ಶರಣರಿಗೆ ಮರಣವೇ ಮಹಾನವಮಿ: ಸಂಜಯ ಮಾಕಲ್

0
226

ಕಲಬುರಗಿ: ಮಹಿಳೆಯರು ತಮ್ಮಲ್ಲಿ ಹುದುಗಿರುವ ಭಯವನ್ನು ಬಿಡಬೇಕು. ದೇವರು, ಧರ್ಮದ ಹೆಸರಿನ ಮೇಲೆ ನಿರಂತರವಾಗಿ ನಡೆಯುತ್ತಿರುವ ಶೋಷಣೆಯಿಂದ ಪಾರಾಗಬೇಕಾದರೆ ವಿಚಾರವಂತಿಕೆಯನ್ನು ಬೆಳೆಸಿಕೊಳ್ಳಬೇಕು. ನಾವು ಪಡೆಯುವ ಶಿಕ್ಷಣ ದಿಂದ ಮಾತ್ರ ಮೂಢತೆ ಎಂಬ ಜಾಲದಿಂದ ಹೊರಬರಲು ಸಾಧ್ಯ ಎಂದು ಶರಣ ಚಿಂತಕಿ ಸುವರ್ಣಾ ಬಾಬೂಗೌಡ ನುಡಿದರು.

ನಗರದ ಪಿಲ್ಲೂ ಹೋಮಿ ಪದವಿ ಕಾಲೇಜಿನಲ್ಲಿಂದು ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಸರ್ವ ಶರಣರಾತ್ಮಧ್ವನಿ…. ಮಾನವತೆಯೇ ಮಹಾದೇವಿ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶರಣರಿಗೆ ಮರಣವೇ ಮಹಾನವಮಿ ಎಂದು ಕಲ್ಯಾಣ ಕ್ರಾಂತಿಯ ಹಿನ್ನೆಲೆಯನ್ನು ವಿವರಿಸಿದರು.

Contact Your\'s Advertisement; 9902492681

ವಿಚಾರ ಮಂಡನೆ ಮಾಡಿದ ಪಿಡಿಎ ಕಾಲೇಜಿನ ಪ್ರಾಧ್ಯಾಪಕ,  ಶರಣ ಚಿಂತಕ ಪ್ರೊ. ಸಂಜಯ ಮಾಕಲ್ ಮಾತನಾಡಿ, ಮಹಿಳೆಯರಿಗೆ ಸಮಾನತೆ ಕೊಟ್ಟಿದ್ದು ಬಸವಾದಿ ಶರಣರು ಮಾತ್ರ. ಹೆಚ್ಚು ಮೂಢನಂಬಿಕೆ, ಕಂದಾಚಾರಗಳಿಗೆ ಒಳಗಾಗಿದ್ದು ಮಹಿಳೆಯರೇ ಆಗಿದ್ದು, ಕಲ್ಲು, ಮಣ್ಭು, ಇವು ಯಾವು ದೇವರಲ್ಲ ಅಂತ ತೋರಿಸಿಕೊಟ್ಟವರು ವಚನಕಾರರು ಎಂದು ಹೇಳಿದರು.

ದೇವರು, ಧರ್ಮ ದ ಶೋಷಣೆಯಿಂದ ಈ ಸಮಾಜವನ್ನು ಇಂದು  ಹೊರಬರಬೇಕಾಗಿದೆ.. ಅಧರ್ಮವೇ ಇಂದು ಹೆಚ್ಚು ತಾಂಡವವಾಡುತ್ತಿರುವ ಇಂದಿನ ಸಮಾಜಕ್ಕೆ ನಿಜ ಧರ್ಮದ ಕಲ್ಪನೆಯನ್ನು ನೀಡಬೇಕಾಗಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಜಾತಿ ರಹಿತ ಸಮಾಜ ನಿರ್ಮಾಣದ ಕನಸು ಶರಣರದ್ದಾಗಿತ್ತು. ಆ ಕನಸನ್ನು ನನಸು ಮಾಡುವಲ್ಲಿ ಶರಣರ ವಾರಸುದಾರರಾದ ಪ್ರತಿಯೊಬ್ಬರು ಮುಂದಾಗಬೇಕಿದೆ. ವಚನಗಳ ಉಳಿವಿಗಾಗಿ ಶರಣರು ತಮ್ಮ ಪ್ರಾಣವನ್ನೂ ಸಹ ನೀಡಿದ್ದಾರೆ. ಶರಣರು ಕೊಟ್ಟಿರುವ ವಚನ ಸಾಹಿತ್ಯವನ್ನು ಉಳಿಸುವ, ಅನುಸರಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.

ಕಾಲೇಜಿನ ಪ್ರಾಚಾರ್ಯರಾದ ಕವಿತಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜನಪರ ಹೋರಾಟಗಾರ, ದಲಿತ ಪ್ಯಾಂಥರ್ ನ ಮಲ್ಲಪ್ಪ ಹೊಸಮನಿ, ಕಲಬುರಗಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ಉಪನ್ಯಾಸಕಿ ಪಂಚಶೀಲಾ ಬೇನಾಳ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಪರಮೇಶ್ವರ ಶೆಟಕಾರ ನಿರೂಪಿಸಿದರು. ಶಿವರಾಜ ಅಂಡಗಿ ಸ್ವಾಗತಿಸಿದರು. ಶ್ರೀಕಾಂತಗೌಡ ಪಾಟೀಲ ತಿಳಗೂಳ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here