ಸಿನಿಮಾ ಸಂಕಟಗಳಿಗೆ ಧ್ವನಿಯಾಗುವ ಒಂದು ಕಲಾ ಮಾಧ್ಯಮ; ನಿರ್ದೇಶಕ ಡಾ.ಗಿರೀಶ್‌ ಕಾಸರವಳ್ಳಿ

0
21

ಆಳಂದ; ಸಾಹಿತ್ಯ ಶಬ್ದಗಳ ಲೋಕವಾದರೆ ಸಿನಿಮಾ ಬಿಂಬಗಳ ಲೋಕವಾಗಿದೆ. ಅಮೂರ್ತವಾದ ಶಬ್ದಗಳ ಮೂಲಕ ಸಾಹಿತ್ಯ ಮೂರ್ತಿ ರೂಪವನ್ನು ಚಿತ್ರಿಸುವ ಪ್ರಯತ್ನವಾದರೆ ಸಿನಿಮಾ ಮೂರ್ತ ಬಿಂಬಗಳ ಮೂಲಕ ಮೂರ್ತವಾದ ಬದುಕನ್ನು ಕಟ್ಟಿಕೊಡುತ್ತದೆ ಎಂದು ಖ್ಯಾತ ಸಿನಿಮಾ ನಿರ್ದೇಶಕ ಡಾ.ಗಿರೀಶ್‌ ಕಾಸರವಳ್ಳಿ ಹೇಳಿದರು.

ಆಳಂದ ತಾಲೂಕಿನ ಕಡಗಂಚಿಯ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಕನ್ನಡ ವಿಭಾಗ ಮತ್ತು ಬಂಡಾರ ಪ್ರಕಾಶನ, ಮಸ್ಕಿ ಇವರ ಸಹಯೋಗದಲ್ಲಿ ನಡೆದ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

“ಸಿನಿಮಾಗಳು ಸಾರ್ವಕಾಲಿಕ ಸತ್ವವನ್ನು ಕಟ್ಟಿಕೊಡುವ ಅದರೊಟ್ಟಿಗೆ ಇಂದಿನ ಸಂಕಟಗಳಿಗೆ ಧ್ವನಿಯಾಗುವ ಒಂದು ಕಲಾ ಮಾಧ್ಯಮ. ಸಿನಿಮಾ ಒಂದರ ಗುಣವನ್ನು ಅವುಗಳ ಜೀವಂತಿಕೆಯನ್ನು ಅದರ ಸಿನಿಮಾತ್ಮಕ ಗುಣ ನಿರ್ಧರಿಸುತ್ತದೆ. ಸಾಹಿತ್ಯ ಕೃತಿಯೊಂದನ್ನು ಸಿನಿಮಾ ಆಗಿಸುವುದು ಒಂದು ಕಲೆ. ಯಾವುದೇ ಸಾಹಿತ್ಯ ಕೃತಿಯನ್ನು ಇದ್ದ ಹಾಗೆಯೆ ಕಟ್ಟಿಕೊಡುವುದು ನನ್ನ ಮಾದರಿ ಅಲ್ಲ. ಹಲವು ಸಿನಿಮಾಗಳಲ್ಲಿ ಸಾಹಿತ್ಯದಲ್ಲಿ ಇಲ್ಲ ಗುಣಗಳು ಸೇರಿಕೊಂಡಿದೆ. ಅದು ಸಾಹಿತ್ಯ ಕೃತಿಯೊಂದರ ಮರು ಓದು, ಮರು ವ್ಯಾಖ್ಯಾನ ಆಗಿರುತ್ತದೆ. ಇದು ಕೃತಿಯೊಂದಕ್ಕೆ ಮುಂಚಲನೆಯನ್ನೂ ಕೊಡಬಲ್ಲದು” ಎಂದು ಹೇಳಿದರು.

ಮೂಲ ಕಥೆಯನ್ನು ಪರದೆಯ ಮೇಲೆ ಯಥಾವತ್ತಾಗಿ ರೂಪಾಂತರ ಮಾಡುವ ಬದಲಾಗಿ ಅದರ ಪುನರ್‌ ನಿರ್ಮಾಣ ಹೆಚ್ಚು ಸೂಕ್ತ‌ ಎಂದರು. ತಮ್ಮ ನಿರ್ದೇಶನದ ಕನಸೆಂಬೋ ಕುದುರೆಯನೇರಿ, ತಾಯಿ ಸಾಹೇಬ್ ಮೊದಲಾದ ಚಿತ್ರಗಳ ಕೆಲವು ದೃಶ್ಯಗಳನ್ನು ತೋರಿಸುತ್ತಾ ಅವುಗಳ ಹಿನ್ನಲೆ, ಪಾತ್ರಗಳು, ಸಾಹಿತ್ಯ, ಕಲಾತ್ಮಕತೆ ಮೊದಲಾದ ಅಂಶಗಳನ್ನು ವಿವರಿಸಿ ತಿಳಿ ಹೇಳಿದರು.

ಉಪನ್ಯಾಸದ ನಂತರ ಶಬ್ದಗಳ ಲೋಕದಿಂದ ಬಿಂಬಗಳ ಲೋಕದದೆಡೆಗೆ ಸಾಗುವ ಸ್ವಾರಸ್ಯಕರವಾದ ಪಯಣದ ಕುರಿತು ಸಂವಾದ ನಡೆಯಿತು.

ಸಂವಾದದಲ್ಲಿ ಕಲಬುರಗಿ ಜಿಲ್ಲೆಯ, ವಿಶ್ವವಿದ್ಯಾಲಯದ ಹಾಗೂ ಕನ್ನಡ ವಿಭಾಗದ ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರೊ. ಬಸವರಾಜ ಕೋಡಗುಂಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿಭಾಗದ ಚಟುವಟಿಕೆಗಳ ಮತ್ತು ಸಿನಿಮಾ ಜಗತ್ತಿನಲ್ಲಿ ಉದ್ಯೋಗಾವಕಾಶಗಳ ಕುರಿತು ತಿಳಿಸಿದರು.

ಈ ಸಂದರ್ಭದಲ್ಲಿ ಮಾನವಿಕ ಮತ್ತು ಭಾಷಾ ನಿಕಾಯದ ಡೀನ್ ಮತ್ತು ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ. ವಿಕ್ರಮ ವಿಸಾಜಿ, ಬಂಡಾರ ಪ್ರಕಾಶನದ ಪರುಶರಾಮ ಕೋಡಗುಂಟಿ, ಸಂಧ್ಯಾ ಹೊನಗುಂಟಿಕರ್‌, ಶಾಂತಾ, ಚಿದಾನಂದ ಸಾಲಿ, ಪ್ರೊ. ಶಿವಗಂಗಾ ರುಮ್ಮ, ಡಾ. ಟಿ.ಡಿ. ರಾಜಣ್ಣ, ಡಾ. ವಿಜಯಕುಮಾರ ಎಚ್.‌ ವಿಶ್ವಮಾನವ, ಸೇರಿದಂತೆ ಇತರೆ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಜರಿದ್ದರು.

ಕರಿಲಿಂಗ ನಾಟೇಕರ್‌ ನಿರೂಪಿಸಿದರು. ವಿಜಯಲಕ್ಷ್ಮೀ ದೊಡ್ಡಮನಿ ಸ್ವಾಗತಿಸಿದರು. ಪೂರ್ಣಿಮಾ ಪರಿಚಯಿಸಿದರು, ಲಕ್ಷ್ಮೀ ಕಟ್ಟಮನಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here