- ಶಿವರಂಜನ್ ಸತ್ಯಂಪೇಟೆ
ಶಹಾಪುರ: ಇನ್ನೇನು ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾಗಲಿವೆ ಎನ್ನುತ್ತಿರುವಾಗಲೇ ಶಹಾಪುರ ಮತಕ್ಷೇತ್ರದಲ್ಲಿ ಕಾರ್ಯಕರ್ತರ ಪಕ್ಷಾಂತರ ಪರ್ವ ಆರಂಭವಾಗಿದೆ.
ಹಲವು ವರ್ಷಗಳಿಂದ ದರ್ಶನಾಪುರ ಕುಟುಂಬದ ಜೊತೆಗೆ ಗುರುತಿಸಿಕೊಂಡಿದ್ದ ತಾಲ್ಲೂಕಿನ ಗೋಗಿ ಗ್ರಾಮದ ಮಾಣಿಕರೆಡ್ಡಿ ಮಲ್ಹಾರ ಹಾಗೂ ಅಬ್ದುಲ್ ಭಾಷಾ ತಾಡಪಲ್ಲಿ, ವಿಜಯರೆಡ್ಡಿ ಕೊಟಗಿ ಮುಂತಾದವರು ಶಾಸಕ ದರ್ಶನಾಪುರ ವಿರುದ್ಧ ಮುನಿಸಿಕೊಂಡು ಜೆಡಿಎಸ್ ಸೇರುವ ಮೂಲಕ ದರ್ಶನಾಪುರ ಅವರಿಗೆ ಸಡ್ಡು ಹೊಡೆದು ನಿಂತಿದ್ದಾರೆ.
ಅಂತೆಯೇ ಅವರ ಹಿಂದೆ ಸುಮಾರು ೨೦೦ ಜನರು ಜೆಡಿಎಸ್ ಧ್ವಜ ಹಿಡಿಯುವ ಮೂಲಕ ಶಾಸಕ ದರ್ಶನಾಪುರರಿಗೆ ನಡುಕ ಹುಟ್ಟಿಸಿದ್ದಾರೆ ಎನ್ನಲಾಗಿದೆ.
ಉಮೇಶಗೌಡ ಮಾಲಿಪಾಟೀಲ, ಶರಣು ಮ್ಯಾಕಲ್, ರಾಜು ಗುರಡ್ಡಿ, ಶೇಖಪ್ಪ ಭೂಪತಿ, ಸೈಯದ್ ಸನಾವುಲ್ಲಾ ಹುಸೇನಿ ಕುಟುಂಬ, ಎಸ್.ಆರ್. ಹುಸೇನಿ, ಮುರ್ತುಜಾ ಹುಸೇನಿ, ರಾಘವೇಂದ್ರ, ಶಿವರಾಜ ಮಾವಿನಮರದ, ಮಲ್ಲಪ್ಪ ಬಡಿಗೇರ, ಭೀಮಣ್ಣ ಕುರಿ, ಚಂದ್ರು ಸಮೇದ ಸೇರಿದಂತೆ ಹಲವು ಪ್ರಮುಖರು ಹಾಗೂ ಅವರ ಅನುಯಾಯಿಗಳು ಜೆಡಿಎಸ್ ಸೇರಿದ್ದಾರೆ.
ಇದರಲ್ಲಿ ಹಲವರು ತಾಪಂ ಮತ್ತು ಗ್ರಾಪಂ ಮಾಜಿ ಸದಸ್ಯರುಗಳು ಇರುವುದು ಗಮನಾರ್ಹವಾಗಿದೆ. ಆದರೆ ಶಾಸಕ ದರ್ಶನಾಪುರ ಹಾಗೂ ಅವರ ಪಕ್ಷ ಸದ್ಯ ಮೌನವಹಿಸಿದೆ.
ಗ್ರಾಪಂ ಚುನಾವಣೆ ನಡೆಯುವ ವೇಳೆಯಲ್ಲಿ ನಡೆದ ಬೆಳವಣಿಗೆ ಶಾಸಕರಿಗೆ ದೊಡ್ಡ ತಲೆನೋವಾಗಿ ಪರಿಣಮಸಿದ್ದು, ಅವರ ರಾಜಕೀಯ ದಾಳ ಏನಿರಬಹುದು ಎಂಬುದು ಕುತೂಹಲದ ಸಂಗತಿಯಾಗಿದೆ.
ಈ ಮಧ್ಯೆ ಬಿಜೆಪಿಯ ಮಾಜಿ ಶಾಸಕ ಗುರು ಪಾಟೀಲ ಶಿರವಾಳ ಅವರಂತೂ ಇದ್ಯಾವುದಕ್ಕೂ ನನಗೆ ಸಂಬಂಧವೇ ಇಲ್ಲ ಎನ್ನುವಂತೆ ಗಪ್ ಚುಪ್ ಆಗಿ ಕುಳಿತಿದ್ದಾರೆ. ಹೀಗಾಗಿ ಜೆಡಿಎಸ್ ಅಭ್ಯರ್ಥಿ ಅಮೀನ್ ರೆಡ್ಟಿ ಅವರಿಗೆ ಆನೆ ಬಲ ಬಂದಂತಾಗಿದೆ ಎಂಬುದು ಸುಳ್ಳಲ್ಲ. ಆದರೆ ಜೆಡಿಎಸ್ ನ ಈ ಜೋಶ್ ಎಷ್ಟು ದಿನ ಇರುತ್ತದೆ ಕಾದು ನೋಡಬೇಕಾಗಿದೆ.