ಶಹಾಬಾದ: ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಅವರಿಗೆ ತಮ್ಮ ಅಮೂಲ್ಯ ಮತವನ್ನು ನೀಡಬೇಕೆಂದು ಬಿಜೆಪಿ ಮಂಡಲ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್ ಮತದಾರರಲ್ಲಿ ಮನವಿ ಮಾಡಿದರು.
ಅವರು ರವಿವಾರ ವಿಧಾನ ಪರಿಷತ್ ಚುನಾವಣೆ ನಿಮಿತ್ತ ಬಿಜೆಪಿ ಮುಖಂಡರು ನಗರದ ಜಿಇ ಕಾಲೋನಿಯ ಮನೆಮನೆಗೆ ತೆರಳಿ ಅಮರನಾಥ ಪಾಟೀಲ ಪರ ಮತಯಾಚನೆ ಮಾಡಿ ಮಾತನಾಡಿದರು.
ಅಮರನಾಥ ಪಾಟೀಲ್ ಈ ಹಿಂದೆ ಎಂಎಲ್ಸಿ ಸೇರಿ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಕ್ಷೇತ್ರದ ಎಲ್ಲೆಡೆ ಅವರು ಚಿರಪರಿಚಿತರು.ಹಾಗೇ ಸರಳ ಸ್ವಭಾವದ ವ್ಯಕ್ತಿತ್ವ ಅವರದ್ದು. ಕ್ಷೇತ್ರದ ಅಭಿವೃದ್ಧಿಗಾಗಿ ಕಳೆದ ಬಾರಿ ಮತದಾರರು ಕಾಂಗ್ರೆಸ್ನ ಚಂದ್ರಶೇಖರ ಪಾಟೀಲರನ್ನು ಆಯ್ಕೆ ಮಾಡಿದ್ದರೇ ಅವರು ಸದನದಲ್ಲಿ ಒಂದು ಪ್ರಶ್ನೆಯನ್ನು ಕೇಳಿಲ್ಲ.ಪದವೀಧರರ ಸಮಸ್ಯೆಗಳ ಕುರಿತು ಮಾತನಾಡಿಲ್ಲ. ಅವರ ಸಮಸ್ಯೆಗಳಿಗೆ ಧ್ವನಿಯಾಗಲಿಲ್ಲ. ಆದ್ದರಿಂದ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಜೂ. 3ರಂದು ನಡೆಯಲಿರುವ ಚುನಾವಣೆಯಲ್ಲಿ ವಿದ್ಯಾವಂತರಾದ ಮತದಾರರು ಅಮರನಾಥ ಪಾಟೀಲ ಅವರನ್ನು ಗೆಲ್ಲಿಸುವ ಮೂಲಕ ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ಬೆಂಬಲ ನೀಡಬೇಕೆಂದು ಹೇಳಿದರು.
ಬಿಜೆಪಿ ಮುಖಂಡ ರಾಜು ಮಾನೆ ಮಾತನಾಡಿ, ಜೂನ್ 3ರಂದು ನಡೆಯಲಿರುವ ಈಶಾನ್ಯ ಪದವಿಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ಸಮಗ್ರ, ಅಭಿವೃದ್ಧಿಗಾಗಿ ಈ ಬಾರಿ ಅಮರನಾಥ ಪಾಟೀಲ್ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಿವಶರಣಪ್ಪ ಜೆಟ್ಟೂರ್, ಕಾಶಿನಾಥ ಭಾಸ್ಮೆ,ಗುರಲಿಂಗಪ್ಪ ಪಾಟೀಲ ಸೇರಿದಂತೆ ಅನೇಕರು ಇದ್ದರು.