ಕಲಬುರಗಿ: ಜಿಲ್ಲೆಯಲ್ಲಿ ಅಕ್ರಮ ಸಾಗುವಳಿಯನ್ನು ಸಕ್ರಮಗೊಳಿಸುವ ನಮೂನೆ 50, 53 ಹಾಗೂ 57 ಬಗರ್ ಹುಕುಂ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕೆಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಜಿಲ್ಲೆಯ ತಹಶೀಲ್ದಾರರಿಗೆ ಸೂಚನೆ ನೀಡಿದರು.
ಮಂಗಳವಾರ ಸಂಜೆ ತಮ್ಮ ಕಚೇರಿಯಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಬಗರ್ ಹುಕುಂ ತಂತ್ರಾಂಶದಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಅರ್ಜಿಗಳನ್ನು ಶಾಸಕರ ಅಧ್ಯಕ್ಷತೆಯ ಸಮಿತಿ ಮುಂದೆ ಮಂಡಿಸಬೇಕು. ಅನರ್ಹ ಅರ್ಜಿಗಳನ್ನು ತಮ್ಮಹಂತದಲ್ಲಿಯೇ ತಿರಸ್ಕರಿಸಬೇಕು ಎಂದರು.
ಸೋಮವಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕಲಬುರಗಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನೆ ನಡೆಸಿ ಕಂದಾಯ ಸೇವೆ ಮತ್ತಷ್ಟು ಸರಳೀಕರಣಗೊಳಿಸುವುದರ ಜೊತೆಗೆ ಡಿಜಿಟೈಲೇಷನ್ ಗೆ ಒತ್ತು ನೀಡುವಂತೆ ಕರೆ ನೀಡಿದ್ದು, ತಾಲೂಕಾ ಕಚೇರಿಯಲ್ಲಿ ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದರು.
ಸರ್ಕಾರದ ವಿವಿಧ ಸವಲತ್ತು ಪಡೆಯಲು ಆಧಾರ್ ಸೀಡಿಂಗ್ ತುಂಬಾ ಉಪಯುಕ್ತವಾಗಿದ್ದು, ಪಹಣಿಗೆ ಆಧಾರ್ ಜೋಡಿಸುವ ಕಾರ್ಯ ಸಚಿವರು ನೀಡಿರುವ ಡೆಡ್ ಲೈನ್ ನಂತೆ ಜುಲೈ ಮಾಹೆಯೊಳಗೆ ಪೂರ್ಣಗೊಳಿಸಬೇಕೆಂದರು. ಆಧಾರ್ ಜೋಡಣೆಯಿಂದ ಡಿ.ಬಿ.ಟಿ. ಮೂಲಕ ಪರಿಹಾರ ಹಣ ನೇರ ಜಮೆ, ಮಾಲೀಕತ್ವ ದೃಢ, ವಂಚನೆ ತಪ್ಪಿಸುವ ಹೀಗೆ ಅನೇಕ ಲಾಭಗಳ ಕುರಿತು ಆಯಾ ಶಾಸಕರಿಂದಲೆ ಇದರ ಮಹತ್ವ ತಿಳಿಸುವ ವಿಡಿಯೋ ಕ್ಲಿಪ್ ಮಾಡಿ ಸಾಮಾಜಿಕ ಜಾಲತಾಣ ಮೂಲಕ ರೈತಾಪಿ ವರ್ಗಕ್ಕೆ ಅರಿವು ಮೂಡಿಸಬೇಕೆಂದರು.
ಪ್ರವಾಹ ಪರಿಸ್ಥಿತಿಗೆ ಸನ್ನಧರಾಗಿ: ಪ್ರಸಕ್ತ ಸಾಲಿನಲ್ಲಿ ಹೆಚ್ಚಿನ ಮಳೆ ಮುನ್ಸೂಚನೆ ಇದೆ. ಹಿಂದಿನ ದಾಖಲೆಗಳ ಪ್ರಕಾರ ಜಿಲ್ಲೆಯ ಭೀಮಾ ನದಿಯಿಂದ ನಮಗೆ ನೆರೆ ಹಾವಳಿ ಭೀತಿ ಹೆಚ್ಚು. ನದಿ, ಜಲಾಶಯ ದಂಡೆಯಲ್ಲಿರುವ ಜನ-ಜಾನುವಾರಗಳ ರಕ್ಷಣೆ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾದಲ್ಲಿ ಇದನ್ನು ಸಮರ್ಥವಾಗಿ ಎದುರಿಸಲು ತಹಶೀಲ್ದಾರರು ಸನ್ನಧರಾಗಬೇಕು ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ತಿಳಿಸಿದರು.
ಸಭೆಯಲ್ಲಿ ಸಹಾಯಕ ಆಯುಕ್ತ ಆಶಪ್ಪ ಪೂಜಾರಿ, ಡಿ.ಡಿ.ಎಲ್.ಆರ್. ಪ್ರವೀಣ ಸೇರಿದಂತೆ ತಾಲೂಕಾ ತಹಶೀಲ್ದಾರರು ಹಾಗೂ ಇತರೆ ಕಂದಾಯ ಸಿಬ್ಬಂದಿಗಳು ಇದ್ದರು.