ಕಲಬುರಗಿ: ಮನುಕುಲಕ್ಕೆ ಮಾನವೀಯ ಮೌಲ್ಯಗಳನ್ನು ಬೋಧಿಸಿ ಜನರಲ್ಲಿ ಧರ್ಮ ಪ್ರಜ್ಞೆಯೊಂದಿಗೆ ಧಾರ್ಮಿಕ ಆಚರಣೆಗಳನ್ನು ಸಾರಿದ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಸರ್ಕಾರದ ವತಿಯಿಂದ ಆಚರಣೆ ಮಾಡುವಂತೆ ಜಗದ್ಗುರು ಶ್ರೀ ರೇಣುಕಾಚಾರ್ಯ ಸದ್ಭಕ್ತ ಮಂಡಳಿಯ ಪದಾಧಿಕಾರಿಗಳು ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ.ಸುನೀಲಕುಮಾರ ರವರಿಗೆ ನಿಯೋಗದ ಮೂಲಕ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.
ವಿಶ್ವ ಬಂಧುತ್ವದ ವೀರಶೈವ ಧರ್ಮವನ್ನು ಸ್ಥಾಪಿಸಿ ಪ್ರಾಚೀನ ಗ್ರಂಥವಾದ ಸಿದ್ಧಾಂತ ಶಿಖಾಮಣಿಯನ್ನು ಜನತೆಗೆ ಧಾರೆಯೆರೆದು ಸಾಮರಸ್ಯ, ಸಹಬಾಳ್ವೆ, ಸೌಹಾರ್ದತೆಯ ಬದುಕನ್ನು ಬೋಧಿಸಿದ ಜಗದ್ಗುರು ಶ್ರೀ ರೇಣುಕಾಚಾರ್ಯರ ಮೌಲ್ಯಗಳು ಇಂದಿನ ಯುವ ಪೀಳಿಗೆಗೆ ತಿಳಿಸುವ ಕಾರ್ಯ ಆಗಬೇಕಾಗಿರುವುದರಿಂದ ಸರಕಾರದ ವತಿಯಿಂದ ಜಯಂತಿ ಆಚರಣೆ ಮಾಡುವುದು ಅತ್ಯವಶ್ಯವಾಗಿದೆ ಎಂದು ಸದ್ಭಕ್ತ ಮಂಡಳಿ ಪದಾಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಜಗದ್ಗುರು ಶ್ರೀ ರೇಣುಕಾಚಾರ್ಯರ ಸರ್ಕಾರದ ವತಿಯಿಂದ ಆಚರಣೆ ಮಾಡುವ ದಿಶೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ನಿಯೋಗಕ್ಕೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರುಗಳಾದ ಬಸವರಾಜ ಮತ್ತಿಮಡು, ಬಿ.ಜಿ.ಪಾಟೀಲ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಭಾರತೀಯ ಜನತಾ ಪಕ್ಷದ ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾದ ಶಿವರಾಜ ಪಾಟೀಲ ರದ್ದೇವಾಡಗಿ ಸದ್ಭಕ್ತ ಮಂಡಳಿಯ ಗೌರವ ಅಧ್ಯಕ್ಷರಾದ ಅನೀಲಕುಮಾರ ಜಮಾದಾರ, ಅಧ್ಯಕ್ಷರಾದ ಡಾ: ಅಣವೀರಯ್ಯ ಪ್ಯಾಟಿಮನಿ, ಅಖಿಲ ಭಾರತ ವೀರಶೈವ ಮಹಾಸಭೆಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ನಾಗಲಿಂಗಯ್ಯ ಮಠಪತಿ, ಮಂಡಳಿಯ ಪದಾಧಿಕಾರಿಗಳಾದ ಬಸವರಾಜ ಕೋಲ್ಕುಂದಿ, ಶಂಭುಲಿಂಗ ಕಡಗಂಚಿ, ಬಸವರಾಜ ಚಿತಲಿ, ಸಿದ್ರಾಮಯ್ಯ ಹಿರೇಮಠ, ಶಿವರಾಜ ಪ್ಯಾಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.