ಕಲಬುರಗಿ: ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ನೀತಿಯನ್ನು ಖಂಡಿಸಿ ದೇಶದ ರೈತರು ನಾಳೆ ಭಾರತಗ ಬಂದ್ ಗೆ ಕರೆ ನೀಡಿದ್ದು, ಕರ್ನಾಟಕ ಪೀಪಲ್ಸ್ ಫೋರಮ್, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ.
ಇಂದು ಕರ್ನಾಟಕ ಪೀಪಲ್ಸ್ ಪೋರಮ್ ಹಾಗೂ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಸಭೆಯಲ್ಲಿ ನಾಳೆ ಕರೆ ನೀಡಿರುವ ಬಂದ್ ಸಂಪೂರ್ಣ ಬೆಂಬಲ ನೀಡುವುದಾಗಿ ಸಂಸ್ಥೆಗಳ ಅಧ್ಯಕ್ಷರಾದ ಡಾ. ಮೊಹಮ್ಮದ್ ಅಜಗರ್ ಚುಲಬುಲ್ ತಿಳಿಸಿದ್ದಾರೆ.
ಕೇಂದ್ರ ಸರಕಾರ ಜನ ವಿರೋಧಿ ಕಾಯ್ದೆಗಳಾದ ಎನ್.ಆರ್.ಸಿ, ಎನ್.ಪಿ.ಆರ್, ಸಿಎಎ, ಕೃಷಿ ಮಸೂದೆ, ಕಾರ್ಮಿಕರ ಕಾಯ್ದೆಗಳು ಸೇರಿದಂತೆ ಬಹುತೇಕ ಜನ ವಿರೋಧಿ ಕರಾಳ ಕಾನೂನುಗಳು ರಚಿಸಿ ಜನ ಹಕ್ಕುಗಳನ್ನು ಕಸೆಯು ಕುತಂತ್ರಕ್ಕೆ ಕೇಂದ್ರ ಕೈಹಾಕುತ್ತಿದೆ ಎಂದು ಚುಲಬುಲ್ ಆಕ್ರೋಶ ವ್ಯಕ್ತಪಡಿಸಿದರು.
ಸಾಲದೆಂಬಂತೆ, ನ್ಯಾಯಯುತ ಬೇಡಿಕೆಗಳನ್ನಿಟ್ಟುಕೊಂಡು ಬೀದಿಗಿಳಿದಿರುವ ರೈತರ ವಿಷಯದಲ್ಲಿ ಸರ್ಕಾರ ತೋರುತ್ತಿರುವ ಅತ್ಯಂತ ಅಪ್ರಜಾತಾಂತ್ರಿಕ ನಿಲುವು, ಕೇಂದ್ರ ಸರ್ಕಾರದ ಉದ್ದೇಶವನ್ನು ಇನ್ನಷ್ಟು ಸ್ಪಷ್ಟಪಡಿಸುತ್ತದೆ. ಖಾಸಗೀಕರಣ ಮತ್ತು ವ್ಯಾಪಾರೀಕರಣದ ಪೆಡಂಭೂತ ಎಲ್ಲಾ ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಹುರಿದು ಮುಕ್ಕಿದ ಮೇಲೆ, ಈಗ ಕೃಷಿ ಕ್ಷೇತ್ರಕ್ಕೂ ದಾಂಗುಡಿ ಇಟ್ಟಿದೆ. ಈ ಹಿಂದೆ ಜಾರಿಗೆ ಬಂದ ಎಲ್ಲಾ ಜನವಿರೋಧಿ ಕಾನೂನುಗಳ ಹಾಗೆಯೇ, ಈಗಿನ ಮೂರು ಕರಾಳ ರೈತ ವಿರೋಧಿ ನೀತಿಗಳೂ ಸಹ ಕಾರ್ಪೊರೇಟ್ ಮನೆತನಗಳನ್ನು ಉದ್ದಾರ ಮಾಡುತ್ತದೆಯೇ ಹೊರತು, ಅದರಿಂದ ಜನಸಾಮಾನ್ಯರಿಗೆ ಯಾವ ಲಾಭವೂ ಆಗುವುದಿಲ್ಲ. ಇದನ್ನು ಮನದಟ್ಟು ಮಾಡಿಕೊಂಡು, ಹೋರಾಟಕ್ಕೆ ಧುಮುಕಿರುವ ಈ ದೇಶದ ರೈತರು, ನಮ್ಮೆಲ್ಲರಿಗೂ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ ಎಂದರು.
ಬಂಡವಾಳಶಾಹಿ ಹಾಗೂ ಉದ್ಯಮಿಗಳ ಪರ ಇರುವ ಕೃಷಿ ಕಾಯ್ದೆ ಹಾಗೂ ಮಸೂದೆಗಳ ವಿರುದ್ಧ ದೇಶದ ರೈತರು ಹೋರಾಟ ನಡೆಸುತ್ತಿದ್ದು, ಅನ್ನದಾತರ ಈ ಹೋರಾಟಕ್ಕೆ ಪ್ರತಿ ಒಬ್ಬರು ಕೈಜೋಡಿಸಿ ಅವರ ಧ್ವನಿಯಾಗುವ ಅಗತ್ಯವಿದೆ ಎಂದು ಅವರು ಕರೆ ನೀಡಿದರು.
ಅಬ್ದುಲ್ ರಹೀಮ್ ಮಿರ್ಚಿ, ಅಬ್ದುಲ್ ಖದೀರ್ ಘಾಸ್ಗರ್, ಆಲಮದರ್ ಜೈದಿ, ಹರೂನ್ ರಶೀದ್, ಅಬ್ದುಲ್ ವಹಾಬ್ ಅಲಂಡಿ, ಅಬ್ದುಲ್ ಅಜೀಜ್ ಅಲಿಯಾಸ್ ಹಾಜಿ, ಮಕ್ಬೂಲ್ ಅಹ್ಮದ್, ಅಬ್ದುಲ್ ಅಜೀಮ್ ಗೋಲ್ಕೊಂಡಿ ಸೇರಿದಂತೆ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.