ಮೋದಿ ವಿರುದ್ಧ ಎಫ್‌ಐಆರ್ ದಾಖಲಿಸಲು ಸಿದ್ಧರಾಗಿ, ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಪ್ರಿಯಾಂಕ್ ಖರ್ಗೆ ಕರೆ:

0
161

ವಾಡಿ: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿರುವ ಕೂಲಿ ಕಾರ್ಮಿಕರಿಗೆ ಕಳೆದ ಎರಡು ವರ್ಷಗಳಿಂದ ಹಣ ಪಾವತಿಯಾಗಿಲ್ಲ. ಬಡವರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಕೇಂದ್ರ ಸರಕಾರ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ. ಜನರಿಗೆ ಮೋಸ ಮಾಡಿರುವ ಪ್ರಧಾನಿ ಮೋದಿ ವಿರುದ್ಧ ಎಫ್‌ಐಆರ್ ದಾಖಲಿಸಲು ಚಿಂತನೆ ನಡೆಸುತ್ತಿದ್ದೇನೆ. ವೇತನ ವಂಚಿತ ಖಾತ್ರಿ ಕಾರ್ಮಿಕರೆಲ್ಲ ನನ್ನೊಂದಿಗೆ ಸಿದ್ಧರಾಗಿ ಎಂದು ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಕರೆ ನೀಡಿದರು.

ಕೆಬಿಜೆಎನ್‌ಎಲ್ ಯೋಜನೆಯ ರೂ. ೧೦ ಲಕ್ಷ ಅನುದಾನದಡಿ ಚಾಮನೂರ ಗ್ರಾಮದ ಪಜಾ ಬಡಾವಣೆಗೆ ಮಂಜೂರಾದ ಸಮುದಾಯ ಭವನ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು. ನೆರೆಹಾವಳಿಯಿಂದ ಉತ್ತರ ಕರ್ನಾಟಕದ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರಕಾರ ಕೇಂದ್ರಕ್ಕೆ ಕೊಟ್ಟ ವರದಿ ಪ್ರಕಾರ ಮನೆಗಳು ಮುಳುಗಡೆಯಾಗಿ ೩೫೦೦೦ ಕೋಟಿ ರೂ. ಮೌಲ್ಯದ ನಷ್ಟವಾಗಿದ್ದು, ಕುಟುಂಬಗಳು ಬೀದಿಗೆ ಬಂದು ನಿಂತಿವೆ. ನೆರವಿಗೆ ಮುಂದಾಗಬೇಕಾದ ಸಿಎಂ ಯಡಿಯೂರಪ್ಪ ಹತಾಶರಾಗಿ ಕುಳಿತಿದ್ದಾರೆ. ಅಧಿಕಾರಕ್ಕಾಗಿ ಶಾಸಕರನ್ನು ಖರೀದಿ ಮಾಡಿ ಹಸಿರು ಶಾಲು ಹೊದ್ದು ಕೈಬೀಸಿದರಷ್ಟೇ ಸಾಲದು. ಜನರಿಗೆ ಸುಳ್ಳಿ ಹೇಳಿಕೊಂಡು ತಿರುಗುವ ಬದಲು ಕೇಂದ್ರದಿಂದ ಹಣ ತರುವ ತಾಕತ್ತೂ ಹೊಂದಿರಬೇಕು ಎಂದು ವಾಗ್ದಾಳಿ ನಡೆಸಿದರು.

