ದೇಶಭಕ್ತಿಯೇ ಸರ್ವರ ಧರ್ಮವಾಗಲಿ:ನ್ಯಾ. ಎಸ್.ಸುಜಾತಾ

0
35

ಕಲಬುರಗಿ: ಜಾತಿ, ಮತ, ಪಂಥವನ್ನು ಬದಿಗಿಟ್ಟು ಜಾತ್ಯಾತೀತತೆಯನ್ನು ಎತ್ತಿ ಹಿಡಿಯುವ ದೇಶಭಕ್ತಿಯೆ ನಮ್ಮೆಲ್ಲರ ಧರ್ಮವಾಗಬೇಕು. ಈ ಧರ್ಮಕ್ಕೆ ಸಂವಿಧಾನವೇ ಮೂಲ ಧರ್ಮಗ್ರಂಥವಾಗಿದ್ದು, ಅದನ್ನು ನಾವೆಲ್ಲರು ಪಾಲಿಸಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ಕಲಬುರಗಿ ಪೀಠದ ಹಿರಿಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಸ್. ಸುಜಾತಾ ಅವರು ಹೇಳಿದರು.

ಅವರು ಗುರುವಾರ ಕಲಬುರಗಿ ಹೈಕೋರ್ಟ್ ಪೀಠದ ಅವರಣದಲ್ಲಿ ೭೩ನೇ ಸ್ವಾತಂತ್ರೋತ್ಸವ ದಿನಾಚರಣೆಯ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.

Contact Your\'s Advertisement; 9902492681

ದೇಶದ ಸಂಸ್ಕೃತಿಯಲ್ಲಿ ಮಾತೃದೇವೋಭವ ಮತ್ತು ಪಿತೃ ದೇವೋಭವಕ್ಕೆ ಗೌರವದ ಸ್ಥಾನ ನೀಡಲಾಗಿದೆ. ಅದರ ಜೊತೆಗೆ ರಾಷ್ಟ್ರದೇವೋಭವವನ್ನು ನಾವು ಸೇರಿಸಿಕೊಳ್ಳಬೇಕಿದೆ. ಹಲವಾರು ಸ್ವಾತಂತ್ರ ಹೋರಾಟಗಾರರ, ದೇಶ ಭಕ್ತರ ನಿರಂತರ ಹೋರಾಟ, ತ್ಯಾಗ ಬಲಿದಾನದ ಫಲ ಪರಕೀಯರಿಂದ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದೆ. ಸ್ವಾತಂತ್ರಕ್ಕಾಗಿ ಹೋರಾಡಿದ ಅ ಎಲ್ಲಾ ಅದಮ್ಯ ಚೇತನಗಳಿಗೆ ನಮ್ಮ ನಮನ ಸಲ್ಲಿಸೋಣ. ನಾವೆಲ್ಲರು ಇಲ್ಲಿ ಸ್ವಚ್ಚಂದ ಗಾಳಿಯಲ್ಲಿ ಹಕ್ಕಿಯಂತೆ ಜೀವಿಸುತ್ತಿದ್ದೇವೆ ಅಂದರೆ ಗಡಿಯಲ್ಲಿ ದೇಶದ ರಕ್ಷಣೆಗೆ ಟೊಂಕ ಕಟ್ಟಿ ನಿಂತಿರುವ ನಮ್ಮ ಯೋಧರು ಕಾರಣರಾಗಿದ್ದಾರೆ. ದೇಶಭಕ್ತರಾದ ನಾವು ಅವರನ್ನು ಸ್ಮರಿಸುವುದು ಅಗತ್ಯವಿದೆ ಎಂದರು.

ಭೂಮಿಯಲ್ಲಿನ ಪ್ರತಿ ಜೀವಿ, ಜಲಚರಗಳು, ಪಶು-ಪ್ರಾಣಿಗಳು ಮುಕ್ತ ಸ್ವಾತಂತ್ರ್ಯ ಬಯಸುತ್ತವೆ. ಇನ್ನು ಬುದ್ದಿವಂತ ಮಾನವ ಜೀವಿ ಸಹಜವಾಗಿ ಹೆಚ್ಚು ಬಯಸುತ್ತಾನೆ. ಮೂಲಭೂತ ಹಕ್ಕಿಗಾಗಿ ಹೇಗೆ ಹೋರಾಡುತ್ತಿವೋ ಹಾಗೇನೆ ಮೂಲಭೂತ ಕರ್ತವ್ಯ ಪಾಲನೆಯಲ್ಲಿಯೂ ಮುಂದೆ ಸಾಗಬೇಕಿದೆ ಎಂದರು.

