Thursday, August 8, 2024
ಮನೆಬಿಸಿ ಬಿಸಿ ಸುದ್ದಿಹಟ್ಟಿಗೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮ: ಅವಿನಾಶ್ ಶಿಂಧೆ

ಹಟ್ಟಿಗೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮ: ಅವಿನಾಶ್ ಶಿಂಧೆ

ಎಸಿ ಕಚೇರಿ: ಡಿವೈಎಫ್ಐ, ಸಿಐಟಿಯು, ಎಸ್ಎಫ್ಐ ಜಂಟಿ ಸಂಘಟನೆಗಳ ಸಭೆ

ಲಿಂಗಸ್ಗೂರು: ಸಹಾಯಕ ಆಯುಕ್ತರ ಕಚೇರಿಯಲ್ಲಿ ಸಹಾಯಕ ಆಯುಕ್ತ ಅವಿನಾಶ್ ಶಿಂಧೆ ಅವರು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು), ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಸಂಘಟನೆಗಳು, ತಹಶೀಲ್ದಾರ್, ಹಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳ ಜಂಟಿ ಸಭೆಯನ್ನು ಶುಕ್ರವಾರದಂದು ನಡೆಸಿ ಹಟ್ಟಿಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಚರ್ಚಿಸಿದರು.

ಹಟ್ಟಿ ಪಟ್ಟಣಕ್ಕೆ ರಸ್ತೆ, ನೀರು, ನೈರ್ಮಲ್ಯ, ವಿದ್ಯುತ್ ದೀಪಗಳು ಸೇರಿದಂತೆ ವಿವಿಧ ಹಕ್ಕೋತ್ತಾಯಗಳನ್ನು ಈಡೇರಿಸಲು ಕಳೆದ ಒಂದು ವರ್ಷದಿಂದ ಜಂಟಿ ಸಂಘಟನೆಗಳಿಂದ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಭೆ ನಡೆಸಲಾಯಿತು.

ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು 21/11/2023 ರಂದು ಮಾನ್ಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಲಿಂಗಸುಗೂರು ಇವರಿಗೆ ಪತ್ರ ಬರೆದು ಆದಷ್ಟು ಬೇಗನೆ ನೀರಿನ ಸಮಸ್ಯೆ ಬಗೆಹರಿಸಲು ತಿಳಿಸಲಾಗಿದೆ. ಪ್ರಸ್ತುತ ವಾರಕ್ಕೊಮ್ಮೆ ನೀರು ಬಿಡುತ್ತೇವೆ.

ಸದ್ಯದಲ್ಲೇ ಗ್ರಂಥಾಲಯ ಆರಂಭಿಸುತ್ತೇವೆ. ಹಟ್ಟಿ ಪಟ್ಟಣದ ಜತ್ತಿಲೈನ್ ಬೈಪಾಸ್ ರಸ್ತೆಗೆ ತಾತ್ಕಾಲಿಕವಾಗಿ ಸದರಿ ರಸ್ತೆಗೆ ತಗ್ಗು ಗುಂಡಿಗಳನ್ನು ಮುಚ್ಚಿಸಿ ಕಾಯಂ ಸಿಸಿ ರಸ್ತೆ ನಿರ್ಮಾಣ ಮಾಡುತ್ತೇವೆ ಹಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜಗನ್ನಾಥ್ ದೇಸಾಯಿ ಹೇಳಿದರು.

ಹಟ್ಟಿ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಕಸ ವಿಲೇವಾರಿ ಸಂಬಂಧಿಸಿದಂತೆ ಈಗಾಗಲೇ ಚಿಕನ್ ಮತ್ತು ಮಟನ್ ಅಂಗಡಿಗಳಿಗೆ ನೋಟಿಸು ಜಾರಿ ಮಾಡಿ ಸದರಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಕಸ ವಿಲೇವಾರಿ ಘಟಕದ ಹತ್ತಿರ ಈಗಾಗಲೇ ಕಡೋಣಿ ಗ್ರಾಮದ ಸ.ನಂ 9 ರಲ್ಲಿ 5 ಎಕರೆ ಜಮೀನನ್ನು ಕಾಯ್ದಿರಿಸಲಾಗಿದೆ.

