ಕಲಬುರಗಿ: ನಂದಿನಿ ಹಾಲು ರೈತರ ಹಿತ ಕಾಪಾಡಲು ಆಗ್ರಹಿಸಿ ಹಾಗೂ ರಸಗೊಬ್ಬರ ಬೆಲೆ ಧಿಡೀರನೆ 700 ರೂಪಾಯಿ ಬೆಲೆ ಏರಿಕೆ ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಪ್ರಮುಖರು ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಬುಧವಾರ ಪ್ರತಿಭಟನೆ ನಡೆಸಿ ಸಲ್ಲಿಸುತ್ತಿರುವ ಮನವಿ ಪತ್ರ ಸಲ್ಲಿಸಿದರು.
ಇಡೀ ದೇಶದಲ್ಲೇ ಹೈನುಗಾರಿಕೆ ಉತ್ಪಾದನೆ ಹಾಗೂ ಸಹಕಾರಿ ಸಂಸ್ಕರಣೆ ಅನುಪಾತ ಗರಿಷ್ಠ ಪ್ರಮಾಣದಲ್ಲಿರುವ ರಾಜ್ಯದ ರೈತಾಪಿ ಹೈನುಗಾರಿಕೆಯನ್ನು ಸರ್ವನಾಶ ಮಾಡಲು, ಡೈರಿ ಕ್ಷೇತ್ರದ ಖಾಸಗಿತನ ಸಾಧಿಸಲು ,ಆಸ್ಟ್ರೇಲಿಯಾ, ಡೆನ್ಮಾರ್ಕ್, ನ್ಯೂಜಿಲೆಂಡ್ ಮುಂತಾದ ಯೂರೋಪಿಯನ್ ದೇಶಗಳ ಡೈರಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಅಮೂಲ್ ಹೆಸರಿನ ಮರೆಯಲ್ಲಿ ನಡೆಯುತ್ತಿರುವ ಬಹು ದೊಡ್ಡ ಹುನ್ನಾರವನ್ನು ಹಿಮ್ಮೆಟ್ಟಿಸಬೇಕೆಂದು ಮನವಿ ಮಾಡಿದರು.
ಲಾಭದಾಯಕ ದರವನ್ನು ನಿಗದಿಪಡಿಸುವಂತೆ ,ಸಹಕಾರಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವಂತೆ ನಿರಂತರವಾಗಿ ರಾಜ್ಯದ ಹಾಲು ಉತ್ಪಾದಕರು ಪ್ರತಿಭಟನೆ-ಹೋರಾಟಗಳನ್ನು ನಡೆಸಿ ಆಗ್ರಹಿಸಿದ್ದರೂ ನಿರ್ಲಕ್ಷಿಸಿದ್ದ ಬಿಜೆಪಿ ನೇತೃತ್ವದ ರಾಜ್ಯ, ಕೇಂದ್ರ ಸರ್ಕಾರಗಳು ಕೆಎಂಎಫ್ ನ 16 ಜಿಲ್ಲಾ ಹಾಲು ಒಕ್ಕೂಟಗಳ ಮಾರುಕಟ್ಟೆ ಕಸಿಯಲು ಟೊಂಕ ಕಟ್ಟಿ ನಿಂತಿರುವುದು ಹಾಗೂ ಚುನಾವಣಾ ಸಂದರ್ಭದಲ್ಲೂ ನಿರ್ಲಜ್ಜವಾಗಿ ಸಮರ್ಥಿಸುತ್ತಿರುವುದು ಅತ್ಯಂತ ನಾಚೀಕೆಗೇಡು ಮಾತ್ರವಲ್ಲ ರೈತರನ್ನು ನಾಶ ಮಾಡುವ ಸರ್ವಾಧಿಕಾರಿ ಠೇಂಕಾರ ಎಂದು ಕಟುವಾಗಿ ಟೀಕಿಸಿದರು.
ಸಗೊಬ್ಬರ ಬೆಲೆ ಧಡೀರನೆ ಹೆಚ್ಚಳ ಮಾಡಿರುವುದರಿಂದ ರೈತಾಪಿ ಜನರು ತೀವ್ರ ಕಷ್ಟಪಡುತ್ತಿದ್ದಾರೆ. ಕೆಲ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅತಿಔಋಷ್ಟಿ ಹಾಗೂ ಬೆಲೆಹಾನಿಯಿಂದ ಕಂಗೆಟ್ಟು ಹೋಗಿರುವ ರೈತರಿಗೆ ರಸಗೊಬ್ಬರ ಬೆಲೆಯಲ್ಲಿ ಹೆಚ್ಚಳ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆರೋಪಿಸಿದರು.
ಜಾನುವಾರು ಮಾಂಸದ ರಪ್ತು ಉದ್ಯಮ ಬಹು ವೇಗವಾಗಿ ಬೆಳೆಯುತ್ತಿದೆ. ಕೃಷಿ ಹಾಗೂ ರೈತ ವಿರೋಧಿಯಾದ ಕೃಷಿ ಕಾಯ್ದೆಗಳನ್ನು ಹಾಗೂ ಸಹಕಾರಿ ತಿದ್ದುಪಡಿ ಕಾಯ್ದೆಗಳನ್ನು ರದ್ದುಪಡಿಸಬೇಕು , ಹೈನುಗಾರಿಕೆ ಮೇಲೆ ಹಾಕಿರುವ ಜಿಎಸ್ಟಿ ರದ್ದುಪಡಿಸಬೇಕು ಮತ್ತು ರೈತರಿಂದ ಖರೀದಿಸುವ ಲೀಟರ್ ಹಾಲಿಗೆ ಕನಿಷ್ಠ 50 ರೂ ನಿಗದಿಪಡಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಶರಣಬಸವ ಮಮಶೆಟ್ಟಿ, ಸಾಯಬಣ್ಣ ಗುಡುಬಾ, ಜೇವೇದ್ ಹುಸೇನ್, ಎಂ.ಬಿ. ಸಜ್ಜನ್, ಮೇಘರಾಜ ಕಠಾರೆ, ಭೀಮಶೆಟ್ಟಿ ಯಂಪೆಳ್ಳಿ, ದಿಲೀಪ್ಕುಮಾರ, ಸುಭಾಷ ಹೊಸಮನಿ ಇತರರಿದ್ದರು.