತಕುಮಾರ ಮಂಗಿಹಾಳ,ನಾಗಪ್ಪ ಕುಪಗಲ್,ನಿಂಗನಗೌಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.