ಕಲಬುರಗಿ: ಕಾಳಗಿ ತಾಲೂಕಿನ ವ್ಯಾಪ್ತಿಯ ರೇವಗ್ಗಿ ಗ್ರಾಮ `ಸುಕ್ಷೇತ್ರ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ಕಮಲಾಪುರ ತಾಲೂಕಿಗೆ ಸೇರ್ಪಡೆ ಮಾಡಿರುವ ಆದೇಶ ಹಿಂಪಡೆಯಲು ಒತ್ತಾಯಿಸಿ ಮೊದಲಿನಂತೆ ಯಥಾಪ್ರಕಾರ ಕಾಳಗಿ ತಾಲೂಕಿನಲ್ಲಿ ರೇವಗ್ಗಿ ಮತ್ತು ಗೋಣಗಿ ಗ್ರಾಮ ಕಾಳಗಿ ತಾಲೂಕಿನಲ್ಲಿ ಉಳಿಸಬೇಕೆಂದು ಒತ್ತಾಯಿಸಿ 12 ಗ್ರಾಮದ ಗ್ರಾಮಸ್ಥರು, ಭಕ್ತರು ಹಾಗೂ ಮಠಾಧಿಶರ ನೇತೃತ್ವದಲ್ಲಿ ಕಂದಗೂಳ ಕ್ರಾಸ್ ನಲ್ಲಿ 2 ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಐತಿಹಾಸಿಕ ಕ್ಷೇತ್ರದ ಶ್ರೀ ಜಗದ್ಗುರು ರೇವಣ ಸಿದ್ದೇಶ್ವರ ದೇವಸ್ಥಾನವು ಕಾಳಗಿ ತಾಲೂಕಿನಿಂದ ಕಮಲಾಪುರ ತಾಲೂಕಿಗೆ ರೇವಗ್ಗಿ ಮತ್ತು ಗೊಣಗಿ ಗ್ರಾಮವು ಏಕಾಏಕಿಯಾಗಿ ದಿಢೀರನೆ ಸಾರ್ವಜನಿಕರ ಗಮನಕ್ಕೆ ತರಲಾರದೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡಲಾರದೆ ಸೇರ್ಪಡೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರದ ಈ ಅವೈಜ್ಞಾನಿಕ ಕ್ರಮದಿಂದ ಶ್ರೀ ರೇವಣಶಿದ್ದೇಶ್ವರ ಭಕ್ತರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಲಾಗಿದೆ. ಈ ವಿಷಯ ಸೂಕ್ಷ್ಮ ಮತ್ತು ಭಾವನಾತ್ಮಕವಾಗಿದ್ದು ಸರಕಾರದ ಏಕಾಏಕಿ ಸಾರ್ವಜನಿಕರ ಗಮನಕ್ಕೆ ತರದೆ ಕಮಲಾಪುರಗೆ ಸೇರ್ಪಡೆ ಮಾಡಿರುವುದು ಖಂಡನಿಯವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ತಕ್ಷಣ ಜಿಲ್ಲಾಧಿಕಾರಿ ಮುಖ್ಯಮಂತ್ರಿ ಹಾಗೂ ಕಂದಾಯ ಇಲಾಖೆಯ ಸಚಿವರ ಗಮನಕ್ಕೆ ತಂದು ತರಾತೂರಿಯಲ್ಲಿ ಸೇರ್ಪಡೆ ಮಾಡಿರುವ ಗ್ರಾಮಗಳು ಕಾಳಗಿ ತಾಲೂಕಿಗೆ ಸೇರ್ಪಡೆ ಮಾಡಬೇಕೆಂದು ಮಠಾಧಿಶರ ನೇತೃತ್ವದಲ್ಲಿ ಕಾಳಗಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಗೌರಿ ಗುಡ್ಡದ ಶ್ರೀ ಪೂಜ್ಯ ಷ.ಬ್ರ ರೇವಣಶಿದ್ದ ಶರಣರು, ಸೂಗುರು ಕೆ ಷ.ಬ್ರ ಶ್ರೀ ಡಾ. ಚನ್ನ ರುದ್ರಮುನಿ ಶಿವಾಚಾರ್ಯರು, ರಟಕಲ್ ವಿರಕ್ತ ಮಠದ ಶ್ರೀ ಮ.ನಿ.ದ್ರ ಸಿದ್ದರಾಮ ಮಹಾಸ್ವಾಮಿಜಿ, ರಟಕಲ್ ಹಿರೆಮಠದ ಶ್ರೀ ರೇವಣಶಿದ್ದ ಶಿವಾಚಾರ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಕರ್ನಾಟಕ ಪ್ರಾಂತ ರೈತ ಸಂಘಟನೆಯ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೇಟಿ, ವೀರಶೈವ ಲಿಂಗಾಯತ ಸಮಾಜದ ತಾಲ್ಲೂಕು ಅಧ್ಯಕ್ಷ ರೇವಣಶಿದ್ದ ಬಡ್ಡಾ, ಮಲ್ಲು ಮರಗುತಿ, ಶಿವರಾಜ್ ಪಾಟೀಲ್ ಗೋಣಗಿ, ಗೌರಿಶಂಕರ ಕಿಣ್ಣಿ, ವೀರಣಾ ಗಂಗಾಣಿ, ಶರಣು ಸಿ ಭೈರಪ್ಪ, ಮಲ್ಲಿನಾಥ್ ಮುಚ್ಚಟಿ, ಗುರು ಎಸ್ ಬಾದನ್ ಸೇರಿದಂತೆ ಶ್ರೀ ರೇವಣಶಿದ್ದೇಶ್ವರ ದೇವಸ್ಥಾನದ ಸರ್ವಧರ್ಮಿಯ ಸಾವಿರಾರು ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.