ವಾಡಿ: ಕರಾಳ ಕಾನೂನುಗಳ ವಿರುದ್ಧ ಇಂದು (ಡಿ.೮) ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ಕರೆ ನೀಡಲಾದ ಭಾರತ ಬಂದ್ ಹೋರಾಟವನ್ನು ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ಒ) ಬೆಂಬಲ ವ್ಯಕ್ತಪಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಐಡಿಎಸ್ಒ ನಗರ ಸಮಿತಿ ಅಧ್ಯಕ್ಷ ಗೌತಮ ಪರತೂರಕರ ಹಾಗೂ ಕಾರ್ಯದರ್ಶಿ ವೆಂಕಟೇಶ ದೇವದುರ್ಗಾ, ಬಿಜೆಪಿ ಸರಕಾರದ ರೈತ ವಿರೋಧಿ ನಿಲುವು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಚ್ಚೆದೆಯ ಹೋರಾಟದ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿ ನಿಂತಿರುವ ರೈತ ಸಮುದಾಯವನ್ನು ಗೌರವಿಸಿ ಜನತೆ ಹೋರಾಟಕ್ಕೆ ಬೆಂಬಲ ಸೂಚಿಸಬೇಕು ಎಂದಿದ್ದಾರೆ.
ದೇಶದ ಜನರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ರೈತ ವಿರೋಧಿ ನೀತಿಗಳನ್ನು ಸರಕಾರ ಜಾರಿಗೆ ತರುವ ಮೂಲಕ ಕಾರ್ಪೋರೇಟ್ ಉಧ್ಯಮಪತಿಗಳ ಪರ ನಿಲುವು ಪ್ರದರ್ಶಿಸಿದೆ. ನ್ಯಾಯಯುತ ಬೇಡಿಕೆಗಳನ್ನಿಟ್ಟುಕೊಂಡು ಬೀದಿಗಿಳಿದಿರುವ ರೈತರ ವಿಷಯದಲ್ಲಿ ಸರಕಾರ ಅಪ್ರಜಾತಾಂತ್ರಿಕ ನಿಲುವು ಹೊಂದಿದೆ. ಖಾಸಗೀಕರಣ ಮತ್ತು ವ್ಯಾಪಾರೀಕರಣದ ಪೆಡಂಭೂತ ಎಲ್ಲಾ ಸರಕಾರಿ ಮತ್ತು ಸಾರ್ವಜನಿಕ ವಲಯದ ಉದ್ಯಿಮೆಗಳನ್ನು ಹರಿದು ಮುಕ್ಕಿದ ಮೇಲೆ ಈಗ ಕೃಷಿ ಕ್ಷೇತ್ರಕ್ಕೂ ಅದು ದಾಂಗುಡಿಯಿಟ್ಟಿದೆ.
ಈಗಿನ ಮೂರು ಕರಾಳ ರೈತ ವಿರೋಧಿ ನೀತಿಗಳು ಬಂಡವಾಳಶಾಹಿಗಳನ್ನು ಮಾತ್ರ ಉದ್ಧಾರ ಮಾಡುತ್ತವೆ ಎಂದು ದೂರಿದ್ದಾರೆ. ಸ್ಪೂರ್ತಿದಾಯಕ ಹೋರಾಟಕ್ಕೆ ಮುನ್ನುಡಿ ಬರೆದಿರುವ ರೈತ ಸಮುದಾಯದ ಧ್ವನಿಯಾಗಿ ಜನತೆ ಹೋರಾಟಕ್ಕೆ ಧುಮುಕಬೇಕು ಎಂದು ವಿದ್ಯಾರ್ಥಿ ನಾಯಕರು ಕರೆ ನೀಡಿದ್ದಾರೆ.