ಸ್ವಾತಂತ್ರದ ನಂತರ ದೇಶವು ಅನೇಕ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿದೆ. ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ವೈಜ್ಞಾನಿಕ, ರಕ್ಷಣೆ ಹೀಗೆ ನಾನಾ ಕ್ಷೇತ್ರದಲ್ಲಿ ಅಭಿವೃದ್ಧಿಯ ಪಥದಲ್ಲಿ ದೇಶವು ಸಾಗುತ್ತಿದೆ. ಇಂದಿನ ಯುವ ಪೀಳಿಗೆಯು ಪ್ರತಿಭಾವಂತರಾಗಿದ್ದು, ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆ ಅಗತ್ಯವಿದೆ. ಹಳೆ ಬೇರು-ಹೊಸ ಚಿಗುರು ಸಮನ್ವಯತೆಯೆ ಪರಿಣಾಮ ಚಂದ್ರಯಾನ-೨ ಯಶಸ್ವಿ ಉಡಾವಣೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕ್ಷಿಪ್ರಗತಿಯಲ್ಲಿ ಭಾರತವು ಅಭಿವೃದ್ದಿ ಹೊಂದುತ್ತಿದ್ದರು ಸಹ ದೇಶದಲ್ಲಿ ದಿನನಿತ್ಯ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ, ಭ್ರಷ್ಟಾಚಾರ, ಜಾತೀಯತೆ ತಾಂಡಾವಾಡುತ್ತಿದ್ದು ತುಂಬಾ ಖೇದಕರ. ಇದನ್ನು ಹೋಗಲಾಡಿಸಲು ಪ್ರತಿಯೊಬ್ಬರು ಪಣತೊಡಬೇಕಾಗಿದೆ. ಕೇವಲ ಕಾನೂನು, ಕಾಯ್ದೆಗಳಿಂದ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಬದಲಾಗಿ ನಮ್ಮೆಲ್ಲರ ಮನ-ಮನೆಯಲ್ಲಿ ಪರಿವರ್ತನೆಯಾಗಬೇಕಿದೆ ಎಂದರು.  ಪ್ರಕೃತಿ ವಿಕೋಪದಿಂದ ರಾಜ್ಯದ ಅನ್ನದಾತ ರೈತ ಸಮುದಾಯ ಪ್ರವಾಹಕ್ಕೆ ಸಿಲುಕಿ ಬದುಕಿನ ಭರವಸೆಯನ್ನೆ ಕಳೆದುಕೊಂಡಿದ್ದಾನೆ. ನಾವೆಲ್ಲರು ಅವರ ಸಂಕಷ್ಡದಲ್ಲಿ ಭಾಗಿಯಾಗಬೇಕಿದೆ. ಸಂಕಷ್ದಲ್ಲಿರುವ ರೈತನ ನೆರವಿಗೆ ಎಲ್ಲರು ಧಾವಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಕೆ.ಎಸ್.ಮುದಗಲ್, ನ್ಯಾಯಮೂರ್ತಿ ಕೆ.ಎನ್.ಸುಧೀಂದ್ರರಾವ್, ಪ್ರಭಾರ ಕಲಬುರಗಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಶುಕಲಾಕ್ಷ ಪಾಲನ್, ಕಲಬುರಗಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣಕುಮಾರ ಕಿಣ್ಣಿ, ವಕೀಲರ ಸಂಘದ ಹೈಕೋರ್ಟ್ ಘಟಕದ ಉಪಾಧ್ಯಕ್ಷ ಸುಧೀರ ಸಿಂಗ್, ಪ್ರಧಾನ ಕಾರ್ಯದರ್ಶಿ ಬಿ.ಸಿ.ಜಾಕಾ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಹೈಕೋರ್ಟಿನ ನ್ಯಾಯವಾದಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸ್ವಾತಂತ್ರೋತ್ಸವ ದಿನಾಚರಣೆಯ ಅಂಗವಾಗಿ ಹೈಕೋರ್ಟ್ ಆವರಣದಲ್ಲಿ ನ್ಯಾಯಮೂರ್ತಿಗಳು ಸಸಿ ನೆಟ್ಟು ನೀರುಣಿಸಿದರು. ಸ್ವಾತಂತ್ರ ದಿನಾಚರಣೆ ಹಿನ್ನೆಲೆಯಲ್ಲಿ ಹೈಕೋರ್ಟ್ ಪೀಠದ ನ್ಯಾಯಾವಾದಿಗಳು ಮತ್ತು ಸಿಬ್ಬಂದಿಗೆ ಏರ್ಪಡಿಸಲಾದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನ್ಯಾಯಮೂರ್ತಿಗಳು ಪ್ರಶಸ್ತಿ ಪತ್ರ, ಪದಕಗಳನ್ನು ವಿತರಿಸಿದರು. ನ್ಯಾಯವಾದಿ ಐಶ್ವರ್ಯ ಉಪಳಾಂವಕರ್ ಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here