ಸುರಪುರ: ನಗರದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪೂರ್ವಭಾವಿ ಸಭೆ ನಡೆಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ನೂತನ ತಹಸೀಲ್ದಾರ್ ವಿಜಯಕುಮಾರ ಕೆ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಆಗಸ್ಟ್ 15 ರಂದು 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ಕೆ.ವಿಜಯಕುಮಾರ ತಿಳಿಸಿದರು.
ಎಲ್ಲ ಸರಕಾರಿ ಕಚೇರಿ, ಶಾಲಾ-ಕಾಲೇಜು, ಗ್ರಾಮ ಪಂಚಾಯಿತಿ,ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರಗಳಲ್ಲಿ ಅಂದು ಬೆಳಗ್ಗೆ 8.15 ಗಂಟೆಗೆ ಧ್ವಜಾರೋಹಣ ಮಾಡಬೇಕು. ಎಲ್ಲ ಸರಕಾರಿ ಕಚೇರಿಗಳಿಗೆ ಆ.14, 15 ರಂದು ವಿದ್ಯುತ್ ದೀಪಾಲಂಕಾರ ಮಾಡಬೇಕು ಎಂದು ತಿಳಿಸಿದರು.
ನಗರದ ಶ್ರೀಪ್ರಭು ಕಾಲೇಜು ಮೈದಾನದಲ್ಲಿ ತಾಲೂಕಾಡಳಿತದ ವತಿಯಿಂದ ಹಮ್ಮಿಕೊಂಡಿರುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಅಂದು ಬೆಳಗ್ಗೆ 9 ಗಂಟೆಗೆ ಶಾಸಕರ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಲಿದೆ. ಪೊಲೀಸ್, ಹೋಮಗಾರ್ಡ್, ಎನ್ಸಿಸಿ, ಸ್ಕೌಟ್ಸ್ ಗೈಡ್ಸ್, ಸೇವಾದಳದ ಪಥ ಸಂಚಲನ ಜರುಗಲಿದೆ. ನಂತರ ಶಾಲಾ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. 5 ಜನ ಸರಕಾರಿ ನೌಕರರಿಗೆ, ಇಬ್ಬರು ಪತ್ರಕರ್ತರಿಗೆ ಮತ್ತು ಇತರೆ ಸಾಧಕರಿಗೆ ಸನ್ಮಾನಿಸಲಾಗುವುದು. ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಮತ್ತು ಉಪಹಾರದ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹೋಮಗಾರ್ಡ್ ಅಧಿಕಾರಿಗಳಾದ ಯಲ್ಲಪ್ಪ ಹುಲಕಲ್, ವೆಂಕಟೇಶ ಸುರಪುರ, ಮುಖಂಡರಾದ ಶಿವಮೋನಯ್ಯ ಎಲ್ಡಿ ನಾಯಕ, ಭೀಮು ನಾಯಕ ಮಲ್ಲಿಭಾವಿ, ಚಂದ್ರಶೇಖರ ದೊರೆ ಬಿಚಗತ್ತಿಕೇರಿ ಸೇರಿ ಇನ್ನಿತರರು ಹಲವು ಸಲಹೆ ಸೂಚನೆ ನೀಡಿದರು. ಗ್ರೇಡ್-2 ತಹಸೀಲ್ದಾರ್ ಮಲ್ಲಯ್ಯ ದಂಡು, ಪಿಎಸ್ಐ ಹಣಮಂತರಾಯ, ಅಧಿಕಾರಿಗಳಾದ ಡಾ.ಆರ್.ವಿ.ನಾಯಕ, ಗುರುರಾಜ ಸಜ್ಜನ್, ಚಾಲ್ಸ್ ಪ್ರೇಮ್, ಯಲ್ಲಪ್ಪ ಕಾಡ್ಲೂರು, ಕೆ.ವಿಜೇಂದ್ರ, ತಿಪ್ಪಾರೆಡ್ಡಿ ಮಾಲಿ ಪಾಟೀಲ್, ಮೌಲಾಲಿಸಾಬ್, ಚೈತ್ರಾ, ಪೂಜಾ ಖರ್ಗೆ, ಕಾವೇರಿ, ಶಿವುಪುತ್ರ, ಶಾಸಕರ ಆಪ್ತ ಸಹಾಯಕ ಹೆಚ್.ಆರ್.ಮಕಾಶಿ, ವೆಂಕಟೇಶ ದಳವಾಯಿ ಸೇರಿ ಇತರರು ಇದ್ದರು.