ವಕ್ಫ್ ಬೋರ್ಡ್ ಆಸ್ತಿ ಒತ್ತುವರಿ ನಿಯಂತ್ರಣಕ್ಕೆ ಕಂಪೌಂಡ್ ನಿರ್ಮಾಣ; ಬಿ.ಜೆಡ್.ಜಮೀರ್ ಅಹ್ಮದ್ ಖಾನ್

0
105

ಕಲಬುರಗಿಯಲ್ಲಿ ವಕ್ಫ್ ಅದಾಲತ್

ಕಲಬುರಗಿ; ರಾಜ್ಯದಲ್ಲಿರುವ ವಕ್ಫ್ ಆಸ್ತಿ ಸಂರಕ್ಷಣೆಗೆ ಮಂಡಳಿ ಮುಂದಾಗಿದ್ದು, ಪ್ರತಿ ಆಸ್ತಿ ಸುತ್ತ ರಾಜ್ಯ ವಕ್ಫ್ ಮಂಡಳಿಯಿಂದ ಕಂಪೌಂಡ್ ನಿರ್ಮಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್ ಹಾಗೂ ವಸತಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಹೇಳಿದರು.

ಬುಧವಾರ ಕಲಬುರಗಿ ನಗರದ ರಿಂಗ್ ರಸ್ತೆಯಲ್ಲಿರುವ ವಿಂಟೇಜ್ ಫಂಕ್ಷನ್ ಹಾಲ್‌ನಲ್ಲಿ ಆಯೋಜಿಸಿದ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ವಕ್ಫ್ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ರಾಜ್ಯದಲ್ಲಿ 1.08 ಲಕ್ಷ ಎಕರೆ ವಕ್ಫ್ ಆಸ್ತಿ ಇದ್ದು, ಇದರಲ್ಲಿ 85 ಸಾವಿರ ಎಕರೆ ಪ್ರದೇಶ ಒತ್ತುವರಿಯಾಗಿದೆ. ಕಲಬುರಗಿ ಜಿಲ್ಲೆಯಲ್ಲಿ 21,440 ಎಕರೆ ಆಸ್ತಿ ಪೈಕಿ 3,610 ಮತ್ತು ಯಾದಗಿರಿ ಜಿಲ್ಲೆಯಲ್ಲಿ 6,194 ಪೈಕಿ 123 ಎಕರೆ ಆಸ್ತಿ ಒತ್ತುವರಿಯಾಗಿದೆ. ಈ ಆಸ್ತಿಯನ್ನು ಮರಳಿ ವಕ್ಫ್ ಮಂಡಳಿಗೆ ಪಡೆಯಲೆಂದೆ ಇಂದಿಲ್ಲಿ ವಕ್ಫ್ ಅದಾಲತ್ ಆಯೋಜಿಸಿದೆ ಎಂದ ಅವರು, ಪ್ರತಿ ವಕ್ಫ್ ಆಸ್ತಿ ಗುರುತಿಸಲು ಹಸಿರು ಬಣ್ಣದಿಂದ ಸುತ್ತು ಆವರಣ ಗೋಡೆ ನಿರ್ಮಿಸಲಾಗುತ್ತದೆ ಎಂದರು.

ವಕ್ಫ್ ಆಸ್ತಿ ಎಂದರೆ ಅದು ಅಲ್ಲಾನ ಆಸ್ತಿ ಇದನ್ನು ಯಾರು ಅತಿಕ್ರಮಿಸಬಾರದು. ಆಸ್ತಿ ಸಂರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಕರೆ ನೀಡಿದ ಸಚಿವ ಜಮೀರ್ ಅಹ್ಮದ್ ಖಾನ್, ಅಲ್ಲಾನ ಆಸ್ತಿ ನುಂಗಿದವರಿಗೆ ಜೀವನದ ಕೊನೆ ದಿನಗಳು ತುಂಬಾ ಕಷ್ಟದಿಂದ ಕೂಡಿರಲಿವೆ ಎಂದು ಮಾರ್ಮಿಕವಾಗಿ ನುಡಿದರು.

