ಸಂಗೀತ ಮತ್ತು ಮಾತಿನ ಸಮಾಗಮ ಕಾವ್ಯವೇ ಖವ್ವಾಲಿ: ಜನಾಬ ಸೈಯದ್ ಅಹ್ಮದ್ ಅಲಿ ಅಲ್ ಹುಸೇನಿ

0
85

ಕಲಬುರಗಿ: ಸಂಗೀತದ ಪ್ರಕಾರಗಳಲ್ಲಿ ಸೂಫಿ ಕಾವ್ಯವಾದ ಖವ್ವಾಲಿ ಸುಪ್ರಸಿದ್ಧ ಕಲೆಯಾಗಿದೆ. ಖವ್ವಾಲಿ ಪ್ರಧಾನವಾಗಿ ಪ್ರೀತಿ, ಭಕ್ತಿ ಮತ್ತು ಹಂಬಲವನ್ನು ಒಳಗೊಂಡಿದ್ದು, ಪ್ರಥಮವಾಗಿ ಮೈನುದ್ದಿನ್ ಚಿಸ್ತಿ ಇದನ್ನು ಬಳಸಿದರು. ಸೂಫಿ ಸಂತರಾದ ಖಾಜಾ ಬಂದೇನವಾಜರು ಕವಾಲಿಯನ್ನು ಅತ್ಯಂತ ಮನೋಜ್ಞವಾಗಿ ಹಾಡಿ ಪ್ರೇಕ್ಷರನ್ನು ಭಾವಪರವಸಗೊಳಿಸುತ್ತಿದ್ದರು. ಖವ್ವಾಲಿಯಲ್ಲಿ ಮಾತಿಗೆ ಬಹಳ ಮಹತ್ವವಿದೆ ಎಂದು ಖಾಜಾ ಬಂದೇನವಾಜ ವಿಶ್ವವಿದ್ಯಾಲಯದ ಸಮ ಕುಲಾಧಿಪತಿ ಜನಾಬ ಸೈಯದ್ ಅಹ್ಮದ್ ಅಲಿ ಅಲ್ ಹುಸೇನಿ ಅಭಿಪ್ರಾಯಪಟ್ಟರು.

ಗುಲಬರ್ಗಾ ವಿಶ್ವವಿದ್ಯಾಲಯ ಹಾಗೂ ನವದೆಹಲಿಯ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಸಹಯೋಗದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ (ಸಾಜ್ -ಈ -ಹಿಂದ್) 6ನೇ ಅಂತರ್ ವಿಶ್ವವಿದ್ಯಾಲಯಗಳ ರಾಷ್ಟ್ರೀಯ “ಖವ್ವಾಲಿ” ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಕವಾಲಿ ಸೂಫಿ ಸಂತರಲ್ಲಿ ಬಹಳ ಪ್ರಾಮುಖ್ಯತೆ ಹೊಂದಿದೆ. ವಿಶೇಷವಾಗಿ ಪ್ರಸಿದ್ಧ ಸೂಫಿ ಪಂಥದ ಸ್ಥಾಪಕನಾದ ಮೈನುದ್ದಿನ್ ಚಿಸ್ತಿಯು ಈ ಖವ್ವಾಲಿ ಹಾಡುಗಳ ಮೂಲಕ ಜನತೆಗೆ ಒಳ್ಳೆಯ ಸಂದೇಶವನ್ನು ಸಾರುತ್ತಿದ್ದರು. ಇಂದು ಆಯೋಜಿಸಿರುವ ಕವಾಲಿ ಸ್ಪರ್ಧೆಯು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಎಂದ ಅವರು ಖವ್ವಾಲಿ ಹಾಡುಗಳು ಶ್ರದ್ಧೆ ಮತ್ತು ಆಧ್ಯಾತ್ಮಿಕ ಸಾಮೀಪ್ಯವನ್ನು ಉತ್ತೇಜಿಸಲು ಸೂಫಿಗಳು ಪ್ರದರ್ಶಿಸಿದ ಸಂಗೀತದ ರೂಪ. ಹಲವಾರು ಖವ್ವಾಲಿ ಹಾಡುಗಳು ಸಂತರ ವೈಚಾರಿಕತೆಯನ್ನು ಹೊಗಳುತ್ತವೆ. ಆದಾಗ್ಯೂ, ಹೆಚ್ಚಿನ ಸಂಗೀತವು ಆಧ್ಯಾತ್ಮಿಕ ಮತ್ತು ಲೌಕಿಕ ಪ್ರೀತಿಯ ಬಗ್ಗೆ ಹೇಳುತ್ತದೆ. ಜನಸಮೂಹದ ನಡುವೆ ಪರಸ್ಪರ ಸಮೂಹ ಭಾವ ಮತ್ತು ಭಕ್ತಿ ಭಾವ ಬೆಳೆಸುವಲ್ಲಿ ಖವ್ವಾಲಿ ಹಾಡುಗಳು ಜನಪ್ರಿಯವಾಗಿವೆ ಎಂದರು.

