ಊಹಾಪೋಹ ಪತ್ರಿಕೋದ್ಯಮ ಅಪಾಯಕಾರಿ: CM ಮಾಧ್ಯಮ ಸಲಹೆಗಾರ ಪ್ರಭಾಕರ್

0
23

ಬೆಂಗಳೂರು; ತಂತ್ರಜ್ಞಾನವೆಂಬುದು ಬೆಂಕಿ ಇದ್ದ ಹಾಗೆ;ಅದರಿಂದ ಅಡುಗೆಯನ್ನು ಮಾಡಬಹುದು ಮತ್ತು ಮನೆಯನ್ನೂ ಸುಡಬಹುದು.ಅದನ್ನು ಉಪಯೋಗಿಸುವ ಮನೋಭಾವದ ಮೇಲೆ ನಿಂತಿದ್ದು, ಮಾಧ್ಯಮ ಕ್ಷೇತ್ರದಲ್ಲಿ ಸದುದ್ದೇಶಕ್ಕೆ ಅದನ್ನು ಬಳಸುವ ಕೆಲಸವಾಗಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಅಭಿಪ್ರಾಯಪಟ್ಟರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಸಹಯೋಗದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಕೃತಕ ಬುದ್ಧಿಮತ್ತೆಯ ಕಾಲಘಟ್ಟದಲ್ಲಿ ಮಾಧ್ಯಮಗಳ ಕುರಿತು ಇಲಾಖೆಯ ಸುಲೋಚನಾ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Contact Your\'s Advertisement; 9902492681

ಕೃತಕ ಬುದ್ಧಿಮತ್ತೆಯ ಈ ಕಾಲಘಟ್ಟದಲ್ಲಿ ಸುದ್ದಿಗಳ ಖಚಿತತೆ,ನಿಖರತೆ ಮತ್ತು ಸ್ಪಷ್ಟತೆ ಸವಾಲು ನಮ್ಮ ಮುಂದಿದೆ ಎಂದು ಹೇಳಿದ ಅವರು ನಟಿ ರಶ್ಮೀಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ವೈರಲ್ ಪ್ರಸ್ತಾಪಿಸಿದರು. ನಟಿ ರಶ್ಮೀಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ ಅದು ಫೇಕ್ ಎಂದು ಗೊತ್ತಾಗುವುದರೊಳಗೆ ಲಕ್ಷಾಂತರ ಮಂದಿಗೆ ತಲುಪಿತ್ತು;ಅವರು ಅಸಲಿ ಎಂದೇ ನಂಬಿ ಬಿಟ್ಟಿದ್ದರು. ರಶ್ಮೀಕಾ ಬದಲು ಧಾರ್ಮಿಕ ಗುರು,ರಾಜಕೀಯ ನಾಯಕರೊಬ್ಬರದ್ದು ಡೀಪ್ ಫೇಕ್ ಮಾಡಿ ಹರಿಬಿಟ್ಟಿದ್ದರೇ ಸಮಾಜದಲ್ಲಿ ಅಲ್ಲೊಲ್ಲ ಕಲ್ಲೋಲವಾಗುತ್ತಿತ್ತು ಎಂದು ಹೇಳಿದ ಕೆವಿಪಿ ಅವರು ಈ ಹಿಂದೆ ಸುದ್ದಿಗಳನ್ನು ಖಚಿತತೆ ಪಡಿಸಿಕೊಂಡು ಸುದ್ದಿಬಿಡುಗಡೆಗೆ ಕ್ರಮವಹಿಸಲಾಗುತ್ತಿತ್ತು;ಧಾವಂತ ಮತ್ತು ನಮ್ಮಲ್ಲಿಯೇ ಸುದ್ದಿ ಮೊದಲು ಎಂಬ ಅವಸರದಲ್ಲಿ ಅದು ಕಾಣೆಯಾಗುತ್ತಿದೆ ಎಂದರು.

ದೃಶ್ಯಮಾಧ್ಯಮಗಳಲ್ಲಿ ಅಬ್ಬರ ಜಾಸ್ತಿ;ಹೂರಣ ಕಡಿಮೆ. ವಿದ್ಯುನ್ಮಾನ,ಸಾಮಾಜಿಕ ಮಾಧ್ಯಮ ಎಷ್ಟೇ ಬೆಳೆದಿದ್ದರೂ ಸಹ ಮುದ್ರಣ ಮಾಧ್ಯಮದ ಪ್ರಭಾವ ಕಡಿಮೆಯಾಗಿಲ್ಲ;ಇಂದಿಗೂ ತನ್ನ ಮೌಲ್ಯ ಕಾಪಾಡಿಕೊಂಡು ಬಂದಿದೆ.ಇದಕ್ಕೆ ಕಾರಣ ನಿಖರತೆ ಮತ್ತು ವಿಶ್ವಾಸರ್ಹತೆ ಎಂದು ಹೇಳಿದರು.

