ಸುರಪುರ: ತಾಲೂಕಿನ ಅಕ್ಷರ ದಾಸೋಹ ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ತಾಲೂಕು ಪಂಚಾಯತ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಸಿಐಟಿಯು ಸಂಯೋಜನೆಯ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ವತಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸುರೇಖಾ ಕುಲಕರ್ಣಿ ಮಾತನಾಡಿ,ರಾಜ್ಯದಲ್ಲಿ 21 ವರ್ಷಗಳಿಂದ 1 ಲಕ್ಷ 17 ಸಾವಿರ ಮಹಿಳೆಯರು ರಾಜ್ಯದಲ್ಲಿನ 58 ಲಕ್ಷ 39 ಸಾವಿರ ಮಕ್ಕಳಿಗೆ ಆಹಾರ ತಯಾರಿಸಿ ಊಟ ನೀಡುತ್ತಾ ಬಂದಿದ್ದು,ಸರಕಾರಗಳು ಅಕ್ಷರ ದಾಸೋಹ ನೌಕರರ ಬೇಡಿಕೆಗಳನ್ನು ಮಾತ್ರ ಈಡೇರಿಸುತ್ತಿಲ್ಲ,ಅಕ್ಷರ ದಾಸೋಹ ನೌಕರರಿಗೆ ಪ್ರತಿ ತಿಂಗಳು ಕನಿಷ್ಠ 21 ಸಾವಿರ ಕೂಲಿ ನೀಡಬೇಕು ಎನ್ನುವುದು,ಬಿಸಿಯೂಟದ ನೌಕರರಿಗೆ 1 ಸಾವಿರ ಗೌರವಧನ ಹೆಚ್ಚಳ ಮಾಡಬೇಕು,ಅಕ್ಷರ ದಾಸೋಹ ಮಾರ್ಗ ಸೂಚಿಯಲ್ಲಿ 4 ಗಂಟೆ ಕೆಲಸ ಎಂದು ಇದೆ.
ಅದನ್ನು 6 ಗಂಟೆ ಎಂದು ತಿದ್ದುಪಡಿ ಮಾಡಬೇಕು,ನಿವೃತ್ತಿ ಹೊಂದಿದ,ನಿವೃತ್ತಿ ಹೊಂದುತ್ತಿರುವ ನೌಕರರಿಗೆ ಇಡಿಗಂಟು ಜಾರಿ ಮಾಡಬೇಕು,ಸಾದಿಲ್ವಾರು ಜಂಟಿ ಖಾತೆ ಜವಬ್ದಾರಿ ಮುಖ್ಯ ಅಡುಗೆಯವರಿಗೆ ನೀಡಬೇಕು,ಅಪಘಾತದಲ್ಲಿ ಮರಣ ಹೊಂದಿದ ಅಡುಗೆ ಸಿಬ್ಬಂದಿಗಳ ಕುಟುಂಬದವರಿಗೆ ಕೆಲಸ ನೀಡಬೇಕು,ಬೇಸಿಗೆ ರಜೆ ಮತ್ತು ದಸರಾ ರಜೆಗಳ ವೇತನ ನೀಡಬೇಕು,ಬಿಸಿಯೂಟ ಯೋಜನೆ ಯಾವುದೇ ಖಾಸಗಿಯವರಿಗೆ ನೀಡಬಾರದು,ಪ್ರತಿ ಶಾಲೆಯಲ್ಲಿ ಕನಿಷ್ಠ ಇಬ್ಬರು ಅಡುಗೆಯವರನ್ನು ನೇಮಿಸಬೇಕು,ಬಿಸಿಯೂಟ ನೌಕರರನ್ನು ಡಿ ಗ್ರುಪ್ ನೌಕರರೆಂದು ಪರಿಗಣಿಸಬೇಕು ಎನ್ನುವುದು ಸೇರಿದಂತೆ 10 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಾಲೂಕು ಪಂಚಾಯತಿ ಸಿರಸ್ತೆದಾರರ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಸಂಘಟನೆಯ ಗೌರವಾಧ್ಯಕ್ಷ ಸುವರ್ಣ,ತಾಲೂಕು ಅಧ್ಯಕ್ಷ ಶಹಾಜೀದಿ ಬೇಗಂ,ಸೌಭಾಗ್ಯ ಮಾಲಗತ್ತಿ,ಪ್ರಕಾಶ ಆಲ್ಹಾಳ,ಗೀತಾ ನಗನೂರ,ಬಸ್ಸಮ್ಮ ಆಲ್ಹಾಳ,ರಾಧಾಬಾಯಿ ಲಕ್ಷ್ಮೀಪುರ ಸೇರಿದಂತೆ ಅನೇಕ ಜನ ಅಕ್ಷರ ದಾಸೋಹ ನೌಕರರು ಭಾಗವಹಿಸಿದ್ದರು.