ಬೀಜ, ರಸಗೊಬ್ಬರ ಕೊರತೆ ಇಲ್ಲ,ರೈತರು ಆತಂಕ ಪಡಬೇಕಿಲ್ಲ: ಡಿ.ಸಿ. ಬಿ.ಫೌಜಿಯಾ ತರನ್ನುಮ್

0
17

ಕಲಬುರಗಿ: ಜಿಲ್ಲೆಯಲ್ಲಿ ಪ್ರಸಕ್ತ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 8.65 ಲಕ್ಷ‌ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, ಜಿಲ್ಲೆಯಲ್ಲಿ ಬೀಜ, ರಸಗೊಬ್ಬರ ಕೊರತೆಯಿಲ್ಲ. ರೈತರು ಆತಂಕ ಪಡದೆ‌ ಬಿತ್ತನೆ ಕಾರ್ಯದಲ್ಲಿ ತೊಡಗಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಮುಂಗಾರು ಹಂಗಾಮಿಗಾಗಿ ಕೃಷಿ ಇಲಾಖೆಯು 19,461 ಕ್ವಿಂಟಲ್‌ಗಳಷ್ಟು ಜಿಲ್ಲೆಗೆ ಬಿತ್ತನೆ ಬೀಜ ಅವಶ್ಯಕತೆ ಅಂದಾಜಿಸಿದೆ. 22,521 ಕ್ವಿಂಟಲ್ ಬಿತ್ತನೆ ಬೀಜ ಪೂರೈಕೆಗಾಗಿ ಪೂರೈಕೆದಾರ ಸಂಸ್ಥೆಗಳಿಗೆ ಬೇಡಿಕೆ ಸಲ್ಲಿಸಿದೆ. ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ 12,471 ಕ್ವಿಂಟಲ್ ವಿವಿಧ ಬೀಜಗಳ ದಾಸ್ತಾನನು ಮಾಡಲಾಗಿದ್ದು, ಸಹಾಯಧನ ಯೋಜನೆಯಡಿ 640 ಕ್ವಿಂಟಲ್ ಬೀಜಗಳನ್ನು ವಿತರಿಸಲಾಗಿದೆ. ರೈತ ಸಂಪರ್ಕ ಕೇಂದ್ರಗಳ ಮುಖಾಂತರವೇ ಬೀಜ ವಿತರಿಸಲು ಕ್ರಮ ವಹಿಸಲಾಗಿದೆ ಎಂದರು.

Contact Your\'s Advertisement; 9902492681

ಅದೇ ರೀತಿ ಮುಂಗಾರು‌ ಹಂಗಾಮಿಗೆ ಜಿಲ್ಲೆಗೆ ಕೃಷಿ ಆಯುಕ್ತಾಲಯದಿಂದ 88,592 ಮೆಟ್ರಿಕ್ ಟನ್ ವಿವಿಧ ಶ್ರೇಣಿಯ ರಸಗೊಬ್ಬರಗಳನ್ನು ಹಂಚಿಕೆ ಮಾಡಲಾಗಿದೆ. 12,290 ಮೆಟ್ರಿಕ್ ಟನ್ ವಿತರಣೆ ಮಾಡಿದ್ದು, ಉಳಿದಂತೆ 63,810 ಮೇಟ್ರಿಕ್ ಟನ್ ರಸಗೊಬ್ಬರಗಳ ದಾಸ್ತಾನಿದೆ. ಇನ್ನು 58,880 ಮೆಟ್ರಿಕ್ ಟನ್ ಗಳಷ್ಟು ಎಲ್ಲಾ ಶ್ರೇಣಿಯ ಗೊಬ್ಬರ ಸಹ ದಾಸ್ತಾನಿದೆ‌. ಕೃಷಿ ಪರಿಕರಗಳನ್ನು ಖರೀದಿಸಿ ಬಿತ್ತನೆ‌ ಮಾಡುವತ್ತ ರೈತರು ಹೆಚ್ಚಿನ ಗಮನ ಹರಿಸಬೇಕು ಎಂದು ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಹೆಚ್ಚಿನ ದರಕ್ಕೆ ಮಾರಾಟ‌ ಮಾಡದಂತೆ ಎಚ್ಚರಿಕೆ: ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಗರಿಷ್ಟ ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡದಿರಲು ಇತ್ತೀಚೆಗೆ ಕರೆಯಲಾದ ಜಿಲ್ಲಾ ಕೃಷಿ ಪರಿಕರಗಳ ಮಾರಾಟಗಾರರ ಸಭೆಯಲ್ಲಿ ಮಾರಾಟಗಾರರಿಗೆ ಎಚ್ಚರ ನೀಡಲಾಗಿದೆ. ಇದಲ್ಲದೆ ಕೃಷಿ ಇಲಾಖೆಯ ಜಾರಿ ದಳ ಸಿಬ್ಬಂದಿ ಮತ್ತು ಪರಿವೀಕ್ಷಕರುಗಳು ಆಗಾಗ ಬೀಜ, ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ, ಕೃಷಿ ಪರಿಕರಗಳ ದಾಸ್ತಾನು ವಿತರಣೆ ಪರಿಶೀಲಿಸಲಿದ್ದಾರೆ. ವಿಶೇಷವಾಗಿ ರಸಗೊಬ್ಬರಗಳ ಮಾರಾಟವನ್ನು ಪಿ.ಓ.ಎಸ್. ಯಂತ್ರ ಮುಖಾಂತರವೇ ಮಾರಾಟ ಮಾಡಲು ತಿಳಿಸಲಾಗಿದೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here