ಶಹಾಬಾದ : ಕಲಬುರಗಿ ಜಿಲ್ಲಾಡಳಿತ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಶಹಾಬಾದ ಮುಖ್ಯ ರಸ್ತೆಗಳಲ್ಲಿ “ಎತ್ತಿನ ಬಂಡಿ”ಗಳ ಮೂಲಕ ಹಮ್ಮಿಕೊಳ್ಳಲಾದ ಮತದಾರರ ಜಾಗೃತಿ ಜಾಥದ ಅಭಿಯಾನಕ್ಕೆ ತಾಲೂಕ ಪಂಚಾಯಿತಿ ಕಚೇರಿಯ ಆವರಣದಲ್ಲಿ ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ತಾಲೂಕ ಪಂಚಾಯಿತ ಇ. ಒ. ಮಲ್ಲಿನಾಥ ರಾವೂರ ಅವರು ರವಿವಾರ ಚಾಲನೆ ನೀಡಿದರು.
ಪೌರಾಯುಕ್ತ ಡಾ. ಗುರುಲಿಂಗಪ್ಪ ಮಾತನಾಡಿ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬರುವ ಮೇ 7 ರಂದು ಪ್ರತಿಯೊಬ್ಬ ಮತದಾರರು ಮತಗಟ್ಟೆಗಳಿಗೆ ತೆರಳಿ ತಪ್ಪದೇ ಮತದಾನ ಮಾಡಬೇಕು, ವಿವೇಚನೆಯಿಂದ ಹಾಕಿದ ಮತ ದೇಶಕ್ಕೆ ಹಿತ, ಮತದಾನ ನಮ್ಮ ಹಕ್ಕಾಗಿದೆ, ಅದನ್ನು ನಾವು ಸ್ವ-ಇಚ್ಛೆಯಿಂದ ಚಲಾಯಿಸಬೇಕು ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಶಹಾಬಾದ ತಾಲೂಕಿನ ಎಂಸಿಸಿ ನೂಡಲ್ ಅಧಿಕಾರಿ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿನಾಥ ರಾವೂರ ಅವರು ಎಲ್ಲರಿಗೂ ಮತದಾನ ಜಾಗೃತಿ ಮತ್ತು ಮತದಾನ ಅಭಿಯಾನದ ಪ್ರತಿಜ್ಞಾ ವಿಧಿ ಭೋದಿಸಿದರು.
ತಾಲೂಕ ಪಂಚಾಯಿತ ಮತ್ತು ನಗರ ಸಭೆ ಆವರಣದಲ್ಲಿ ಮತದಾರರ ಜಾಗೃತಿ ಅಭಿಯಾನದ ಅಂಗವಾಗಿ ಸ್ವಸಹಾಯ ಮಹಿಳಾ ಗುಂಪುಗಳಿಂದ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಂದ ಬಣ್ಣ, ಬಣ್ಣದ ರಂಗೋಲಿ ಹಾಕಲಾಗಿತ್ತು,
ಮೆರವಣಿಗೆಯಲ್ಲಿ ಗ್ರಾಮಗಳಿಂದ ಬಂದ ಎತ್ತಿನ ಬಂಡಿಗಳು ಪಾಲ್ಗೊಂಡು, ಎತ್ತುಗಳನ್ನು ಸಿಂಗರಿಸಿ, ಬಂಡಿಯಲ್ಲಿ ನಾನಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ರೈತರು ಮತದಾನದ ಮಹತ್ವ ಸಾರುವ ಸಂದೇಶಗಳುಳ್ಳ ಬಿತ್ತಿಪತ್ರಗಳನ್ನು ಹಿಡಿದು ಜಾಗೃತಿ ಮೂಡಿಸಿದರು.
ತಾಲೂಕು ಪಂಚಾಯತಿ , ನಗರಸಭೆ ಪೌರಾಯುಕ್ತ ಡಾ. ಕೆ. ಗುರುಲಿಂಗಪ್ಪ ತಾ. ಪಂ. ಈರಣ್ಣ ಸಾತ್ಗೇಡ, ಅನಿಲ ಕುಮಾರ ಮಾನ್ಪಡೆ, ಶಿವರಾಜ ಇರಳ್ಳಿ, ಸಂತೋಷ. ನಗರ ಸಭೆಯ ಶರಣಗೌಡ, ರಘುನಾಥ ನರ್ಸಾಳೆ, ಶಿವ ಕುಮಾರ, ಮಹ್ಮದ ಮೈನುದ್ದೀನ, ಸಿಡಿಪಿಓ ಡಾ. ವಿಜಯಲಕ್ಷ್ಮಿ ಹೇರೂರು, ಕಂದಾಯ ಇಲಾಖೆಯ ಗಂಗಾಧರ ಸೇರಿದಂತೆ ತಾ. ಪಂ, ನಗರ ಸಭೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.