ವಾಡಿ: ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಪರ್ಯಾಯ ಶಕ್ತಿಯಾಗಿ ಬಿರುಸಿನ ಪ್ರಚಾರಕ್ಕಿಳಿದಿರುವ ಕಲಬುರಗಿ ಲೋಕಸಭೆ ಚುನಾವಣೆಯ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್ಯುಸಿಐ) ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಕಾಮ್ರೇಡ್ ಎಸ್.ಎಂ.ಶರ್ಮಾ ವಾಡಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ಗುರುವಾರ ಪಕ್ಷದ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸುವ ಮೂಲಕ ಕೆಂಪು ಬಾವುಟ ಪ್ರದರ್ಶಿಸಿದರು. ಕ್ರಾಂತಿಕಾರಿ ಘೋಷಣೆಗಳನ್ನು ಕೂಗುವ ಮೂಲಕ ಬ್ಯಾಟ್ ಚಿನ್ಹೆಗೆ ಮತ ನೀಡುವಂತೆ ಜನರಲ್ಲಿ ಮನವಿ ಮಾಡಿದರು.
ಪಕ್ಷದ ಅಭ್ಯರ್ಥಿ ಎಸ್.ಎಂ.ಶರ್ಮಾ, ಎಸ್ಯುಸಿಐ ರಾಜ್ಯ ನಾಯಕ ಎಂ.ಶಶಿಧರ್, ಕಾರ್ಯದರ್ಶಿ ವೀರಭದ್ರಪ್ಪ ಆರ್.ಕೆ ಅವರು ಎತ್ತಿನ ಗಾಡಿಯಲ್ಲಿ ಮೆರವಣಿಗೆ ಹೊರಟು ಜನರ ಬೆಂಬಲ ಕೋರಿದರು.
ಚಿತ್ತಾಪುರ ತಾಲೂಕಿನ ವಾಡಿ ನಗರದ ಬಲರಾಮ ಚೌಕ್ದಿಂದ ಶ್ರೀನಿವಾಸ ಗುಡಿ ವೃತ್ತದ ವರೆಗೆ ರೋಡ್ ಶೋ ನಡೆಸಿದ ಬಳಿಕ ಮತದಾರರನ್ನುದ್ದೇಶಿಸಿ ಮಾತನಾಡಿದ ಎಸ್ಯುಸಿಐ ರಾಜ್ಯ ಸಮಿತಿಯ ಸೆಕ್ರೇಟರಿಯೇಟ್ ಸದಸ್ಯ ಎಂ.ಶಶಿಧರ್, ದೇಶದವನ್ನು ದಿವಾಳಿಯ ಹಂತಕ್ಕೆ ತಲುಪಿಸುವಲ್ಲಿ ಕಾಂಗ್ರೆಸ್ ಬಿಜೆಪಿ ಪಕ್ಷಗಳದ್ದು ಸಮಪಾಲಿದೆ. ಬಡವರು, ರೈತರು, ಕಾರ್ಮಿಕರು, ಯುವಕರು, ಮಹಿಳೆಯರ ಪರ ಮೊಸಳೆ ಕಣ್ಣೀರು ಸುರಿಸುತ್ತಲೇ ದುಡಿಯುವ ವರ್ಗದ ಸುತ್ತಲೂ ಶೋಷಕ ಸಾಮ್ರಾಜ್ಯ ಸೃಷ್ಠಿಸಿದ್ದಾರೆ. ಜಾತಿ ಧರ್ಮದ ಹೆಸರಿನಲ್ಲಿ ಜನರ ಐಕ್ಯತೆ ಒಡೆಯುತ್ತಿರುವ ಭ್ರಷ್ಟ ಕಾಂಗ್ರೆಸ್-ಬಿಜೆಪಿ ಪಕ್ಷಗಳನ್ನು ಸೋಲಿಸದಿದ್ದರೆ ಜನರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಶೋಷಣೆ ರಹಿತ ಸಮಾಜ ನಿರ್ಮಿಸಲು ದೇಶದಾದ್ಯಂತ ಹೋರಾಟ ಕಟ್ಟುತ್ತಿರುವ ಎಸ್ಯುಸಿಐ ಪಕ್ಷದ ಅಭ್ಯರ್ಥಿಗೆ ಮತ ಕೊಟ್ಟು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಎಸ್ಯುಸಿಐ ಕಾರ್ಯಕರ್ತರಾದ ವೆಂಕಟೇಶ ದೇವದುರ್ಗಾ, ಶರಣು ಹೇರೂರ, ಶಿವುಕುಮಾರ ಆಂದೋಲಾ, ಈರಣ್ಣ ಇಸಬಾ, ಮಲ್ಲಿನಾಥ ಹುಂಡೇಕಲ್, ರಾಜು ಒಡೆಯರಾಜ್, ಗೋವಿಂದ ಯಳವಾರ, ಗೌತಮ ಪರ್ತೂಕರ, ದತ್ತಾತ್ರೇಯ ಹುಡೇಕರ, ಸಿದ್ಧಾರ್ಥ ತಿಪ್ಪನೋರ, ಚೌಡಪ್ಪ ಗಂಜಿ, ಸಾಬಣ್ಣ ಸುಣಗಾರ, ಸಿದ್ದು ಮದ್ರಿ, ಮಲ್ಲಿಕಾರ್ಜುನ ಗಂದಿ, ಮಲ್ಲಣ್ಣ ದಂಡಬಾ, ಶರಣುಕುಮಾರ ದೋಶೆಟ್ಟಿ ಸೇರಿದಂತೆ ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.