ಸುರಪುರ: ತಾಲೂಕಿನ ಬಾದ್ಯಾಪುರ ಗ್ರಾಮದಲ್ಲಿ ಕಳೆದ ಅನೇಕ ವರ್ಷಗಳಿಂದ ಉಳಿಮೆ ಮಾಡಿಕೊಂಡು ಬರುತ್ತಿರುವ ದಲಿತ ಸಮುದಾಯದ ಕುಟುಂಬಸ್ಥರ ಜಮೀನನ್ನು ಗ್ರಾಮದಲ್ಲಿನ ಮೇಲ್ವರ್ಗದ ವ್ಯಕ್ತಿ ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಗರದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗಿದೆ.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘದ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ,ಬಾದ್ಯಾಪುರ ಗ್ರಾಮದಲ್ಲಿ ಸರ್ವೇ ನಂಬರ್ 86ರ ಪಹಣಿಯಲ್ಲಿ ಮಾದಿಗ ಸಮುದಾಯದ ಭೀಮಪ್ಪ ತಾಯಿ ದ್ಯಾವಮ್ಮ ಎನ್ನುವವರಿಗೆ ಸೇರಿದ ಭೂಮಿ ಇದ್ದು,ಈ ಕುಟುಂಬ ಕಳೆದ ಅನೇಕ ವರ್ಷಗಳಿಂದ ಬಾಂಬೆಗೆ ಗುಳೆ ಹೋಗಿದ್ದು ಈಗ ಬರುವಷ್ಟರಲ್ಲಿ ಮಾಜಿ ಸೈನಿಕ ತಿಪ್ಪಣ್ಣ ಶರಣಪ್ಪ ಎನ್ನುವವರಿಗೆ ನಾಲ್ಕು ಎಕರೆ ಹಾಗೂ ದೇವಿಕೇರಾ ಗ್ರಾಮ ಪಂಚಾಯತಿಯ ಕಸ ವಿಲೇವಾರಿಗೆ ಎರಡು ಎರಕೆ ಕಬಳಿಕೆ ಮಾಡಲಾಗಿದೆ.ಆದ್ದರಿಂದ ದಲಿತ ಕುಟುಂಬಕ್ಕೆ ಸೇರಿದ ಭೂಮಿ ಕಬಳಿಕೆ ಮಾಡಿದವರ ವಿರುದ್ಧ ಕ್ರಮ ಕೈಗೊಂಡು ದಲಿತ ಕುಟುಂಬಕ್ಕೆ ಭೂಮಿ ಮರಳಿ ನೀಡಬೇಕು,ಇಲ್ಲವಾದಲ್ಲಿ ಸಂಘಟನೆಯಿಂದ ತಹಸೀಲ್ದಾರ್ ಕಚೇರಿಗೆ ಮುಳ್ಳು ಬೇಲಿ ಹಚ್ಚಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ನಂತರ ತಹಸೀಲ್ದಾರರಿಗೆ ಬರೆದ ಮನವಿಯನ್ನು ಸಿರಸ್ತೆದಾರರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಯಲ್ಲಪ್ಪ ಚಿನ್ನಾಕಾರ,ಬಸವರಾಜ ದೊಡ್ಮನಿ,ಜಟ್ಟೆಪ್ಪ ನಾಗರಾಳ,ಖಾಜಾಹುಸೇನ ಗುಡಗುಂಟಿ,ಮಹೇಶ ಯಾದಗಿರಿ ಸೇರಿದಂತೆ ಜಮೀನಿನ ಕುಟುಂಬಸ್ಥರು ಭಾಗವಹಿಸಿದ್ದರು.