ಕಲಬುರಗಿ: ಹಿಂದಿನ ಕಾಲದಲ್ಲಿ ದುಡ್ಡ ದೊಡ್ಡಪ್ಪ, ಇಂದಿನ ಕಾಲಮಾನದಲ್ಲಿ ಜ್ಞಾನ ಅದಕ್ಕೂ ದೊಡ್ಡದು. ಹೀಗಾಗಿ, ಜ್ಞಾನ ಸಂಪಾದನೆ ಜೀವನದ ಗುರಿಯಾಗಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ಮಂಗಳವಾರ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಎಲ್ಲ ಸಂಪತ್ತಿಗಿಂತ ಜ್ಞಾನ ಸಂಪತ್ತು ಮಿಗಿಲಾಗಿದ್ದು, ಸತತ ಅಧ್ಯಯನ ಮತ್ತು ಪರಿಶ್ರಮದಿಂದ ಅತ್ಯುನ್ನತ ಹುದ್ದೆ ಪಡೆದುಕೊಳ್ಳಬಹುದು. ಆದರೆ, ಇಂದಿನ ದಿನಗಳಲ್ಲಿ ಯುವಕರು ಮೊಬೈಲ್, ಸಾಮಾಜಿಕ ಜಾಲತಾಣ, ರೀಲ್ಸ್ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ.
ಇದೆಲ್ಲ ಬಿಟ್ಟು ಓದುವುದರತ್ತ ಗಮನ ಕೊಡಬೇಕು ಎಂದು ಸಲಹೆ ನೀಡಿದರು. ನಾನೂ ಕೂಡ ಹಳ್ಳಿಯ ರೈತ ಕುಟುಂಬದಿಂದ ಬಂದವನು. ಕನ್ನಡ ಮಾಧ್ಯಮದಲ್ಲಿ ಓದಿ, ಇವತ್ತು ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದೇನೆ. ನಾನು ಬಡವ, ಕನ್ನಡ ಮಾಧ್ಯಮದಲ್ಲಿ ಓದಿದ್ದೇನೆ ಭಯವನ್ನು ಬದಿಗಿರಿಸಬೇಕು. ಛಲದಿಂದ ನಿರಂತರ ಕಠಿಣ ಶ್ರಮಪಟ್ಟು ಅಧ್ಯಯನ ಮಾಡಿದರೆ ಕೆಎಎಸ್, ఐఎఎనా ಪರೀಕ್ಷೆಗಳನ್ನು ಪಾಸ್ ಮಾಡಬಹುದು ಎಂದರು.
ಸ್ಲಂ ಜನಾಂದೋಲನ ಕರ್ನಾಟಕದ ನರಸಿಂಹ ಮೂರ್ತಿ ಮಾತನಾಡಿ, ಇಂದು ಜಗತ್ತು ಬೌದ್ಧಿಕ ಜ್ಞಾನಕ್ಕೆ ಮಹತ್ವ ನೀಡುತ್ತಿದೆ. ಎಲ್ಲಕಡೆ ಎಐ (ಕೃತಕ ಬುದ್ಧ ಮತ್ತೆ) ತನ್ನ ಪ್ರಭಾವ ಬೀರುತ್ತಿದೆ. ಇಂತಹ ವೇಳೆ ನಾವು ಸ್ಲಂನಿಂದ ಬಂದಿದ್ದೇವೆ, ಕನ್ನಡ ಮಾಧ್ಯಮದಲ್ಲಿ ಕಲಿತ್ತಿದ್ದೇವೆ ಎಂದು ಹೇಳಿದರು.
ಸ್ಲಂ ಜನಾಂದೋಲನ ಕರ್ನಾಟಕದ ರೇಣುಕಾ ಸರಡಗಿ ಪ್ರಾಸ್ತಾವಿಕ ಮಾತನಾಡಿದರು. 2023-24 ಸಾಲಿನಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸ್ಟೇಷನ್ ಬಜಾರ್ ಪಿಐ ಶಕೀಲ್ ಅಹ್ಮದ್, ಉಮೇಶ ಚವ್ಹಾಣ, ದೀಪಕ್, ಲಕ್ಷ್ಮಿಕಾಂತ ಹುಬ್ಬಿ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಶರಣ ಅಂಗಡಗಿ, ಜನಾರ್ಧನ ಸೇರಿ ಹಲವರು ಉಪಸ್ಥಿತರಿದ್ದರು.