ಕಲಬುರಗಿ: ಲೋಕಸಭೆ ಚುನಾವಣೆಯ ಮತ ಎಣಿಕೆ ಇದೇ ಜೂನ್ 4 ರಂದು ಗುಲಬರ್ಗಾ ವಿ.ವಿ.ಯಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಶನಿವಾರ ಕಲಬುರಗಿ ಡಿ.ಸಿ. ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಬಿ.ಪೌಜಿಯಾ ತರನ್ನುಮ್ ಅವರು ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿದರು.
ಲೋಕಸಭೆ ಚುನಾವಣೆ ಘೋಷಣೆಯಾದ ದಿನದಿಂದ ಇದೂವರೆಗಿನ ಸಗಕಾರಕ್ಕೆ ದನ್ಯವಾದ ತಿಳಿಸಿದ ಅವರು ಜೂನ್ 4ರ ಮತ ಎಣಿಕೆ ಕಾರ್ಯ ಸಹ ಶಾಂತಿಯುತವಾಗಿ ನಡೆಯಲು ಎಲ್ಲಾ ರಾಜಕೀಯ ಪಕ್ಷಗಳು ಸಹಕರಿಸಬೇಕೆಂದು ಮನವಿ ಮಾಡಿದರು.
ಜೂನ್ 4 ರಂದು ಬೆಳಿಗ್ಗೆ 6 ಗಂಟೆಗೆ ಸ್ಟ್ರಾಂಗ್ ರೂಂ ತೆರೆಯಲಾಗುತ್ತಿದ್ದು, ಅಭ್ಯರ್ಥಿ ಅಥವಾ ಅವರ ಚುನಾವಣಾ ಏಜೆಂಟ್ ಆಗಮಿಸಬಹುದಾಗಿದೆ. ಬೆಳಿಗ್ಗೆ 8 ಗಂಟೆಗೆ ಗುಲಬರ್ಗಾ ವಿ.ವಿ. ಯ ವಿವಿಧ ಕಟ್ಟಡದಲ್ಲಿ ಲೋಕಸಭಾ ಕ್ಷೇತ್ರದ ಎಲ್ಲ 8 ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಆರಂಭವಾಗಲಿದೆ ಎಂದರು.
ಪ್ರತಿ ವಿಧಾನಸಭಾ ಎಣಿಕೆ ಹಾಲ್ ನಲ್ಲಿ 14 ಟೇಬಲ್ ಹಾಕಲಾಗುತ್ತದೆ. ಪ್ರತಿ ಟೇಬಲ್ಗೆ ಓರ್ವ ಎಣಿಕೆ ಮೇಲ್ವಿಚಾರಕರು, ಓರ್ವ ಎಣಿಕೆ ಸಹಾಯಕರು ಹಾಗೂ ಓರ್ವ ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದ್ದು, ಅವರಿಗೆ ತರಬೇತಿ ಸಹ ನೀಡಲಾಗಿದೆ. ಪ್ರತಿ ಟೇಬಲ್ಗಳಿಗೆ ಓರ್ವ ಕೌಂಟಿಂಗ್ ಏಜೆಂಟ್ ಅಭ್ಯರ್ಥಿ ನೇಮಿಸಬಹುದಾಗಿದೆ. ಸದರಿ ಕೌಂಟಿಂಗ್ ಏಜೆಂಟ್ಗಳು ಮತ ಎಣಿಕೆ ಕೇಂದ್ರಕ್ಕೆ ಪೆನ್, ಸಿಂಪಲ್ ಕ್ಯಾಲ್ಕುಲೇಟರ್ ಹಾಗೂ ಪೇಪರ್ ಮಾತ್ರ ತರಲು ಅವಕಾಶ ನೀಡಲಾಗಿದೆ ಎಂದರು.
ಮೋಬೈಲ್ ಫೋನ್ ಬ್ಯಾನ್: ಮತ ಎಣಿಕೆ ಕೇಂದ್ರಕ್ಕೆ ಹಾನಿಕಾರಕ ಸೇವನೆಗಳಾದ ವಿವಿಧ ರೀತಿಯ ತಂಬಾಕು, ಗುಟಕಾ, ಬೀಡಿ, ಸಿಗರೇಟ್, ಬೆಂಕಿ ಪೊಟ್ಟಣ, ಲೈಟರ್ ಹಾಗೂ ಮದ್ಯಪಾನಗಳು, ವಿದ್ಯುನ್ಮಾನ ಯಂತ್ರಗಳಾದ ಸ್ಮಾರ್ಟ್ ವಾಚ್, ಮೋಬೈಲ್ ಫೋನ್ ಹಾಗೂ ಲ್ಯಾಪಟಾಪ್ ಹಾಗೂ ಮಾರಕಾಸ್ತ್ರಗಳಾದ ಗನ್, ಖಡ್ಗ, ಚಾಕು, ಚೂರಿ ಇತರೆ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದ್ದು, ಮತ ಎಣಿಕೆ ಕೇಂದ್ರಕ್ಕೆ ಇವುಗಳನ್ನು ತೆಗೆದುಕೊಂಡು ಬರುವಂತಿಲ್ಲ ಎಂದು ರಾಜಕೀಯ ಪಕ್ಷಗಳ ಮುಖಂಡರಿಗೆ ತಿಳಿಸಿದರು.
ಎಣಿಕೆ ಕೇಂದ್ರ ಸುತ್ತ 144 ಜಾರಿ: ಮತ ಎಣಿಕೆ ದಿನದಂದು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮತಗಟ್ಟೆ ಸುತ್ತಮುತ್ತ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ-1973ರ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಅಲ್ಲದೆ ಜೂನ್ 3ರ ಮಧ್ಯರಾತ್ರಿ 12 ಗಂಟೆಯಿಂದ ಜೂನ್ 4ರ ಮಧ್ಯರಾತ್ರಿ 12ರ ವರೆಗೆ ಮದ್ಯ ಮಾರಾಟ ಸಹ ನಿಷೇಧಿಸಲಾಗಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ, ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಮೀನಾಕ್ಷಿ ಆರ್ಯ ಇದ್ದರು.