ಸುರಪುರ: ಲೋಕಸಭಾ ಚುನಾವಣೆ ಹಾಗೂ ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮಸ್ಟರಿಂಗ್ ಕಾರ್ಯ ನಡೆಯುತ್ತಿದ್ದು,ಮತಯಂತ್ರಗಳನ್ನು ರವಾನಿಸಲಾಗುತ್ತಿದೆ ಎಂದು ವಿಧಾನಸಭಾ ಉಪ ಚುನಾವಣೆ ಚುನಾವಣಾಧಿಕಾರಿ ಕಾವ್ಯರಾಣಿ ಕೆ.ವಿ ತಿಳಿಸಿದರು.
ನಗರದ ಶ್ರೀ ಪ್ರಭು ಕಾಲೇಜ್ ಮೈದಾನದಲ್ಲಿ ನಡೆಯುತ್ತಿದ್ದ ಮೇ 7 ಲೋಕಸಭಾ ಹಾಗೂ ವಿಧಾನಸಭಾ ಉಪ ಚುನವಾಣೆಗೆ ಮತಯಂತ್ರಗಳ ರವಾನಿಸುವ ಮಸ್ಟರಿಂಗ್ ಕಾರ್ಯದಲ್ಲಿ ಪಾಲ್ಗೊಂಡು ಸುದ್ದಿಗಾರರಿಗೆ ವಿವರಣೆ ನೀಡಿ,ಸುರಪುರ ವಿಧಾನಸಭಾ ಕ್ಷೇತ್ರದಾದ್ಯಂತ 317 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು,ಎಲ್ಲಾ ಮತದಾನ ಕೇಂದ್ರಗಳಿಗೆ ಮತಯಂತ್ರ,ವಿವಿಪ್ಯಾಟ್ ಯಂತ್ರಗಳ ರವಾನಿಸಲಾಗುತ್ತಿದೆ,ಪ್ರತಿ ಮತದಾನ ಕೇಂದ್ರದಲ್ಲಿ ಪಿ.ಆರ್.ಓ,ಎ.ಪಿ.ಆರ್.ಓ ಸೇರಿ 5 ಜನ ಸಿಬ್ಬಂದಿಗಳಿರಲಿದ್ದಾರೆ.ಸೂಕ್ಷ್ಮ ಮತಗಟ್ಟೆಗಳು 78 ಕೇಂದ್ರಗಳಿದ್ದು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.ಎಲ್ಲಾ 317 ಮತದಾನ ಕೇಂದ್ರಗಳಲ್ಲಿ 1785 ಸಿಬ್ಬಂದಿಗಳಿರಲಿದ್ದು,ಎಲ್ಲಾ ಮತ ಕೇಂದ್ರಗಳಿಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.ಮತದಾನ ಕೇಂದ್ರಗಳಲ್ಲಿ ಕುಡಿಯುವ ನೀರು,ವಿದ್ಯುತ್,ಶೌಚಾಲಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
86 ರೂಟ್ಗಳನ್ನು ಮಾಡಲಾಗಿದ್ದು,86 ವಾಹನಗಳ ವ್ಯವಸ್ಥೆ ಮಾಡಲಾಗಿದೆ.ಅಲ್ಲದೆ ಭದ್ರತೆಗಾಗಿ 1 ಡಿವೈಎಸ್ಪಿ,4 ಪಿ.ಐ,22 ಪಿ.ಎಸ್.ಐ,327 ಹೆಚ್.ಸಿ,153 ಹೋಂ ಗಾರ್ಡ್,1 ಕೆ.ಎಸ್.ಆರ್.ಪಿ ತುಕಡಿ,2 ಪ್ಯಾರಾ ಮಿಲಿಟರಿ ತುಕಡಿ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೊಟೆಪ್ಪಗೊಳ ಭೇಟಿ ನೀಡಿ ವೀಕ್ಷಿಸಿದರು.ಇಡೀ ಶ್ರೀ ಪ್ರಭು ಕಾಲೇಜ್ ಮೈದಾನದೆಲ್ಲೆಡೆ ಚುನಾವಣಾ ಕರ್ತವ್ಯದ ಸಿಬ್ಬಂದಿಗಳೆ ಕಂಡು ಬಂದರು.ಆಯಾ ಸೆಕ್ಟರ್ ಮೂಲಕ ರೂಟ್ಗಳಿಗೆ ಸಿಬ್ಬಂದಿಗಳನ್ನು ಕಳುಹಿಸಲು ಧ್ವನಿವರ್ಧಕದ ಮೂಲಕ ಸಿಬ್ಬಂದಿಗಳಿಗೆ ಮಾಹಿತಿ ನೀಡುವ ಮೂಲಕ ಮತಯಂತ್ರಗಳೊಂದಿಗೆ ಕಳುಹಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ಪಿ.ಐ ಆನಂದ ವಾಘಮೊಡೆ ಇದ್ದರು.