ಕಲಬುರಗಿ: ಆಳಂದ-ಹಾವೇರಿ ವಾಯಾ ಮಾದನಹಿಪ್ಪರಗಾ ಮಾರ್ಗದ ಸಾರಿಗೆ ಬಸ್ ಕಾರ್ಯಾಚರಣೆಗೆ ಗುರುವಾರ ಆಳಂದ ತಾಲೂಕಿನ ಮಾದನಹಿಪ್ಪರಗಾ ಬಸ್ ನಿಲ್ದಾಣದಲ್ಲಿ ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಆಳಂದ ಶಾಸಕ ಬಿ.ಆರ್.ಪಾಟೀಲ ಅವರು ಚಾಲನೆ ನೀಡಿದರು.
ಈ ಬಸ್ ಪ್ರತಿ ದಿನ ಆಳಂದ ಬಸ್ ನಿಲ್ದಾಣದಿಂದ ಮದ್ಯಾಹ್ನ 3.30ಕ್ಕೆ ಹೊರಟು, ಮಾದನ ಹಿಪ್ಪರಗಾಗೆ 4.30ಕ್ಕೆ ತಲುಪಿ ಅಲ್ಲಿಂದ ಅಫಜಲಪುರ- ಸಿಂದಗಿ-ವಿಜಯಪುರ- ಜಮಖಂಡಿ- ಲೋಕಾಪುರ, ಸವದತ್ತಿ- ಧಾರವಾಡ- ಹುಬ್ಬಳ್ಳಿ ಮಾರ್ಗವಾಗಿ ಮರು ದಿನ ಬೆಳಿಗ್ಗೆ 6 ಗಂಟೆಗೆ ಹಾವೇರಿಗೆ ತಲುಪಲಿದೆ. ಇದೆ ಮಾರ್ಗದಲ್ಲಿ ಪ್ರತಿ ದಿನ ಸಂಜೆ 5.30 ಗಂಟೆಗೆ ಹಾವೇರಿಯಿಂದ ಹೊರಟು ಮರು ದಿನ ಬೆಳಿಗ್ಗೆ 7 ಗಂಟೆಗೆ ಆಳಂದ ತಲುಪಲಿದೆ.
ಈ ಸಂದರ್ಭದಲ್ಲಿ ಮಾದನಹಿಪ್ಪರಗಾ ವಿರಕ್ತ ಮಠದ ಪೂಜ್ಯ ಅಭಿನವ ಶಿವಲಿಂಗ ಮಹಾಸ್ವಾಮಿಗಳು, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕಲಬುರಗಿ ವಿಭಾಗ-2ರ ಸಿದ್ದಪ್ಪ ಜಿ. ಗಂಗಾಧರ, ವಿಭಾಗೀಯ ಸಂಚಾರ ಅಧಿಕಾರಿ ರವೀಂದ್ರ ಕುಮಾರ ಡಿಗ್ಗಿ, ವಿಭಾಗೀಯ ತಾಂತ್ರಿಕ ಶಿಲ್ಪಿ ಶೇಖ ಹುಸೇನ್, ಘಟಕ ವ್ಯವಸ್ಥಾಪಕ ಯೋಗಿನಾಥ ಸರಸಂಬಿ, ಅಂಕಿ ಸಂಖ್ಯೆ ಅಧಿಕಾರಿ ಮಲ್ಲಿನಾಥ ಸರಸಂಬಿ ಮತ್ತಿತರರು ಇದ್ದರು.