ಸುರಪುರ: ಪಟ್ಟಣದ ಸತ್ಯಂಪೇಟೆ ಗ್ರಾಮದಲ್ಲೊಂದು ಅಪರೂಪದ ಮದುವೆ ಕಾರ್ಯಕ್ರಮ ಫೆ. 26ರಂದು ನಡೆಯಿತು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಹಾಗೂ ಅಮರಮ್ಮ ಅವರ ಪುತ್ರಿ ಅಕ್ಕಮಹಾದೇವಿ ಹಾಗೂ ವಾಡಿಯ ಪಾರ್ವತಿ ಲಿಂಗನಗೌಡ ಪುತ್ರ ಮಲ್ಲಿಕಾರ್ಜುನ ಅವರ ವಚನಮಾಂಗಲ್ಯ ಕಾರ್ಯಕ್ರಮ ಆರಂಭವಾಗುವುದಕ್ಕೂ ಮುನ್ನ ಸುರಪುರ ಶಾಸಕ ರಾಜಾ ವೆÉಂಕಟಪ್ಪ ನಾಯಕ ಹಾಗೂ ಗಡಿ ಭಾಗದಲ್ಲಿ ಮೃತರಾದ ರೈತರ ನಿಧನ ಪ್ರಯುಕ್ತ ಎರಡು ನಿಮಿಷಗಳ ಕಾಲ ಮೌನಾಚರಣೆ ಆಚರಿಸಲಾಯಿತು.
ಮೇಲಾಗಿ ಮದುಮಕ್ಕಳಿಬ್ಬರೂ ಕಲ್ಯಾಣ ಮಹೋತ್ಸವ ಕುರಿತು ಮಾತನಾಡಿದ್ದು ವಿಶೇಷವಾಗಿತ್ತು.ಬಸವ ಮಾರ್ಗ ಪ್ರತಿಷ್ಠಾನದ ಬಸವ ಬೆಳಕು-112 ಕಾರ್ಯಕ್ರಮದಲ್ಲಿ ¥ಗÀ್ರತಿಪರ ಚಿಂತಕ ಪ್ರೊ. ಆರ್.ಕೆ. ಹುಡಗಿ ವಿಶೇಷ ಅನುಭಾವ ನೀಡಿ ಮದುವೆ ಎನ್ನುವುದು ಯಾವ ಸ್ವರ್ಗದಲ್ಲೂ ಆಗುವುದಲ್ಲ. ಇಲ್ಲಿಯೇ ಇದೇ ಭೂಮಿಯ ಮೇಲೆ ಆಗುವುದು. ಇಲ್ಲಿಯೇ ಕೂಡಿ ಬಾಳುವುದಾಗಿದೆ. ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎನ್ನುವಂತೆ ವಧು-ವರರು ಕೂಡಿ ಬಾಳುವುದು ಸಂಸಾರದ ಗುಟ್ಟು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಾಗರತ್ನ ಬಿ. ಪಾಟೀಲ ಮಾತನಡಿ, ಕುವೆಂಪು ಅವರ ಮಂತ್ರ ಮಾಂಗಲ್ಯ ಹಾಗೂ ಬಸವಣ್ಣನವರ ವಚನ ಮಾಂಗಲ್ಯ ಎರಡನ್ನೂ ಒಳಗೊಂಡ ಈ ಮದುವೆ ವೈಚಾರಿಕ ಹಿನ್ನೆಲೆಯಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟರು.
ಗಡಿ ಸೋಮನಾಳದ ಇಂದುಧರ ಸ್ವಾಮೀಜಿ, ಚಿಗರಳ್ಳಿ ಮರುಳಶಂಕರದೇವರ ಮಠದ ಸಿದ್ಧಬಸವ ಕಬೀರಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಚನ್ನಪ್ಪ ಆನೇಗುಂದಿ, ನೀಲಾಂಬಿಕೆ ವಿಶ್ವಾರಾಧ್ಯ ಸತ್ಯಂಪೇಟೆ ವೇದಿಕೆಯಲ್ಲಿದ್ದರು.
ಸಾನ್ನಿಧ್ಯ ವಹಿಸಿದ್ದ ಗುರುಮಠಕಲ್ ಖಾಸಾ ಮಠದ ಮುರುಘರಾಜೇಂದ್ರ ಶರಣರು ಮಾತನಾಡಿ, ಮದುವೆ ಮಂಟಪದಲ್ಲಿ ಮೌನಾಚರಣೆ ಹಾಗೂ ದಂಪತಿ ಮಾತನಾಡಿದ್ದು ಬಹುಶಃ ಇದೇ ಮೊದಲು ಎನಿಸುತ್ತದೆ ಇಂತಹ ಸರಳ ಮದುವೆಗಳ ಮೂಲಕ ಸಾಮಾನ್ಯರು ತಮ್ಮ ಒಲವಿನ ದಾಂಪತ್ಯ ಗೀತೆಯನ್ನು ಬರೆಯಬೇಕು ಎಂದು ತಿಳಿಸಿದರು.
ಡಾ. ಶಿವರಂಜನ ಸತ್ಯಂಪೇಟೆ ನಿರೂಪಿಸಿದರು. ವಿಶ್ವಾರಾಧ್ಯ ಸತ್ಯಂಪೇಟೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಂಗಣ್ಣ ಗುಳಗಿ ಶರಣು ಸಮರ್ಪಿಸಿದರು. ಸಾಕ್ಷಿ ಎಸ್. ಹಾಗೂ ಗುರುದೇವಿ ನರಕಲದಿನ್ನಿ ಸಂಗಡಿಗರು ಕಲ್ಯಾಣ ಮಹೋತ್ಸವ ಕಾರ್ಯಕ್ರಮ ನೆರವೇರಿಸಿಕೊಟ್ಟರು.
ವಚನ ಮಾಂಗಲ್ಯದ ವಿಶೇಷ; ಮದುವೆ ಸಮಾರಂಭಕ್ಕೆ ಸಾಕ್ಷಿಯಾದವರು ಯಾವುದೇ ಉಡುಗೊರೆ, ಕಾಣಿಕೆ ನೀಡಲಿಲ್ಲ. ಆಯೇರಿ ಮಾಡಲಿಲ್ಲ. ಬದಲಾಗಿ ತಮ್ಮ ಪ್ರೀತಿ ಅಭಿಮಾನದ ಉಡುಗೊರೆಯನ್ನು ದಂಪತಿಗೆ ಧಾರೆಯೆರೆದರು. ಬಾಜಾ ಭಜಂತ್ರಿಯ ಸಪ್ಪಳವಿರಲಿಲ್ಲ. ವಚನ ಮಾಂಗಲ್ಯಕ್ಕೂ ಮುನ್ನ ಹಿರಿಯ ವಕೀಲ ಜಿ.ಎಸ್. ಪಾಟೀಲ ಬಸವ ಧ್ವÀಜಾರೋಹಣ ನೆರವೇರಿಸಿದರು. ಅಕ್ಕಿ ಕಾಳಿನ ಬದಲಾಗಿ ಪುಷ್ಪವೃಷ್ಠಿ ಮಾಡಲಾಯಿತು. ಇದಕ್ಕೂ ಮೊದಲು ದಂಪತಿ ಸೇರಿದಂತೆ ಸಾರ್ವಜನಿಕರಿಗೆ ಸಂವಿಧಾನದ ಪೀಠಿಕೆ ಬೋಧಿಸಲಾಯಿತು.