ರಾಷ್ಟ್ರೀಯ ಮನ್ನಣೆ ಪಡೆದುಕೊಳ್ಳುತ್ತಿರುವ ಬೇರು ಬೆವರು ಕಲಾ ಬಳಗ

0
106

ಚಿಂತಾಮಣಿ : ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ ಹುಟ್ಟಿಕೊಂಡ ಬೇರು ಬೆವರು ಕಲಾ ಬಳಗವು ರಾಷ್ಟ್ರ ಮಟ್ಟದ ಮನ್ನಣೆಯನ್ನು ಪಡೆಯುವ ಮೂಲಕ ಈ ನೆಲದ ಸಾಂಸ್ಕೃತಿಕ ಅಸ್ಮಿತೆಯನ್ನು ಎತ್ತಿಹಿಡಿದಿದೆ.

ಬೇರು ಬೆವರು ಬಳಗವು ಕಳೆದ ೧೨ ವರುಷಗಳಿಂದ ಬೆಟ್ಟ, ಕಾಡು, ಕೆರೆ-ಕುಂಟೆ, ಗೋಮಾಳ ಸೇರಿದಂತೆ ಪರಿಸರ ಸಮಗ್ರ ಉಳಿವಿಗಾಗಿ ಹಾಗೂ ಬೀಜ, ಮಣ್ಣು, ಬೆಳೆ, ನೀರು, ಮಳೆ ಬೇಸಾಯ ಪದ್ದತಿಗಳು ಸೇರಿ ಒಟ್ಟಾರೆ ಈ ನೆಲದ ಕೃಷಿ ಸಂಸ್ಕೃತಿಯ ಹಾಡುಗಳನ್ನು ರಾಷ್ಟ್ರದಾದ್ಯಂತ ಹಾಡುತ್ತಾ ಬಂದಿದೆ. ಈ ನೆಲದ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಸಾಂಸ್ಕೃತಿಕ ಕಾರ್ಯವನ್ನು ಸಾಮಾಜಿಕ ಜವಾಬ್ದಾರಿಯಾಗಿ ತೆಗೆದುಕೊಂಡಿದೆ.

Contact Your\'s Advertisement; 9902492681

ಬಳಗವು ಪರಿಸರ ಮತ್ತು ನ್ಯಾಯದ ಪರವಾದ ಹಾಡುಗಳನ್ನು ಹಾಡುತ್ತಾ ಹಲವು ತರಬೇತಿ, ಕಾರ್ಯಗಾರ, ಕಥಾ ಕಮ್ಮಟಗಳ ಮೂಲಕ ಹೊಸ ತಲೆಮಾರಿನ ಸಾಂಸ್ಕೃತಿಕ ಕಾರ್ಯಕರ್ತರನ್ನು ತಯಾರಿಸುತ್ತಿದೆ. ಹೊಲ-ಗದ್ದೆಗಳಲ್ಲಿ ದುಡಿಯುವ ರೈತ, ಶ್ರಮಿಕರ ಪರ, ಅದರಲ್ಲೂ ಮೊಟ್ಟ ಮೊದಲು ಬೇಸಾಯವನ್ನು ಕಂಡುಕೊAಡಿದ್ದು ಮತ್ತು ವಿಸ್ತರಿಸಿದ್ದು ಮಹಿಳೆಯರೇ ಎಂಬ ಸತ್ಯವನ್ನು ದೊಡ್ಡ ಧ್ವನಿಯಲ್ಲಿ ಹಾಡುತ್ತಾ ಸಾಗುತ್ತಿದೆ.

ಕವಿ ಶಶಿರಾಜ್ ಹರತಲೆ ರವರ “ನಾವು ಈ ಮಣ್ಣಿನ ರೈತ ಮಕ್ಕಳ ಪಡೆ” ಹಾಡನ್ನು ರಾಜಸ್ತಾನದ ಮೌಂಟ್ ಅಬು ನಲ್ಲಿ ನಡೆದ ರಾಷ್ಟ್ರೀಯ ಕವಿ ಸಂಗಮ್ ನಲ್ಲಿ ಹಾಡುವ ಮೂಲಕ ಮೊಟ್ಟ ಮೊದಲ ಬಾರಿಗೆ ತಂಡವು ರಾಷ್ಟ್ರೀಯ ಮಟ್ಟಕ್ಕೆ ಹೆಜ್ಜೆಯನ್ನಿಟ್ಟಿತು. ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ರೈತ ಹೋರಾಟದಲ್ಲಿ “ಕ್ರಾಂತಿಯಾಗಲಿ ನೆಲದ ಕ್ರಾಂತಿಯಾಗಲಿ” ಸೇರಿದಂತೆ ಕರ್ನಾಟಕದ ಹಲವು ಹೋರಾಟದ ಹಾಡುಗಳು ರಾಷ್ಟ್ರವ್ಯಾಪಿ ಬಳಗವನ್ನು ಮತ್ತಷ್ಟು ಪರಿಚಯಿಸಿತು.

