ಶಹಾಬಾದ: ವಿಶ್ವದ ಅತಿ ದೊಡ್ಡ ಸಂವಿಧಾನ ರಚಿಸುವ ಮೂಲಕ ಭಾರತೀಯರ ಬದುಕು ರೂಪಿಸಿದ ಮಹಾನ್ ನಾಯಕ ಅಂಬೇಡ್ಕರ್ರಾಗಿದ್ದಾರೆ ಎಂದು ಅನುದಾನಿತ ಶಿಕ್ಷಕ ಹಾಗೂ ಶಿಕ್ಷಕೇತರ ಸಂಘದ ತಾಲೂಕಾಧ್ಯಕ್ಷ ಪ್ರವೀಣಕುಮಾರ ಹೇರೂರ್ ಹೇಳಿದರು.
ಅವರು ಬುಧವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಅಂಗವಾಗಿ ನಗರದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಅಂಬೇಡ್ಕರ್ರ ಸತತ ಪರಿಶ್ರಮದ ಫಲವಾಗಿ ಸಂವಿಧಾನ ರೂಪುಗೊಂಡಿದೆ. ದೀನ ದಲಿತರಿಗೆ ಬೆಳಕು ನೀಡುವ ಮೂಲಕ ಸಾಮಾಜಿಕ ನ್ಯಾಯ ಎತ್ತಿ ಹಿಡಿದಿದ್ದಾರೆ. ಹೀಗಾಗಿ ಅವರು ದೇಶದ ಪ್ರತಿಯೊಬ್ಬರ ಮನದಲ್ಲಿ ಅಚ್ಚಳಿಯದೇ ಉಳಿದುಕೊಂಡಿದ್ದಾರೆ ಎಂದು ಬಣ್ಣಿಸಿದರು.
ಸಂತೋಷ ಸಲಗರ್ ಮಾತನಾಡಿ,ಇಂದಿಗೂ ದಲಿತರು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದದೆ ಇರುವುದಕ್ಕೆ ಅಜ್ಞಾನವೇ ಕಾರಣ. ಆದ್ದರಿಂದ ಮೂಢನಂಬಿಕೆಗಳನ್ನು ಬಿಟ್ಟು ಡಾ|| ಬಿ.ಆರ್.ಅಂಬೇಡ್ಕರ್ರವರು ಕಂಡ ಕನಸನ್ನು ನಾವು ಮತ್ತೆ ನಾವು ನನಸು ಮಾಡುವತ್ತ ಸಾಗಬೇಕಿದೆ. ಅಲ್ಲದೇ ನಮಗೆ ನೀಡಿದ ಮತದಾನದ ಹಕ್ಕನ್ನು ಸರಿಯಾದ ವ್ಯಕ್ತಿಗೆ ಚಲಾಯಿಸಿ, ಯೋಗ್ಯ ನಾಯಕನನ್ನು ಆರಿಸಬೇಕಾದ ಕರ್ತವ್ಯ ನಮ್ಮದಾಗಿದೆ ಎಂದರು.
ಮಹೇಂದ್ರ ದೊಡ್ಡಮನಿ, ಗಣೇಶ ಜಾಯಿ,ಚನ್ನಬಸಪ್ಪ ಕೊಲ್ಲೂರ್,ರತನ್ರಾಜ, ಸುರೇಶ, ಪ್ರವೀಣ ರಾಜನ್, ಶಿವಯೋಗಿ ಕಟ್ಟಿ, ಸತೀಶ, ಮಹಾದೇವ, ಸುರೇಶ ಕುಲಕರ್ಣಿ, ಅಲ್ಲಮಪ್ರಭು ಮಸ್ಕಿ ಸೇರಿದಂತೆ ಅನೇಕರು ಇದ್ದರು.