ಪಟ್ಟಣ ಪಂಚಾಯತಿ ಯಿಂದ ಹಳ್ಳದಲ್ಲಿ ಕಸ ಹಾಕುವುದನ್ನು ನಿಲ್ಲಿಸುತ್ತೇವೆ. ಸಿ.ಎ ಸೈಟಗಳ ಒತ್ತುವರಿ ಕುರಿತು ಪತ್ತೆ ಹಚ್ಚಿ ಅವುಗಳನ್ನು ಪಂಚಾಯತಿ ವಶಕ್ಕೆ ಪಡೆದು ರಕ್ಷಣೆ ಮಾಡುತ್ತೇವೆ. 7 ನೇ ವಾರ್ಡಿನಲ್ಲಿ 2 ಬದಿಯಲ್ಲಿ ಚರಂಡಿ ನಿರ್ಮಿಸಲು ಕ್ರಮ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.

ಹಟ್ಟಿ ಪಟ್ಟಣಕ್ಕೆ ರುದ್ರಭೂಮಿ ಮಂಜೂರು ಮಾಡುತ್ತೇವೆ. ಆದರೆ ಯಾರಾದರೂ ಜಮೀನು ಮಾರಲು ಮುಂದೆ ಬಂದರೆ ನಾವು ಅದನ್ನು ಖರೀದಿಸಿ ರುದ್ರಭೂಮಿ ವ್ಯವಸ್ಥೆ ಮಾಡುತ್ತೇವೆ ಎಂದು ತಹಶೀಲ್ದಾರ್ ಶಂಶಾಲಂ ಹೇಳಿದರು.

ಹಟ್ಟಿ ಪಟ್ಟಣದಲ್ಲಿ ಮಟಕಾ, ಗಾಂಜಾ, ಇಸ್ಪೀಟ್, ಕ್ರಿಕೆಟ್ ಬೆಟ್ಟಿಂಗ್ ಇನ್ನಿತರ ಅಕ್ರಮ ಚಟುವಟಿಕೆಗಳು ತಡೆಯಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸುತ್ತೇವೆ. ಹಟ್ಟಿ ಪಟ್ಟಣದ ಕಾಮ್ರೇಡ್ ಅಮರಗುಂಡಪ್ಪ ಬಸ್ ನಿಲ್ದಾಣದ ಜಾಗ ಒತ್ತುವರಿಯಾದ ಕುರಿತು 1980 ರಲ್ಲಿ ನ್ಯಾಯಾಲಯದ ಆದೇಶವಾಗಿದೆ. ಅದನ್ನು ಸರ್ವೇ ಮಾಡಿಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕು. ಎಂದು ಮುಖ್ಯಾಧಿಕರಿಗೆ ಸಹಾಯಕ ಆಯುಕ್ತ ಅವಿನಾಶ್ ಶಿಂಧೆ ಸೂಚಿಸಿದರು.

ಇವೆಲ್ಲಾ ವಿಷಯಗಳ ಪ್ರಗತಿಯ ಬಗ್ಗೆ ಮತ್ತೆ ಮುಂದಿನ ತಿಂಗಳು ಸಭೆ ಮಾಡೋಣ ಎಂದು ಸಹಾಯಕ ಆಯುಕ್ತರ ಅವಿನಾಶ್ ಶಿಂಧೆ ಹೇಳಿ ಸಭೆ ಮುಗಿಸಿದರು.

ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ವಿಶ್ವ ಅನೆಹೊಸೂರು, ಗ್ರಾಪಂ ಮಾಜಿ ಪ್ರಧಾನ ನರಸಿಂಹಬಾನ್ ಠಾಕೂರ್, ಸಿಐಟಿಯು ಮುಖಂಡರಾದ ನಿಂಗಪ್ಪ ಎಂ, ಅಲ್ಲಾಭಕ್ಷ, ಬಾಬಾ ಜಾನಿ, ಖಾಜಾಹುಸೇನ್, ರಿಯಾಜ್, ದಾವೂದ್, ಡಿವೈಎಫ್ಐ ಮುಖಂಡರಾದ ಶರಣಬಸವ ಆನೆಹೊಸೂರು, ಪಯಾಜ್ ಬಂಡಿ, ಪಟ್ಟಣ ಪಂಚಾಯತಿ ಸಿಬ್ಬಂದಿ ಚಂದ್ರಶೇಖರ, ಅಕ್ರಂ ಪಾಷ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular


Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420