ಇಂದಿನ ವಕ್ಫ್ ಅದಾಲತ್ ಕಾರ್ಯಕ್ರಮಕ್ಕೆ ಪೂರಕವಾಗಿ ಕಳೆದ 10-15 ದಿನಗಳಿಂದ ದೂರುಗಳು ಪಡೆಯಲಾಗಿದ್ದು, ಇದರಲ್ಲಿ ಕಲಬುರಗಿ ಜಿಲ್ಲೆಯಿಂದ 368 ಅರ್ಜಿ ಸ್ವೀಕರಿಸಿದ್ದು, ಇದರಲ್ಲಿ 100 ಒತ್ತುವರಿ, 55 ಖಬರಸ್ತಾನ್ ಬೇಡಿಕೆ ಹಾಗೂ ಇತರೆ ವಿಷಯಕ್ಕೆ 213 ಸೇರಿವೆ. ಅದೇ ರೀತಿ ಯಾದಗಿರಿ ಜಿಲ್ಲೆಯಿಂದ ಸಲ್ಲಿಕೆಯಾದ 82 ಅರ್ಜಿಯಲ್ಲಿ 38 ಅರ್ಜಿ ಒತ್ತುವರಿ, 33 ಖಬರಸ್ತಾನ್ ಬೇಡಿಕೆ ಹಾಗೂ ಉಳಿದ 11 ಅರ್ಜಿಗಳು ಭೂಮಿ ಮಂಜೂರಾತಿ, ಖಾತಾ ಅಪಡೇಟ್, ಸರ್ವೇ ಸಮಸ್ಯೆಗಳಿಗೆ ಸಂಬಂಧಿಸಿವೆ. ಒಟ್ಟಾರೆ ಈ 450 ಅರ್ಜಿಗಳ ಬಗ್ಗೆ ಗುರುವಾರ ಇಲ್ಲಿನ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಚರ್ಚಿಸಿ ಒಂದು ತಿಂಗಳೊಳಗೆ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದ ಅವರು, ಈ ಹಿಂದೆ ಬೀದರ ಸೇರಿ ರಾಜ್ಯದ ಐದು ಕಡೆ ನಡೆಸಿದ ಅದಾಲತ್‌ನಿಂದ 507 ಆಸ್ತಿ ಖಾತೆಯೊಂದಿಗೆ ವಾಪಸ್ ಮಂಡಳಿಗೆ ಪಡೆಯಲಾಗಿದ್ದು, 382 ಅರ್ಜಿ ಪ್ರಗತಿಯಲ್ಲಿವೆ ಎಂದರು.

ರಾಜ್ಯದ ಪ್ರತಿ ತಾಲೂಕಿನಲ್ಲಿ ಮನೆ ಇಲ್ಲದ ಬಡ ಮುಸ್ಲೀಂ ಜನರಿಗೆ ವಕ್ಫ್ ಮಂಡಳಿಯಿಂದಲೆ ವಸತಿ ಭಾಗ್ಯ ಕಲ್ಪಿಸುವ ಯೋಜನೆ ಮಂಡಳಿ ಹಾಕಿಕೊಂಡಿದೆ. ಇಲ್ಲಲ್ಲದೆ ಮೌಲ್ವಿ, ಇಮಾಮ್‌ಗಳಿಗೆ ಬಾಡಿಗೆ ಆಧಾರದ ಮೇಲೆ ಮನೆ ನೀಡಲು ನಿರ್ಧರಿಸಿದೆ ಎಂದು ವಸತಿ ಖಾತೆ ಸಹ ಹೊಂದಿರುವ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.

ಜಿಲ್ಲೆಗೆ ಅಂಬುಲೆನ್ಸ್,ತಾಲೂಕಿಗೆ ಫ್ರೀಜರ್: ರಾಜ್ಯ ವಕ್ಫ್ ಮಂಡಳಿ ಮುಸ್ಲೀಂ ಸಮುದಾಯದ ಒಳಿತಿಗೆ ಶ್ರಮಿಸುತ್ತಿದ್ದು, ಸಮುದಾಯದ ಜನರು ಆರೋಗ್ಯ ಸಮಸ್ಯೆ ಕಂಡಾಗ ತುರ್ತಾಗಿ ವೈದ್ಯಕೀಯ ನೆರವು ಪಡೆಯಲು ಅನುಕೂಲವಾಗುವಂತೆ ಜಿಲ್ಲೆಗೆ ಒಂದರಂತೆ ತಲಾ 40 ಲಕ್ಷ ರೂ. ವೆಚ್ಚದಲ್ಲಿ ಅಂಬುಲೆನ್ಸ್, ಅಂತಿಮ ಸಂಸ್ಕಾರದ ಮುನ್ನ ಮೃತದೇಹ ಸಂಸ್ಕರಿಸಿಡಲು ಪ್ರತಿ ತಾಲೂಕಿಗೆ ಒಂದರಂತೆ ಫ್ರೀಜರ್ ನೀಡಲಾಗುವುದು ಎಂದರು.

