ಕಲಬುರಗಿ; ಸೌರಮಂಡಲದ ಅಧ್ಯಯನಕ್ಕೆ ಮಕ್ಕಳಿಗೆ ನೆರವಾಗಲು ಜಿಲ್ಲಾ ಪಂಚಾಯತ್ ಅನುದಾನದಿಂದ ತಲಾ 1 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಲಾದ 4 ಟೆಲಿಸ್ಕೋಪ್ ಗಳನ್ನು ಅತಿ ಹೆಚ್ಚು ದಾಖಲಾತಿ ಹೊಂದಿರುವ ಜಿಲ್ಲೆಯ 4 ಸರ್ಕಾರಿ ಶಾಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ವಿತರಣೆ ಮಾಡಿದರು.
ಇಲ್ಲಿನ ಡಿ.ಸಿ. ಕಚೇರಿಯ ನೆಲ ಮಹಡಿಯಲ್ಲಿ ಇವುಗಳನ್ನು ಶಾಲಾ ಮಕ್ಕಳ ಸಮಕ್ಷಮ ಕಲಬುರಗಿ ದಕ್ಷಿಣ ವಲಯ ತಾಲೂಕಿನ ಶತಮಾನೋತ್ಸವ ಕುವೆಂಪು ಮಾದರಿ ಸರಕಾರಿ ಪ್ರೌಢ ಶಾಲೆ ನಂದೂರ(ಕೆ), ಕಲಬುರಗಿ ಉತ್ತರ ವಲಯ ತಾಲೂಕಿನ ಕರ್ನಾಟಕ ಪಬ್ಲಿಕ್ ಶಾಲೆ ಮಹಾತ್ಮ ಬಸವೇಶ್ವರ ನಗರ ಕಲಬುರಗಿ, ಚಿಂಚೋಳಿ ತಾಲೂಕಿನ ಪೋಲಕಪಳ್ಳಿ ಆದರ್ಶ ವಿದ್ಯಾಲಯ ಹಾಗೂ ಚಿತ್ತಾಪೂರ ತಾಲೂಕಿನ ಗುಂಡಗುರ್ತಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಿಗೆ ನೀಡಲಾಯಿತು.
ನಾಲ್ಕು ಶಾಲೆಗಳು ಇದನ್ನು ಕಲಿಕೋಪಕರಣಗಳಾಗಿ ಬಳಸಿಕೊಳ್ಳಬಹುದಾಗಿದೆ. ವಿಶೇಷ ತರಗತಿಗಳು, ಕಾರ್ಯಾಗಾರಗಳು ಮತ್ತು ಗ್ರಹಣ ದಿನಗಳಂದು ಸುತ್ತಲಿನ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಆಕಾಶಕಾಯಗಳನ್ನು ಈ ದೂರದರ್ಶಕ ಬಳಸಿ ನೋಡಬಹುದಾಗಿದೆ. ಇದರಿಂದ ಮಕ್ಕಳಲ್ಲಿ ಖಗೋಳ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಲು ಸಹಾಯ ಮಾಡುತ್ತದೆ.
ತ್ರಿಪಾದ ಆಧಾರ ಸ್ತಂಭವನ್ನು ಹೊಂದಿರುವ ಈ ದೂರದರ್ಶಕಗಳನ್ನು ಶಾಲೆ ಆವರಣದಲ್ಲಿ ನಿಲ್ಲಿಸಿ ಅದರ ಮೂಲಕ ಗ್ರಹಗಳು, ನಕ್ಷತ್ರಗಳ ಬಗ್ಗೆ ಅಧ್ಯಯನ ಮಾಡಬಹುದಾಗಿದೆ.
ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ,ಅಫಜಲಪುರ ಶಾಸಕ ಎಂ.ವೈ. ಪಾಟೀಲ, ವಿಧಾನ ಪರಿಷತ್ ಶಾಸಕರುಗಳಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರಸಿಂಗ್ ಮೀನಾ, ಡಿ.ಡಿ.ಪಿ.ಐ ಸಕ್ರೆಪ್ಪಗೌಡ ಬಿರಾದಾರ ಇದ್ದರು.