ಸುರಪುರ:ತಾಲೂಕಿನಾದ್ಯಂತ ಬುಧವಾರ ಸಂಜೆಯಿಂದ ತಡರಾತ್ರಿ ವರೆಗೂ ಸುರಿದ ಭಾರಿ ಗಾಳಿ ಮಲೆಗೆ ನಗರದಲ್ಲಿ ಅನೇಕ ಮರಗಳು ಧರೆಗುರುಳಿ ದೊಡ್ಡ ಅವಾಂತರವನ್ನು ಸೃಷ್ಟಿಸಿದೆ.
ಬುಧವರಾ ಸಂಜೆ ಮೊದಲು ಸಣ್ಣ ಗಾಳಿ ಬೀಸುವ ಮೂಲಕ ಆರಂಭಗೊಂಡ ಮಳೆ ರಾತ್ರಿಯಾಗುತ್ತಿದ್ದಂತೆ ಜೋರಾಗಿ ಬೀಸಿದ ಗಾಳಿಯಿಂದ ನಗರದ ಅನೇಕ ಕಡೆಗಳಲ್ಲಿ ಮರಗಳು ಮುರಿದು ಬಿದ್ದಿವೆ,ಅದರಲ್ಲಿ ನಗರದ ಡಾ:ಬಿ.ಆರ್ ಅಂಬೇಡ್ಕರ್ ವೃತ್ತದ ಬಳಿಯಲ್ಲಿ ಬೃಹತ್ ಗಾತ್ರದ ಮರ ಮುರಿದು ಆಟೋ ಒಂದರ ಮೇಲೆ ಬಿದ್ದು ಆಟೋ ಸಂಪೂರ್ಣ ಜಖಂಗೊಂಡಿದೆ.
ವಿದ್ಯುತ್ ಕಂಬವು ಮುರಿದು ಬಿದ್ದಿದೆ.ಹುಲಕಲ್ ಗುಡ್ಡದಲ್ಲಿ ಮನೆಯ ಮೇಲೆ ಬೃಹತ್ ಮರ ಮುರಿದು ಬಿದ್ದಿದ್ದರಿಂದ ನಾಗರಾಜ ಎನ್ನುವವರಿಗೆ ಸೇರಿದ ಮನೆ ಶಿಥಿಲಗೊಂಡಿದೆ,ಕೆಂಭಾವಿ ಹೋಗುವ ರಸ್ತೆ ಸಿದ್ದಾಪುರ ಹನುಮಾರ ದೇವಸ್ಥಾನದ ಬಳಿಯಲ್ಲಿ ರಸ್ತೆ ಕೊಚ್ಚಿಕೊಂಡು ಹೋಗಿದ್ದರಿಂದ ರಸ್ತೆ ಸಂಚಾರ ಬಂದಾಗಿ ವಾಹನ ಸವಾರರು ಪರದಾಡಿದರು,ಕುಂಬಾರಪೇಟೆಯ ಎಪಿಎಮ್ಸಿ ಗಂಜ್ ಬಳಿಯಲ್ಲಿ ಬೃಹತ್ ಮರ ಉರುಳಿ ಬಿದ್ದು ಮರದ ಕೆಳಗೆ ನಿಲ್ಲಿಸಲಾಗಿದ್ದ ಬೈಕ್ಗಲು ಜಖಂಗೊಂಡಿವೆ,ಅಲ್ಲಿಯೇ ಕ್ಷೌರದ ಅಂಗಡಿಯೊಂದರೆ ಮೇಲೆ ಮರ ಮುರಿದು ಬಿದ್ದು ಅಂಗಡಿ ಸಂಪೂರ್ಣ ಅಪ್ಪಚ್ಚಿಯಾಗಿದೆ.