ದೆಹಲಿಯಲ್ಲಿ ನಡೆದ ಮಿಲೇಟ್ ಪಾರ್ ಮಿಲಿಯನ್” ಅಂತಾರಾಷ್ಟ್ರೀಯ ಸಿರಿಧಾನ್ಯ ಸಮಾವೇಶ, ಒಡಿಸ್ಸಾ ಸರ್ಕಾರದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಿರಿಧಾನ್ಯ ಸಮಾವೇಶ, ಕರ್ನಾಟಕದ ಮೈಸೂರಿನಲ್ಲಿ ನಡೆದ ರಾಷ್ಟ್ರೀಯ ಕಿಸಾನ್ ಸ್ವರಾಜ್ ಸಮ್ಮೇಳನ, ಚೆನ್ನೈನಲ್ಲಿ ನಡೆದ ದಕ್ಷಿಣ ಭಾರತದ ಸಾಂಸ್ಕೃತಿಕ ಸಂಗಮ ಸೇರಿದಂತೆ ಭಾರತದ ಅನೇಕ ಜಾಗಗಳಲ್ಲಿ ಹಸಿರು ಪದಗಳನ್ನು ಹಾಡಿ ರಾಷ್ಟ್ರಾದ್ಯಂತ ತನ್ನ ಸಾಂಸ್ಕೃತಿಕ ಕಾಯಕವನ್ನು ವಿಸ್ತರಿಸಿಕೊಂಡಿದೆ.

ಇದೀಗ ಭಾರತ ಸರ್ಕಾರದ ಕೃಷಿ ಮಂತ್ರಲಾಯ ಮತ್ತು ರೈತರ ಕಲ್ಯಾಣ ಸಚಿವಾಲಯ ವತಿಯಿಂದ ಮಹಾರಾಷ್ಟ್ರದ ಪುಣೆಯಲ್ಲಿ ಮೇ ೧೬ ರಂದು ಆಯೋಜಿಸುತ್ತಿರುವಂತಹ “ನೈಸರ್ಗಿಕ ಕೃಷಿ ವಿಜ್ಙಾನ” ರಾಷ್ಟ್ರೀಯ ಸಮಾಲೋಚನ ಸಮಾವೇಶಕ್ಕೆ ಕರ್ನಾಟಕದ ಬೇರು ಬೆವರು ಕಲಾ ಬಳಗವನ್ನು “ಹಸಿರು ಪದ” ಗಳನ್ನು ಹಾಡಲು ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಐ.ಎನ್ ಎಮ್ ವಿಭಾಗದ ಉಪಕಾರ್ಯದರ್ಶಿಗಳಾದ ಮನೋಜ ಕುಮಾರ್ ಅವರು ಇಲಾಖೆ ಪತ್ರದ ಮೂಲಕ ಆಹ್ವಾನಿಸಿ, ವಿಮಾನದಲ್ಲಿ ಪ್ರಯಾಣಿಸಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಸಮಾವೇಶಕ್ಕೆ ಕವಿ ಶಶಿರಾಜ್ ಹರತಲೆ ಅವರು ಬರೆದ ನೆಲವಿಲ್ಲದೆ ಬೀಜವಿಲ್ಲ, ಅಕ್ಕಡಿ ಸಾಲಿನಲಿ ಅರಿವಿನ ಸಾರವಿದೆ, ಹಿರಿಧಾನ್ಯಗಳೇ ಸಿರಿಧಾನ್ಯಗಳು ಎಂಬ ಹಾಡುಗಳನ್ನು ಆಯೋಜನಾ ಸಮಿತಿ ಆಯ್ಕೆ ಮಾಡಿಕೊಂಡಿದೆ. ಅಷ್ಟೆ ಅಲ್ಲದೆ ಈ ಹಾಡುಗಳ ಅರ್ಥವನ್ನು ಕನ್ನಡದಿಂದ ಇಂಗ್ಲೀಷ್ ಮತ್ತು ಹಿಂದಿಗೆ ಭಾಷಂತರ ಮಾಡಲಾಗಿದೆ.

ಈ ಸಮಾವೇಶದಲ್ಲಿ ವಿವಿಧ ರಾಜ್ಯಗಳಿಂದ ಸಾವಯವ ಕೃಷಿಕರು, ಕೃಷಿ ವಿಜ್ಞಾನಿಗಳು, ಕೃಷಿ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಇಂತಹ ಸಮಾವೇಶದಲ್ಲಿ ಕನ್ನಡದ ಹಾಡುಗಳು ಧ್ವನಿಸುತ್ತಿರುವುದಕ್ಕೆ ಕರ್ನಾಟಕದ ಅನೇಕ ಕವಿಗಳು, ಸಾಹಿತಿಗಳು ಅಭಿನಂದನೆಗಳನ್ನು ಸಹ ಸಲ್ಲಿಸಿದ್ದಾರೆ.

ಈ ರಾಷ್ಟ್ರೀಯ ಸಮಾವೇಶದಲ್ಲಿ ಕವಿಗಳಾದ ಶಶಿರಾಜ್ ಹರತಲೆ, ಬೇರು ಬೆವರು ಕಲಾ ಬಳಗದ ನಿರ್ವಾಹಕರಾದ ಸೋರಪ್ಪಲ್ಲಿ ಚಂದ್ರಶೇಖರ್, ತಂಡದ ಸದಸ್ಯರಾದ ಪೆದ್ದೂರು ಮುನಿರಾಜು, ನಾಗದೇನಹಳ್ಳಿ ಸಿಂಧು, ನಾರಾಯಣಹಳ್ಳಿ ಸಿರಿಕುಮಾರ್ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here