ಆಳಂದ; ಕೇಂದ್ರ ಸರ್ಕಾರವು ಆಳಂದ ತಾಲೂಕಿಗೆ ಕಲಬುರಗಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಬರ ಪರಿಹಾರ ಧನ ಮಂಜೂರಿ ಮಾಡಿರುವುದಕ್ಕೆ ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ವರ್ಷ ಭೀಕರ ಬರಗಾಲ ಇದ್ದರೂ ರಾಜ್ಯ ಸರ್ಕಾರ ಕೇವಲ 2 ಸಾವಿರ ನೀಡಿ ಕೈ ತೊಳೆದುಕೊಂಡಿದೆ ಅಲ್ಲದೇ ಕಳೆದ ವರ್ಷ ರಾಜ್ಯ ಸರ್ಕಾರ 135 ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕು ಪ್ರದೇಶಗಳೆಂದು ಘೋಷಿಸಿದ್ದರೂ ಯಾವುದೇ ಪರಿಹಾರ ಕ್ರಮಕೈಗೊಂಡಿಲ್ಲ ಅದು ಕೇವಲ ಘೋಷಣೆಯಾಗಿ ಉಳಿದಿತ್ತು ಎಂದು ಹೇಳಿದ್ದಾರೆ.
ಕರ್ನಾಟಕದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಕೇಂದ್ರ ಸರ್ಕಾರ ಚುನಾವಣೆಯ ನೀತಿ ಸಂಹಿತೆ ಇದ್ದರೂ ಸಕಾಲಕ್ಕೆ ರೈತರಿಗೆ ಬರ ಪರಿಹಾರ ಮಂಜೂರಿ ಮಾಡಿದೆ. ಬರದಿಂದ ಕಂಗೆಟ್ಟಿರುವ ತಾಲೂಕಿನ ಅನ್ನದಾತರಿಗೆ ಇದು ಖುಷಿಯ ವಿಷಯವಾಗಿದೆ. ಜಿಲ್ಲೆಗೆ ಒಟ್ಟು 330 ಕೋಟಿ ಬರ ಪರಿಹಾರ ಹಣ ಎನ್ಡಿಆರ್ಎಫ್ ಮೂಲಕ ಬಿಡುಗಡೆಯಾಗಿದೆ. ಬರ ಪರಿಹಾರ ಹಣ ಬಿಡುಗಡೆ ಮಾಡುವಲ್ಲಿ ವಿಶೇಷ ಕಾಳಜಿ ವಹಿಸಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ.