ಶರಣಬಸವರು ಪಶು ಪಕ್ಷಿಗಳಿಗೂ ದಾಸೋಹಗೈದವರು

0
50

ಮಹಾದಾಸೋಹಿ ಶರಣಬಸವೇಶ್ವರರು ಮನುಷ್ಯರಿಗಲ್ಲದೆ ಪಶು, ಪಕ್ಷಿ, ಪ್ರಾಣಿಗಳಿಗೆ ದಾಸೋಹಗೈದು ಶಿವನಾಗಿದ್ದರು ಎಂದು ಬಳ್ಳಾರಿಯ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ರಸಾಯನ ಶಾಸ್ತ್ರದ ಪ್ರಾಧ್ಯಾಪಕ ಡಾ.ಅರುಣಕುಮಾರ ಲಗಶೆಟ್ಟಿ ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ರವಿವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು.

Contact Your\'s Advertisement; 9902492681

ಪಶುಪಕ್ಷಿ ದನ ಕರುಗಳಲ್ಲಿ ಅಪಾರ ದಯೆಯನ್ನು ಇಟ್ಟುಕೊಂಡ ಶರಣಬಸವರು ತಮ್ಮ ಪ್ರಾಣಕ್ಕಿಂತ ಹೆಚ್ಚು ಅವುಗಳನ್ನು ಪ್ರೀತಿಸಿದರು. ದಾಸೋಹ ಮಹಾಮನೆಯಲ್ಲೊಂದು ಆಕಳು ಕರುಗಳನ್ನು ಹಾಕದೆ ಗೊಡ್ಡಾಕಳಿತ್ತು. ಒಂದು ದಿನ ಮಹಾಮನೆಯ ಭಕ್ತರು ಅದನ್ನು ಹೊರಗೆ ಹಾಕಬೇಕೆಂದು ನಿರ್ಧರಿಸಿದರು. ಶರಣರ ಕಿವಿಯ ಮೇಲೆ ಈ ಮಾತು ಬಿದ್ದು ಅವರಿಗೆ ತುಂಬ ಖೇದ ಉಂಟಾಗುತ್ತದೆ. ಆ ಭಕ್ತರನ್ನು ಕರೆದು ’ ಮನೆಯ ಮಗಳ ಹಾಗೇ ಇರುವ ಆ ಆಕಳನ್ನು ಹೊರಗೆ ದಬ್ಬಿ ಶಿವನಿಗೆ ಏನೆಂದು ಹೇಳುತ್ತಿರಿ’ ಎನ್ನುತ್ತಾ ಭಸ್ಮವಿಡಿದು ಆಕಳ ಹತ್ತಿರ ಹೋಗಿ ಅದರ ಹಣೆಗೆ ವಿಭೂತಿ ಹಚ್ಚುತ್ತಾರೆ. ವರ್ಷತುಂಬುವದರೊಳಗೆ ಕರುಹಾಕಿದ ಆ ಹಸುವಿನ ಹಾಲು ಎಲ್ಲಾ ಆಕಳಗಿಂತ ರುಚಿ ಮತ್ತು ಪ್ರಮಾಣ ಹೆಚ್ಚಾಗಿತ್ತು.

