ಕಲಬುರಗಿ; ನಿಮಗಾಗಿ ಮಾಡಿದ ಕೆಲಸ ನಿಮ್ಮೊಂದಿಗೆ ಬಂದರೆ ಮತ್ತೊಬ್ಬರಿಗಾಗಿ ಮಾಡಿದ ಕಾರ್ಯ ನಿಮ್ಮ ನಂತರ ಶಾಶ್ವತವಾಗಿ ಉಳಿಯುತ್ತವೆ ಶ್ರೀ ವೀರ ತಪಸ್ವಿ ಚನ್ನವೀರ ಶಿವಾಚಾರ್ಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಓಂಕಾರೇಶ್ವರ ಘೋಸಿಮಠ ಹೇಳಿದರು.
ನಗರದ ಒಕ್ಕಲಗೇರದಲ್ಲಿರುವ ಶ್ರೀ ವೀರ ತಪಸ್ವಿ ಚನ್ನವೀರ ಪ್ರೌಢಶಾಲೆಯ ಆವರಣದಲ್ಲಿ ಸಿದ್ದಣ್ಣ ಸಜ್ಜನ ಅವರ ಸೇವಾ ನಿವೃತ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಶಿಕ್ಷಕ ವೃತ್ತಿ ಕೇವಲ ನೌಕರಿ ಅಲ್ಲ ಅದು ಒಂದು ಕಾಯಕ. ಸಜ್ಜನರ ಸಂಘ ಹೆಜ್ಜೇನು ಸವಿದಂತೆ ಎನ್ನುವ ಹಾಗೆ ಸಿದ್ದಣ್ಣ ಸಜ್ಜನ ಅವರು ಮಕ್ಕಳಿಗೆ ಅಕ್ಷರದೊಂದಿಗೆ ಉತ್ತಮವಾದ ಸಂಸ್ಕಾರ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
ಸೇವಾ ನಿವೃತ್ತಿಯಾದ ಸಿದ್ಧಣ್ಣ ಸಜ್ಜನ ಮಾತನಾಡುತ್ತಾ ಮಕ್ಕಳಿಗೆ ದೊಡ್ಡ ದೊಡ್ಡ ವ್ಯಕ್ತಿಗಳನ್ನಾಗಿ ಮಾಡುವ ಬದಲು ಒಳ್ಳೆಯ ಸಂಸ್ಕಾರ ಹಾಗೂ ಮಾನವಿಯ ಮೌಲ್ಯಗಳನ್ನು ಬಿತ್ತುವ ಕಾರ್ಯ ನಿರಂತರವಾಗಿ ಸಾಗಬೇಕು. ಅಂದಾಗ ಮಾತ್ರ ಉತ್ತಮ ರಾಷ್ಟ್ರ ಕಟ್ಟಲು ಸಾಧ್ಯವಾಗುತ್ತದೆ. ಮಕ್ಕಳೇ ಭಾವಿ ಭವಿಷ್ಯದ ನಿರ್ಮಾಪಕರು, ಅವರಿಗೆ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಬಲಿಷ್ಠ ರಾಷ್ಟ್ರ ಕಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವೇದಿಕೆಯ ಮೇಲೆ ಅಪ್ಸರಮಿಯ, ಮಹಾಂತೇಶ ಸುರಪುರ, ಮುಖ್ಯ ಗುರುಗಳಾದ ಚಂದ್ರಕಲಾ ಉಕಲಿ, ಚಂದ್ರಶೇಖರ ಚಂದ್ರಕಿಮಠ, ಪ್ರೇಮಸಿಂಗ ಚೌಹಾಣ, ಬಸ್ಸಮ್ಮ ಗೋಸಿಮಠ, ಕಲ್ಯಾಣಮ್ಮ ಸಜ್ಜನ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶರಣಗೌಡ ಕಿರಣಗಿ, ಚೆನ್ನಮಲ್ಲಯ್ಯ ಹಿರೇಮಠ, ಶಿವಾನಂದ ಬಿರಾದಾರ, ನ್ಯಾಯವಾದಿ ಹಣಮಂತರಾಯ ಅಟ್ಟೂರ, ಸಂತೋಷ ಸಜ್ಜನ, ಗುರುಸ್ವಾಮಿ, ಸುರೇಶ ಜಾದವ, ಶ್ರೀಧರ, ಶಿವಲಿಂಗಮ್ಮ ಹತಗುಂದಿ, ಶಿವಲಿಂಗಪ್ಪ ಕೆಂಗನಾಳ, ಶಿಕ್ಷಣ ಇಲಾಖೆಯ ಅಧಿಕಾರಿ ಮೊಹ್ಮದ ಅಫಸರ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸೇವಾ ನಿವೃತ್ತಿಯಾದ ಸಿದ್ದಣ್ಣ ಸಜ್ಜನ ದಂಪತಿಗಳಿಗೆ ಸಂಸ್ಥೆಯ ಪರವಾಗಿ ವಿಶೇಷವಾಗಿ ಗೌರವಿಸಲಾಯಿತು. ವಿಜಯಲಕ್ಷ್ಮಿ ಕೆಂಗನಾಳ ಪ್ರಾರ್ಥಿಸಿದರು. ಶಿವರಾಜ ನಾಯಕ ಸ್ವಾಗತಿಸಿದರು. ಸಿ ವಿ ಪಾಟೀಲ ನಿರೂಪಿಸಿದರು. ಶಿವಾನಂದ ಸಾಗರ ವಂದಿಸಿದರು.