ಇತ್ತೀಚೆಗೆ ಪತ್ರಿಕೋದ್ಯಮದಲ್ಲಿ ಊಹಾಪೋಹ ಪತ್ರಿಕೋದ್ಯಮವೆಂಬ ಅನಾಹುತಕಾರಿ ಬೆಳವಣಿಗೆ ಶುರುವಾಗಿದ್ದು, ಈ ಊಹೆಗೆ ಮಿತಿಯೇ ಇಲ್ಲ. ಕಣ್ಮುಂದಿರುವ ಸತ್ಯವನ್ನು ತಮಗೆ ಬೇಕಾದಂತೆ ಚಿತ್ರಿಸಲಾಗುತ್ತಿದೆ ಎಂದು ಹೇಳಿದ ಅವರು ಮುಖ್ಯಮಂತ್ರಿಗಳ ಮನೆಗೆ ರಾಜಕೀಯ ನಾಯಕರು ಸಹಜವಾಗಿ ಭೇಟಿಯಾದರೂ ಊಹಾಪೋಹದಿಂದ ವರದಿ ಭಿತ್ತರಿಸುತ್ತಿರುವುದನ್ನು ಪ್ರಸ್ತಾಪಿಸಿ ಬೇಸರ ವ್ಯಕ್ತಪಡಿಸಿದರು.

ಪತ್ರಿಕೋದ್ಯಮ ವಿದ್ಯಾರ್ಥಿಗಳು ಪರಿಪೂರ್ಣ ಪತ್ರಕರ್ತರಾಗಬೇಕಾದರೇ ದಿನಪತ್ರಿಕೆಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು; ಪತ್ರಿಕೆಗಳಲ್ಲಿ ಬಂದಿರುವ ಸುದ್ದಿಗಳು,ವಿಶೇಷ ವರದಿಗಳನ್ನು ಗಮನಿಸಬೇಕು;ಇದೆಲ್ಲವೂ ಮಾಧ್ಯಮಗಳ ಸುದ್ದಿಮನೆಗಳಿಗೆ ಬದುಕುಕಟ್ಟಿಕೊಳ್ಳಲು ಹೋದಾಗ ಅನುಕೂಲವಾಗುತ್ತದೆ ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ಅವರು ಮಾತನಾಡಿ, ವಾಣಿಜ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಈಗಾಗಲೇ ಶುರುವಾಗಿದೆ;ಮಾಧ್ಯಮ ಕ್ಷೇತ್ರದಲ್ಲಿ ತಡವಾಗಿ ಬಂದಿದೆ; ಬ್ರೇಕಿಂಗ್ ನ್ಯೂಸ್ ರೇಸ್‍ನಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ ದೊಡ್ಡದಿದೆ ಮತ್ತು ಈ ಕೃತಕ ಬುದ್ಧಿಮತ್ತೆ ಸೃಷ್ಟಿಸುತ್ತಿರುವ ಸವಾಲುಗಳ ಬಗ್ಗೆ ಎಲ್ಲರೂ ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ ಎಂದರು.

ಹಿರಿಯ ಪತ್ರಕರ್ತರು ಹಾಗೂ ಖ್ಯಾತ ವಿಜ್ಞಾನ-ತಂತ್ರಜ್ಞಾನ ಅಂಕಣಕಾರರಾದ ನಾಗೇಶ ಹೆಗಡೆ, ವಿಜ್ಞಾನ ಅಂಕಣಕಾರರಾದ ಟಿ.ಜಿ.ಶ್ರೀನಿಧಿ, ತಂತ್ರಾಂಶ ಪರಿಣಿತರಾದ ಕಾವ್ಯಶ್ರೀ ತಿಮ್ಮಯ್ಯ ಅವರು ಕೃತಕ ಬುದ್ಧಿಮತ್ತೆಯ ಕಾಲಘಟ್ಟದಲ್ಲಿ ಮಾಧ್ಯಮಗಳ ಕುರಿತು ಮಾತನಾಡಿದರು. ನಂತರ ನೆರೆದಿದ್ದವರೊಂದಿಗೆ ಸಂವಾದ ನಡೆಸಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಿ.ರೂಪಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ್ ಸೇರಿದಂತೆ ಹಿರಿಯ ಪತ್ರಕರ್ತರು ಹಾಗೂ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here