ಶರಣಬಸವರು ಮಾಡಿದ ದಾಸೋಹ ಮೂರು ಲೋಕಕ್ಕೂ ತಿಳಿದಿದೆ. ಒಮ್ಮೆ ಅದರ ರುಚಿ ನೋಡಬೇಕೆಂದು ತಿಳಿದು ಸಾಕ್ಷಾತ ಶಿವನೇ ಶರಣಬಸವರ ದಾಸೋಹ ಮಹಾಮನೆಯ ಕಡೆಗೆ ಬಂದು ಪಂಕ್ತಿಯೊಳಗೆ ಹೋಗಿ ಕಣ್ಮುಚ್ಚಿ ಕುಳಿತು ಬಿಟ್ಟ. ಶರಣರ ಅಂತರಂಗದ ಚಕ್ಷುಗೆ ಪರಮಾತ್ಮನ ದಿವ್ಯದರ್ಶನವಾಗಿದೆ. ನಿಂತಲ್ಲಿಯೇ ನಮಿಸಿ ಎಲ್ಲಿ ಪಂಕ್ತಿನಡೆದಿದೆಯೊ ಅಲ್ಲಿಗೆ ಬಂದು ಪಂಕ್ತಿಯಲ್ಲಿ ಕುಳಿತ ಆ ಜಂಗಮನ ಪಾದಕ್ಕೆ ಶರಣು ಹೋಗುತ್ತಾರೆ. ಅಲ್ಲಿ ಬಂದಂತಹ ಎಲ್ಲರಿಗೂ ಈ ಜಂಗಮ ಅಂತಿಂತಹ ಜಂಗಮನಲ್ಲ ಸಾಕ್ಷಾತ ಶಿವನೇ ಈ ರೂಪವನ್ನು ಧರಿಸಿ ಬಂದಿದ್ದಾನೆ ನಮ್ಮ ನಿಮ್ಮೆಲ್ಲರನ್ನು ಹರಿಸಿ ಆಶೀರ್ವದಿಸಲು ಎಂದು ಹೇಳಿ ನಮಸ್ಕರಿಸುತ್ತಾರೆ. ತಕ್ಷಣ ಆ ಜಂಗಮ ತನ್ನ ರೂಪವನ್ನು ಬಿಟ್ಟು ಶಿವರೂಪ ತೋರಿ ಎಲ್ಲರಿಗೂ ಆಶೀರ್ವಾದ ಮಾಡುತ್ತಾರೆ.

ಶರಣರ ಆಭರಣಗಳೆಂದರೆ ಲಿಂಗ, ರುದ್ರಾಕ್ಷಿ , ಮಂತ್ರ ಇವು ಅವರಿಗೆ ಧರ್ಮಗಳು, ಆಚರಣೆಯ ವಸ್ತುಗಳು. ಅವುಗಳನ್ನೆಂದೂ ಬಿಟ್ಟು ಇರಲಿಲ್ಲ ಶರಣರು. ಪ್ರಸಾದದಲ್ಲಿ ಶಿವನಿರುತ್ತಾನೆ ಹೇಗೆ ತೋರಿಸಿರಿ? ಎಂದೊಬ್ಬ ಸವಾಲು ಹಾಕಿದಾಗ ಶರಣರು ಸುಮ್ಮನಾಗುತ್ತಾರೆ. ಸವಾಲು ಹಾಕಿದವನು ಹಸಿವೆಯಿಂದ ಪ್ರಸಾದಕ್ಕೆ ಕೂತಿದಾಗ ಪ್ರಸಾದ ಅವನ ಬಾಯಿಗೆ ಹೋಗುತ್ತಿಲ್ಲ. ಎರಡು ಮೂರು ದಿನಗಳು ಕಳೆದು ಆತ ನಿತ್ರಾಣಗೊಂಡ, ಜೀವ ಹೋಗುವ ಪ್ರಸಂಗ ಬಂತು. ಶರಣರ ಹತ್ತಿರ ಬಂದ, ಶರಣರು ಮೊದಲು ಪ್ರಸಾದ ಮಾಡಿಸಿದರು. ನಂತರ ಹೇಳಿದರು’ ಗೊತ್ತಾಯತ್ತಲ್ಲಪ್ಪ ಪ್ರಸಾದ ಮಹಿಮೆ. ಪರಮಾತ್ಮ ಜೀವಸಂಕುಲ ಬದುಕಲೆಂದು ಪ್ರಸಾದ ನೀಡಿದ್ದಾನೆ, ನೀರು ಕೊಟ್ಟಿದ್ದಾನೆ. ಅವಿಲ್ಲದಿದ್ದರೆ ನಾವ್ಯಾರು ಇಲ್ಲ. ಅದರಲ್ಲಿ ಜೀವವಿದೆ, ಪ್ರಾಣವಿದೆ ಎಂದು ಹೇಳಿ ಕಳುಹಿಸುತ್ತಾರೆ. ಸುಬೇದಾರ ಲಿಂಗಣ್ಣನಿಗೆ ಅರಿವು ಮೂಡಿಸಿದ, ಗುರು ಮಹಿಮೆ ತಿಳಿಸಿರುವ ಲೀಲೆಗಳನ್ನು ಹೇಳಿದರು.

ಡಾ.ಅರುಣಕುಮಾರ ಲಗಶೆಟ್ಟಿ, ಪ್ರಾಧ್ಯಾಪಕ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here