ವಚನ ಸಾಹಿತ್ಯ ವಿಶ್ವದ ಸಂವಿಧಾನ; ಶರಣ ಸಾಹಿತ್ಯ ಪರಿಷತ್‌ ದತ್ತಿ ಉಪನ್ಯಾಸದಲ್ಲಿ ಡಾ.‌ಶಿವರಂಜನ ಸತ್ಯಂಪೇಟೆ ಅಭಿಮತ

0
19

ಕಮಲಾಪುರ: ಆಧುನಿಕ ಸಂವಿಧಾನಗಳು ತಮ್ಮ ನಾಗರಿಕರು, ದೇಶದ ಆಡಳಿತಕ್ಕೆ ಮಾತ್ರ ಸೀಮಿತವಾಗಿವೆ. ಬಸವಾದಿ ಶರಣರು ರಚಿಸಿದ ವಚನಗಳು ಇಡಿ ಮನುಕುಲದ ಬದುಕಿನ ಜೀವನಾನುಭವ, ನೀತಿ, ನಿಯಮಗಳಾಗಿವೆ. ಸರ್ವವ್ಯಾಪಿ, ಸಾರ್ವಕಾಲಿಕ ಪ್ರಸ್ತುತವಾಗಿರುವ ವಚನ ಸಾಹಿತ್ಯ ವಿಶ್ವದ ಸಂವಿಧಾನ ವಾಗಿದೆ ಎಂದು ಪತ್ರಕರ್ತ- ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ತಿಳಿಸಿದರು.

ತಾಲ್ಲೂಕಿನ ಕುರಿಕೋಟಾ ಚೆನ್ನವೀರ ಶಿವಯೋಗಿ ಪ್ರೌಢ ಶಾಲೆಯಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್‌ ವತಿಯಿಂದ ಶರಣಮ್ಮ ವೀರಭ್ರದಪ್ಪ ಅಕ್ಕೋಣಿ ಸ್ಮರಣಾರ್ಥ ಬುಧವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಶರಣ ವಚನಗಳಲ್ಲಿ ವ್ಯಕ್ತಿತ್ವ ವಿಕಸನ ವಿಷಯ ಕುರಿತು ಅವರು ಮಾತನಾಡಿದರು.

Contact Your\'s Advertisement; 9902492681

ಆಯಾ ಕಾಲ, ದೇಶಕ್ಕೆ ತಕ್ಕಂತೆ ರಚಿಸಿದ ಅಲ್ಲಿಯ ಜನರಿಗೆ ಅನ್ವಯವಾಗುವಂತೆ ಅನೇಕ ರಾಷ್ಟ್ರಗಳು ಸಂವಿಧಾನವನ್ನು ರಚಿಸಿಕೊಂಡಿವೆ. ಅವು ಪರಿಪೂರ್ಣವಾಗಿಲ್ಲ. ಆದರೆ ವಚನ ಸಂವಿಧಾನ ಎಲ್ಲ ಕಾಲಕ್ಕೂ ಅನ್ವಯ ಎಂದು ಹೇಳಿದರು.

