ಕಲಬುರಗಿ: ಕೇವಲ 26 ವಯಸ್ಸಿಗೆ 40 ಕೇಸು ಹಾಕಿಸಿಕೊಂಡಿರುವ ಬಿಜೆಪಿ ಅಭ್ಯರ್ಥಿಯಿಂದ ಚಿತ್ತಾಪುರದ ಯುವಕರ ಭವಿಷ್ಯ ರೂಪುಗೊಳ್ಳುತ್ತದೆಯೇ? ಎಂದು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಬೆಣ್ಣೂರು ( ಬಿ ) ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ,, ನೀವು ಮಣಿಕಂಠನ ಜೊತೆಗೆ ಹೋದರೆ, ನಿಮ್ಮ ಮಕ್ಕಳು ಕೂಡಾ ಆರೋಪಿ 1, ಆರೋಪಿ 2, ಆರೋಪಿ 3 ಆಗುತ್ತಾರೆ. ಆಮೇಲೆ ನಿಮ್ಮ ಮಕ್ಕಳನ್ನು ಬಿಡಿಸಿಕೊಂಡು ಬರಲು ನನ್ನ ಬಳಿಗೆ ಬರಬೇಡಿ ಎಂದು ಹೇಳಿದರು.
ದುಷ್ಟಶಕ್ತಿಗಳನ್ನು ಹೊರಗಿಡಿ ಹೊರಗಿನಿಂದ ಬಂದವನನ್ನು ಹೊರಗಿನಿಂದಲೇ ಕಳಿಸಿಬಿಡಿ ಚಿತ್ತಾಪುರದ ಮೊಮ್ಮಗನಾದ ನನ್ನನ್ನು ಆರಿಸಿಕಳಿಸಿ ಎಂದು ಮನವಿ ಮಾಡಿ, ಕಾಂಗ್ರೆಸ್ ಸಂಪೂರ್ಣ ಬಹುಮತದೊಂದಿದೆ ಅಧಿಕಾರಕ್ಕೆ ಬರಲು ನೀವು ಆಶೀರ್ವದಿಸಿದರೆ ಗೃಹ ಲಕ್ಷ್ಮಿ, ಗೃಹ ಜ್ಯೋತಿ ಸೇರಿದಂತೆ ಐದು ಪ್ರಮುಖ ಯೋಜನೆಗಳನ್ನು ಕೂಡಲೇ ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದರು.
ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಯುವನಿಧಿ ಯೋಜನೆ ಅಡಿಯಲ್ಲಿ ನಿರುದ್ಯೋಗಿ ಪದವಿಧರ ಯುವಕರಿಗೆ ಪ್ರತಿತಿಂಗಳು ರೂ 3000 ಹಾಗೂ ಡಿಪ್ಲೋಮಾ ಆದವರಿಗೆ ರೂ 2000 ನೀಡಲಾಗುವುದು ಎಂದರು.
ವೇದಿಕೆಯ ಮೇಲೆ ಭೀಮಣ್ಣ ಸಾಲಿ, ರಮೇಶ ಮರಗೋಳ, ಇಕ್ಬಾಲ್ ಸಾಬ್, ಶಂಭುಲಿಂಗ ಗುಂಡುಗುರ್ತಿ, ಶಿವಯ್ಯ ಗುತ್ತೇದಾರ, ಶಿವರಾಜ ಪಾಟೀಲ, ಶಿವಕುಮಾರ ಯಾಗಾಪುರ ಸೇರಿದಂತೆ ಮತ್ತಿತರಿದ್ದರು.