15 ಪಿ.ಯು. ಕಾಲೇಜು ಮಂಜೂರು: ಮಂಗಳವಾರ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಕ್ಫ್ ಮಂಡಳಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಕಲಬುರಗಿ, ಬೀದರ, ಕೊಪ್ಪಳ, ವಿಜಯನಗರ ಸೇರಿ 15 ಜಿಲ್ಲೆಗಳಲ್ಲಿ ಒಟ್ಟಾರೆ 47.76 ಕೋಟಿ ರೂ. ವೆಚ್ಚದಲ್ಲಿ ಪದವಿ ಪೂರ್ವ ಕಾಲೇಜು ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಇದು ಅಲ್ಪಸಂಖ್ಯಾತ ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕೆ ಸಹಕಾರಿಯಾಗಲಿದೆ. ಇನ್ನು ಬೆಂಗಳೂರಿನ ಹಜ್ ಭವನ ಹಜ್ ಯಾತ್ರೆ ಸಂದರ್ಭದಲ್ಲಿ ಒಂದು ತಿಂಗಳು ಮಾತ್ರ ಬಳಸಿಕೊಂಡು ವರ್ಷದ ಇತರೆ ದಿನಗಳು ಹಾಗೇ ಬಿಡಲಾಗುತ್ತಿತ್ತು. ಇದೀಗ ಉಳಿದ 11 ತಿಂಗಳು ಕಾಲ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಐ.ಎ.ಎಸ್., ಐ.ಪಿ.ಎಸ್. ಪರೀಕ್ಷಾ ಪೂರ್ವ ತರಬೇತಿ ನೀಡಲು ಭವನ ಬಳಸಿಕೊಳ್ಳಲು ನಿರ್ಧರಿಸಿದೆ ಎಂದರು.

ಇದಕ್ಕು ಮುನ್ನ ಪ್ರಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಕೆ.ಅನ್ವರ್ ಭಾಷಾ ಮಾತನಾಡಿ, ಇತ್ತೀಚೆಗೆ ರಾಜ್ಯದಲ್ಲಿ ನೂತನ ಸರ್ಕಾರ ಬಂದ ಮೇಲೆ ಬೆಳಗಾವಿ, ಬೀದರ, ಕಾರವಾರ, ಹುಬ್ಬಳ್ಳಿ-ಧಾರವಾಡ, ಗದಗನಲ್ಲಿ ವಕ್ಫ್ ಅದಾಲತ್ ಹಮ್ಮಿಕೊಂಡು ವಕ್ಫ್ ಆಸ್ತಿಗಳ ಸಂರಕ್ಷಣೆ ನಿಟ್ಟಿನಲ್ಲಿ ಖಾತಾ ಅಪಡೇಟ್, ಸರ್ವೇ, ಮುಟೇಷನ್ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದರು.

ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತಿಮಾ ಮಾತನಾಡಿ, ವಕ್ಫ್ ಆಸ್ತಿ ಸಂರಕ್ಷಣೆ ನಿಟ್ಟಿನಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಇಂದಿಲ್ಲಿ ಅದಾಲತ್ ಆಯೋಜಿಸಿರುವುದು ಸ್ವಾಗತಾರ್ಹ ಎಂದ ಅವರು, ಸಮುದಾಯದ ಜನರು ಶಾಂತ ರೀತಿಯಿಂದ ತಮ್ಮ ಸಮಸ್ಯೆ ಹೇಳಿಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳಬೇಕೆಂದರು.

ನಂತರ ಸಚಿವ ಜಮೀರ್ ಅಹ್ಮದ ಖಾನ್ ಅಅವರು ಕಲಬುರಗಿ ಮತು ಯಾದಗಿರಿ ಜಿಲ್ಲೆಯಿಂದ ಬಂದ ಜನರ ಅಹವಾಲು ಆಲಿಸಿ ಪ್ರತಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸದಸ್ಯ ಜಿ. ಯಕೂಬ್, ಯಾದಗಿರಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಜಹಿರುದ್ದಿನ್ ಸವೆರಾ, ವಕ್ಫ್ ಬೋರ್ಡ್ ಸಿ.ಇ.ಓ ಜಿಲಾನಿ ಮೊಕಾಶಿ, ಮಾಜಿ ಮಹಾಪೌರರಾದ ಸೈಯದ್ ಅಹ್ಮದ್, ಮುಖಂಡರಾದ ಫರಾಜ್ ಉಲ್ ಇಸ್ಲಾಂ, ಫಜಲ್ ಖಾನ್, ವಾಹೆದ್ ಅಲಿ ಫಾತೆಖಾನಿ, ಜಿಲ್ಲಾ ವಕ್ಫ್ ಅಧಿಕಾರಿಗಳಾದ ಹಜರತ್ ಅಲಿ, ಜರೀನಾ ಬೇಗಂ, ಕಲಬುರಗಿ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಜಾವೀದ್ ಕರಂಗಿ, ಕೆ.ಎಂ.ಡಿ.ಸಿ. ಕಲಬುರಗಿ ಜಿಲ್ಲಾ ವ್ಯವಸ್ಥಾಪಕ ರವಿ ದೆಹರೆ ಸೇರಿದಂತೆ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರು, ಸದಸ್ಯರು ಹಾಗೂ ಎರಡು ಜಿಲ್ಲೆಗಳ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗಿಯಾಗಿದ್ದರು. ಕಲಬುರಗಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಸೈಯದ್ ಹಬೀಬ್ ಸರ್ಮಸ್ತ್ ಸ್ವಾಗತಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here