Contact Your\'s Advertisement; 9902492681

ಕರ್ನಾಟಕದ ನೆರೆ ಸಂತ್ರಸ್ತರಿಗಾಗಿ ಮೋದಿ ಹೃದಯ ಮಿಡಿಯುತ್ತಿಲ್ಲ. ಇತ್ತ ರಾಜ್ಯ ಸರಕಾರ ಕಲಬುರಗಿ ಜಿಲ್ಲೆಗೆ ಮಂತ್ರಿಸ್ಥಾನ ಹಾಗೂ ಜಿಲ್ಲಾ ಉಸ್ತೂವಾರಿ ಸಚಿವರನ್ನು ನೇಮಿಸದೆ ಕೇಂದ್ರದ ಮುಂದೆ ಇಲಿಯಂತಾಗಿರುವ ಯಡಿಯೂರಪ್ಪ ರಾಜಾ ಹುಲಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಿದ್ದೇ ಬಿಜೆಪಿಯ ಸಾಧನೆಯಾಗಿದ್ದು, ಈ ಭಾಗದ ಜನರ ಕಲ್ಯಾಣಕ್ಕಾಗಿ ಒಂದೂ ಹೊಸ ಯೋಜನೆಗಳಿಲ್ಲ. ಪತ್ರಿಕೆಗಳಿಗೆ ಫೊಜು ಕೊಡುವ ಸಂಸದ ಉಮೇಶ ಜಾಧವ ಗೆದ್ದಮೇಲಂತೂ ಜಿಲ್ಲೆಯಲ್ಲಿ ಟ್ರಾನ್ಸ್‌ಫರ್ ದಂಧೆ ಶುರುವಾಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಒಂದೊಂದು ರೇಟ್ ಫಿಕ್ಸ್ ಮಾಡಲಾಗಿದೆ. ಬಿಜೆಪಿಯ ಯಾವ ನಾಯಕ ಎಲ್ಲೆಲ್ಲಿ ಏನೇನು ದಂಧೆ ನಡೆಸುತ್ತಿದ್ದಾನೆ ಎಂಬುದು ಗೊತ್ತಾಗಿದೆ. ಇವರ ರೇಟ್ ಕಾರ್ಡ್ ಸಿದ್ಧಪಡಿಸುವ ಮೂಲಕ ರಾಜಕೀಯ ವೇದಿಕೆಗಳಲ್ಲಿ ಬಣ್ಣ ಬಯಲು ಮಾಡುತ್ತೇನೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಶಾಂಪೂರಹಳ್ಳಿ ಗ್ರಾಮದಲ್ಲಿ ರೂ.೪೯.೫೦ ಲಕ್ಷ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ, ಲಾಡ್ಲಾಪುರ-ಅಳ್ಳೊಳ್ಳಿ ರಸ್ತೆ ಸುಧಾರಣೆಗೆ ೧.೮೭ ಕೋಟಿ ರೂ., ಹಳಕರ್ಟಿ ಗ್ರಾಪಂ ವ್ಯಾಪ್ತಿಯ ದೇವಜಿ ತಾಂಡಾದಲ್ಲಿ ೪೯.೫೦ ಲಕ್ಷ ರೂ. ವೆಚ್ಚದ ಸಿಸಿ ರಸ್ತೆ-ಚರಂಡಿ, ದೇವಾಪುರ ಗ್ರಾಮದಲ್ಲಿ ೪೫ ಲಕ್ಷ ರೂ. ವೆಚ್ಚದ ಬೀದಿ ದೀಪ, ಶಾಲೆಗೆ ಶೌಚಾಲಯ ಹಾಗೂ ಸಿಸಿ ರಸ್ತೆ-ಚರಂಡಿ ಹಾಗೂ ರೂ.೮.೭೫ ಲಕ್ಷ ಅನುದಾನದಲ್ಲಿ ಹಳಕರ್ಟಿ ಗ್ರಾಮದ ಉರ್ದು ಪ್ರಾಥಮಿಕ ಶಾಲೆಯ ಕೋಣೆಗಳ ನಿರ್ಮಾಣ ದೇರಿದಂತೆ ೩.೮೯ ಕೋಟಿ ರೂ. ಅನುದಾನದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಪ್ರೀಯಾಂಕ್ ಖರ್ಗೆ ಅಡಿಗಲ್ಲು ನೆರವೇರಿಸಿದರು.

ಕೆಪಿಸಿಸಿ ಸದಸ್ಯ ಶ್ರೀನಿವಾಸ ಸಗರ ಹಾಗೂ ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮಾತನಡಿದರು. ಜಿಪಂ ಸದಸ್ಯ ಶಿವುರುದ್ರ ಭೀಣಿ, ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಗ್ರಾಪಂ ಅಧ್ಯಕ್ಷೆ ವಿಮಲಾಬಾಯಿ ರಾಠೋಡ, ಉಪಾಧ್ಯಕ್ಷ ಶ್ರೀಮಂತ ಭಾವಿ, ಮುಖಂಡರಾದ ಶರಣಗೌಡ ಚಾಮನೂರ, ಟೋಪಣ್ಣ ಕೋಮಟೆ, ಅಬ್ದುಲ್ ಅಜೀಜ್‌ಸೇಠ, ಶಂಕ್ರಯ್ಯಸ್ವಾಮಿ ಮದರಿ, ಚಂದ್ರಸೇನ ಮೇನಗಾರ, ಸುಭಾಷ ಯಾಮೇರ, ಸೂರ್ಯಕಾಂತ ರದ್ದೇವಾಡಿ, ಇಂದ್ರಜೀತ ಸಿಂಗೆ, ಗುಂಡುಗೌಡ ಇಟಗಿ, ರಸೂಲಸಾಬ ಪಾಲ್ಗೊಂಡಿದ್ದರು. ಗ್ರಾಪಂ ಸದಸ್ಯ ಭಗವಾನ ಎಂಟಮನ್ ನಿರೂಪಿಸಿ, ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here