ಇನ್ನು ನಗರದ ರಂಗಂಪೇಟೆಯ ಹನುಮಾನ ದೇವಸ್ಥಾನದ ಬಳಿಯಲ್ಲಿ ಮರ ಮುರಿದು ಬಿದ್ದು ಕೆಳಗಡೆ ನಿಲ್ಲಿಸಲಾಗಿದ್ದ ಕಾರು ಜಖಂಗೊಂಡಿದೆ,ಹಸನಾಪುರದಲ್ಲಿ ಮರ ಮುರಿದು ವಿದ್ಯುತ್ ಕಂಬದ ಮೇಲೆ ಬಿದ್ದು ವಿದ್ಯುತ್ ಕಂಬ ಹಾಗೂ ಮರ ಶ್ರೀಮಂತ ಚಲುವಾದಿ ಎನ್ನುವವರ ಮನೆಯ ಮೇಲೆ ಬಿದ್ದು ಮನೆ ಶಿಥಿಲಗೊಂಡಿದೆ,ಇನ್ನೂ ತಾಲೂಕಿನ ರುಕ್ಮಾಪುರ ಗ್ರಾದಲ್ಲಿ ಸುರಿದ ಮಳೆಗೆ ಹಣಮಯ್ಯ ಲಿಂಗದಳ್ಳಿ ಎನ್ನುವವರ ಮನೆಯ ತಗಡುಗಳು ಹಾರಿ ಹೋಗಿದ್ದು ಮನೆಯಲ್ಲಿನ ಎಲ್ಲಾ ವಸ್ತುಗಳು ಮಳೆ ನೀರಲ್ಲಿ ನೆನೆದು ಹಾಳಾಗಿವೆ.ಗ್ರಾಮದಲ್ಲಿ ಅನೇಕ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ,ಶೆಳ್ಳಗಿ ಕ್ರಾಸ್ನಲ್ಲಿ ಹಾಕಲಾಗಿದ್ದ ಪಂಚರ್ ಗ್ಯಾರೆಜ್ ಅಂಗಡಿಯೊಂದು ಮಳೆ ಗಾಳಿಗೆ ಕಿತ್ತುಕೊಂಡು ಹೋಗಿದ್ದು ಅಂಗಡಿಯಲ್ಲಿನ ಎಲ್ಲ ಮಷಿನ್ಗಳು ಹಾಳಾಗಿವೆ.ಅಲ್ಲದೆ ಇನ್ನೂ ಗ್ರಾಮೀಣ ಭಾಗದಲ್ಲಿ ಅನೇಕ ಕಡೆಗಳಲ್ಲಿ ಮರಗಳು ಮುರಿದು ಬಿದ್ದು ದೊಡ್ಡ ಮಟ್ಟದಲ್ಲಿ ನಷ್ಟವುಂಟಾಗಿದೆ.
ಮಳೆ ಗಾಳಿಯ ಅವಾಂತರಕ್ಕೆ ಎಚ್ಚೆತ್ತುಕೊಂಡ ತಾಲೂಕು ಆಡಳಿತ,ಗುರುವಾರ ಮುಂಜಾನೆಯಿಂದಲೂ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಸುಪುತ್ರ ರಾಜಾ ವೇಣುಗೋಪಾಲ ನಾಯಕ ಹಾಗೂ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಮಳೆ ಗಾಳಿಗೆ ಹಾನಿಯಾಗಿರುವ ಮನೆಗಳಿಗೆ ಭೇಟಿಯನ್ನು ನೀಡಿ ಸಾಂತ್ವಾನ ಹೇಳುವ ಜೊತೆಗೆ ಹಾನಿಯ ಪರಿಶೀಲನೆಯನ್ನು ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ರಾಜಾ ವೇಣುಗೋಪಾಲ ನಾಯಕ ಅವರು,ಹಾನಿಗೊಳಗಾದವರಿಗೆ ಸರಕಾರ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಸರಿಯಾದ ವರದಿಯನ್ನು ತಯಾರಿಸಿ ಸಲ್ಲಿಸುವಂತೆ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಯವರಿಗೆ ಮನವಿ ಮಾಡಿದ್ದಾರೆ.