ಸುರಪು : ತಾಲೂಕಿನ ನೂತನ ತಹಸೀಲ್ದಾರ್ರಾಗಿ ವಿಜಯಕುಮಾರ ಕೊರಲಗುಂದಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ತಹಸೀಲ್ದದಾರರಾಗಿದ್ದ ಸುಬ್ಬಣ್ಣ ಜಮಖಂಡಿಯವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ವಿಜಯಕುಮಾರ ಕೆ ಅವರನ್ನು ನಿಯುಕ್ತಿಗೊಳಿಸಲಾಗಿತ್ತು,ಅದರಂತೆ ನೂತನ ತಹಸೀಲ್ದಾರರಾಗಿ ಆಗಮಿಸಿದ್ದ ವಿಜಯಕುಮಾರ ಕೆ ಶನಿವಾರ ಅಧಿಕಾರ ಸ್ವೀಕರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2001 ರಲ್ಲಿ ಪ್ರಥಮ ಬಾರಿಗೆ ಬಳ್ಳಾರಿ ಡಿಸಿ ಕಚೇರಿಯಲ್ಲಿ ಸೇವೆಗೆ ಸೇರ್ಪಡೆಯಾದೆ. 2009 ರಲ್ಲಿ ಬಡ್ತಿ ಹೊಂದಿ ಬಳಿಕ ಕೂಡ್ಲಿಗಿ, ಹೊಸಪೇಟೆ, ಹೂವಿನಹಡಗಲಿ, ಹಗರಿಬೊಮ್ಮನಳ್ಳಿ ಸೇರಿ ಹಲವಾರು ಕಡೆ ಸೇವೆ ಸಲ್ಲಿಸಿದ್ದೇನೆ. ಸದ್ಯ ಬೆಂಗಳೂರಿನ ಬಿಬಿಎಂಪಿ ಕಚೇರಿಯಿಂದ ಇಲ್ಲಿಗೆ ತಹಸೀಲ್ದಾರ್ರಾಗಿ ನಿಯುಕ್ತಿ ಹೊಂದಿದ್ದೇನೆ ಎಂದರು.
ಸಾರ್ವಜನಿಕ ರಂಗದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು ಎಲ್ಲರ ಸಹಕಾರದೊಂದಿಗೆ ಇಲ್ಲಿಯೂ ಉತ್ತಮ ಆಡಳಿತ ನೀಡುವ ಭರವಸೆ ನೀಡುತ್ತೇನೆ. ನನಗೆ ಕಚೇರಿಯಲ್ಲಿ ಕುಳಿತು ಅಭ್ಯಾಸವಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಗುರಿ. ಅಂದಿನ ಕೆಲಸ ಅದೇ ದಿನ ಮುಗಿಯಬೇಕು. ಸಿಬ್ಬಂದಿಗಳು ಕೂಡ ಕಡತಗಳನ್ನು ಬಾಕಿ ಇಟ್ಟುಕೊಳ್ಳದೆ ತ್ವರಿತವಾಗಿ ವಿಲೇವಾರಿ ಮಾಡಬೇಕು. ಸಾರ್ವಜನಿಕರಿಗೆ ಒಳ್ಳೆಯ ರೀತಿಯ ಸಹಕಾರ ನೀಡುವ ಮೂಲಕ ತಾಲೂಕಾಡಳಿತದ ಪಾರದರ್ಶಕ ಸೇವೆಗೆ ಶ್ರಮಿಸಬೇಕು ಎಂದರು.
ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಸಾರ್ವಜನಿಕರು ನನ್ನನ್ನು ನೇರವಾಗಿ ಭೇಟಿಯಾಗಬೇಕು. ಸಾರ್ವಜನಿಕರ ಸೇವೆಯೇ ನನ್ನ ಮುಖ್ಯ ಉದ್ದೇಶ ಎಂದರು. ಕಂದಾಯ ಇಲಾಖೆಯ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.