ಖಾಜಾ ಬಂದೇನವಾಜ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಅಲಿ ರಝಾ ಮೂಸವಿ ಮುಖ್ಯ ಅತಿಥಿಯಾಗಿ ಮಾತನಾಡಿ ಖವಾಲಿ ಪ್ರಕಾರದ ಸಾಹಿತ್ಯ ಚಿಂತನೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು. ಆ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನಗೊಳ್ಳುತ್ತದೆ. ಇಂತಹ ಕಾರ್ಯಕ್ರಮ ರೂಪಿಸಿದ ಭಾರತೀಯ ವಿಶ್ವವಿದ್ಯಾಲಯಗಳ ಸಂಘ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯಕ್ಕೂ ಅಭಿನಂದನೆಗಳು ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಅಧ್ಯಕ್ಷತೆ ವಹಿಸಿ ಮಾತನಾಡಿ ದೇಶದ ವಿವಿಧ ರಾಜ್ಯಗಳ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಸಂತೋಷದ ವಿಷಯ. ಇದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ರಾಷ್ಟ್ರೀಯ ಭಾವೈಕ್ಯತೆ ಮತ್ತು ಅಂತರ್ ಸಾಂಸ್ಕೃತಿಕ ಚಿಂತನೆಯನ್ನು ಕವಲಿಯ ಮೂಲಕ ಬೆಳೆಸಲು ಸಾಧ್ಯವಾಗುತ್ತದೆ. ಇಂತಹ ಅವಕಾಶವನ್ನು ಗುಲಬರ್ಗಾ ವಿಶ್ವಾವಿದ್ಯಾಲಯದಲ್ಲಿ ಆಯೋಜಿಸಲು ಅವಕಾಶ ನೀಡಿರುವುದು ಹೆಮ್ಮೆಯ ಸಂಗತಿ. ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಸರ್ವರಿಗೂ ಧನ್ಯವಾದಗಳನ್ನು ತಿಳಿಸಿ ಸ್ಪರ್ಧಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯೆ ಪ್ರೊ. ಸಿ. ಸುಲೋಚನಾ, ಮೌಲ್ಯಮಾಪನ ಕುಲಸಚಿವೆ ಹಾಗೂ ಪ್ರಭಾರಿ ಕುಲಸಚಿವೆ ಪ್ರೊ. ಮೇಧಾವಿನಿ ಕಟ್ಟಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಹಾಗೂ ಸಾಂಸ್ಕೃತಿಕ ಸಂಯೋಜಕ ಪ್ರೊ. ಕೆ. ಲಿಂಗಪ್ಪ ಉಪಸ್ಥಿತರಿದ್ದರು.

ರಾಜ್ಯದ ವಿವಿಧ ವಿಶ್ವ ವಿದ್ಯಾಲಯಗಳಿಂದ ಆಗಮಿಸಿದ ವಿದ್ಯಾರ್ಥಿ ಕಲಾವಿದರು, ಸಹ ಕಲಾವಿದರು, ತಂಡದ ವ್ಯವಸ್ಥಾಪಕರು, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿಗಳು, ಅತಿಥಿ ಉಪನ್ಯಾಸಕರು, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಪ್ರೊ. ಪರಿಮಳ ಅಂಬೇಕರ್ ಸ್ವಾಗತಿಸಿದರು. ಕನ್ನಡ ಅಧ್ಯಯನ ಸಂಸ್ಥೆಯ ಅತಿಥಿ ಪ್ರಾಧ್ಯಾಪಕ ಡಾ. ಎಂ.ಬಿ. ಕಟ್ಟಿ ವಂದಿಸಿದರು. ಕಲಾ ನಿಕಾಯದ ಡೀನ್ ಪ್ರೊ. ಅಬ್ದುಲ್ ರಬ್ ಉಸ್ತಾದ್ ಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here