ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲೊಬ್ಬರಾದ ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರ 140 ನೇ ಜನ್ಮದಿನಾಚರಣೆಯ ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜೂನ್ 4 ರಂದು ಬೆಳಗ್ಗೆ 11.30 ಕ್ಕೆ ನಗರದ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ಕನ್ನಡ ಭಾಷೆ, ನಾಡು -ನುಡಿಗೆ ಸಂಬಂಧಿಸಿದಂತೆ ವಿಶೇಷ ಕೊಡುಗೆ ನೀಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ ಕೀರ್ತಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ. ದೂರದೃಷ್ಠಿತ್ವದ ಆಡಳಿತ, ಜನಪರ ನಿರ್ಧಾರಗಳು, ಸಾಮಾಜಿಕ ನ್ಯಾಯದ ಕ್ರಾಂತಿ ಹೀಗೆ ಅವರ ಅನೇಕ ಸಾಧನೆಗಳು ಇಂದಿನ ಸಮಾಜಕ್ಕೆ ಮಾದರಿ ಮತ್ತು ಪ್ರೇರಣೆ ಕೊಡುತ್ತವೆ.
ಕನ್ನಡಿಗರನ್ನು ಒಂದುಗೂಡಿಸುವ ಪ್ರಯತ್ನ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸುವ ಮೂಲಕ ಮಾಡಿದ್ದಾರೆ. ಹಾಗಾಗಿ ಇವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ತೇಗಲತಿಪ್ಪಿ ಪ್ರಕಟಣೆ ಮೂಲಕ ವಿವರಿಸಿದ್ದಾರೆ.