ವಚನ ಸಾಹಿತ್ಯ ಬದುಕಿನ ಸಾರ್ಥಕತೆಗೆ ಬೇಕಾದ ಎಲ್ಲ ವಿಷಯಗಳನ್ನು ಒಳಗೊಂಡಿದೆ. ಒಂದೊಂದು ವಚನಗಳು ಸಾವಿರಾರು ಕಾನೂನುಗಳಿಗೆ ಸಮವಾಗಿವೆ. ಬಸವಣ್ಣನವರ ‘ಕಳಬೇಡ ಕುಲಬೇಡ ಹುಸಿಯ ನುಡಿಯಲು ಬೇಡ’ ವಚನ ಐಪಿಸಿ 511 ಸೆಕ್ಷೆನ್‌ ಗಳಿಗೆ ಅನ್ವಯವಾಗುತ್ತದೆ. ಈ ವಚನದಲ್ಲಿನ ಸಪ್ತ ಸೂತ್ರಗಳನ್ನು ಅಳವಡಿಸಿಕೊಂಡರೆ ಶ್ರೇಷ್ಠ ವ್ಯಕ್ತಿತ್ವ ರೂಪಗೊಳ್ಳುತ್ತದೆ. ಆಚಾರ ವಿಚಾರಗಳಿಗೆ ಸರಿ ಹೊಂದುವ ಮಾನವೀಯ ಮೌಲ್ಯದ ಸಂವಿಧಾನವನ್ನು ಶರಣರು ನಮಗೆ ಕೊಟ್ಟಿದ್ದಾರೆ. ಮನಷ್ಯ ಶುದ್ಧಗೊಂಡಾಗ ಮಾತ್ರ ವ್ಯಕ್ತಿತ್ವ ವಿಕಸನವಾಗುತ್ತದೆ. ಮನುಷ್ಯನನ್ನು ನಿಗ್ರಹಿಸುವ ಮನಸ್ಸನ್ನು ಶುದ್ಧಗೊಳಿಸವ ಕಾರ್ಯ ವಚನಗಳ ಮೂಲಕ ಶರಣರು ಮಾಡಿದ್ದಾರೆ ಎಂದರು.

ದತ್ತಿ ಉಪನ್ಯಾಸ ದಾಸೋಹಿ ಅಪ್ಪಾರಾವ ಅಕ್ಕೋಣೆ ಮಾತನಾಡಿ ನಮ್ಮ ನಂಬಿಕೆಯೆ ದೇವರು. ತಂದೆ, ತಾಯಿ ನಮ್ಮ ಕಣ್ಣಿಗೆ ಕಾಣುವ ದೇವರು. ದ್ವೇಷ, ಅಸೂಯೆ ಬಿಟ್ಟು ಸರ್ವರನ್ನು ಪ್ರೀತಿಸಿದರೆ ಭೂಮಿಯ ಮೇಲೆಯೆ ಸ್ವರ್ಗವಿದೆ. ತಂದೆ ತಾಯಿ, ಗುರು ಹಾಗೂ ಸಮಾಜದ ಋಣ ತೀರಿಸಬೇಕು ಇದನ್ನು ಶರಣರು ಹೇಳಿಕೊಟ್ಟಿದ್ದಾರೆ ಎಂದರು.

ಶರಣ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಶರಣಬಸಪ್ಪ ವಡ್ಡನಕೇರಿ, ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ತೀರ್ಥಕುಮಾರ ಬೆಳಕೋಟಾ, ಮುಖ್ಯ ಶಿಕ್ಷಕಿ ಶಾಂತಾಬಾಯಿ ವಡ್ಡನಕೇರಿ, ಸುಲೋಚನಾ ವಡ್ಡನಕೇರಿ ವೇದಿಕೆಯಲ್ಲಿದ್ದರು.

ಅಂಬಾರಾಯ ಮಡ್ಡೆ ನಿರೂಪಿಸಿದರು. ವಿಜಯಕುಮಾರ ಕಂದಳ್ಳಿ ಸ್ವಾಗತಿಸಿದರು. ಶಂಕರಲಿಂಗ, ನಾಗೇಂದ್ರ, ದಿಲೀಪಕುಮಾರ ಇದ್ದರು.

ಮಕ್ಕಳಲ್ಲಿ ಶರಣರ ವಿಚಾರ, ವಚನ ಸಾಹಿತ್ಯದ ತಿರುಳು ಮನದಟ್ಟು ಮಾಡಿಸಲು ಈ ದತ್ತಿ ಉಪನ್ಯಾಸಗಳನ್ನು ಆಯೋಜಿಸಲಾಗುತ್ತಿದೆ. ಸಮಾಜದ ಸ್ವಾಸ್ಥ್ಯಕ್ಕೆ ಶರಣರ ಸಂದೇಶ ಅವಶ್ಯಕವಾಗಿದೆ. -ಡಾ.ಶರಣಬಸಪ್ಪ ವಡ್ಡನಕೇರಿ, ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here