ಕಾನೂನುಬಾಹಿರ ನಿರ್ಣಯ ಕೈಗೊಂಡ ರಾಜ್ಯಪಾಲರು ರಾಜೀನಾಮೆ ನೀಡಬೇಕು: ಸಿಎಂ

0
35

ಬೆಂಗಳೂರು: ಯಾವುದೇ ದಾಖಲೆ, ಸಾಕ್ಷ್ಯ, ತನಿಖೆ ಇಲ್ಲದಿದ್ದರೂ ರಾಜ್ಯಪಾಲರು ಆಧಾರವಿಲ್ಲದೆ ನನ್ನ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿ ಕೇಂದ್ರದ ಒತ್ತಡಕ್ಕೆ ಒಳಗಾಗಿದ್ದಾರೆ. ತಪ್ಪು ಮಾಡದ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಕಾನೂನುಬಾಹಿರ ನಿರ್ಣಯ ಕೈಗೊಂಡ ರಾಜ್ಯಪಾಲರು ರಾಜೀನಾಮೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅವರು ಶನಿವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ನ್ಯಾಯ-ಸತ್ಯದ ಪರವಾಗಿ ನಿಂತು ಪ್ರಜಾಪ್ರಭುತ್ವದ ಉಳಿವಿನ ಹೋರಾಟಕ್ಕೆ ಗಟ್ಟಿಯಾಗಿ ನಿಂತಿರುವ ಕ್ಯಾಬಿನೆಟ್, ಸಂಸದರು, ರಾಜ್ಯಸಭಾ ಸದಸ್ಯರುಗಳು, ಶಾಸಕರುಗಳು, ಇಡಿ ಪಕ್ಷ, ಹೈ ಕಮಾಂಡ್ ಮತ್ತು ಪಕ್ಷದ ಲಕ್ಷಾಂತರ ಕಾರ್ಯಕರ್ತರಿಗೆ ನನ್ನ ಧನ್ಯವಾದ ಹೇಳಿದರು.

Contact Your\'s Advertisement; 9902492681

ರಾಜ್ಯಪಾಲರು ರಾಷ್ಟ್ರಪತಿ, ಸಂವಿಧಾನದ ಪ್ರತಿನಿಧಿಯಾಗಿ ಕೆಲಸ ಮಾಡಬೇಕೇ ಹೊರತು, ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಕೆಲಸ ಮಾಡಬಾರದು. ರಾಜ್ಯಪಾಲರ ಈ ಧೋರಣೆಯನ್ನು ಸಚಿವ ಸಂಪುಟ ತೀವ್ರವಾಗಿ ಖಂಡಿಸಿದೆ. ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ಚುನಾಯಿತ ಸರ್ಕಾರವನ್ನು ಅಸ್ತಿರಗೊಳಿಸುತ್ತಿದೆ. ಇದು ಪ್ರಜಾಪ್ರಭುತ್ವದ ಮೂಲಭೂತ ತತ್ವಕ್ಕೆ ಧಕ್ಕೆ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ, ಪ್ರಜಾತಂತ್ರಕ್ಕೆ ಧಕ್ಕೆ ಎಂದು ಸಚಿವ ಸಂಪುಟ ನಿರ್ಣಯಿಸಿದೆ ಎಂದು ತಿಳಿಸಿದ್ದಾರೆ.

ಎಲ್ಲಾ ರಾಜ್ಯ ಸರ್ಕಾರಗಳ ಎಲ್ಲಾ ಮುಖ್ಯ ಕಾರ್ಯದರ್ಶಿಗಳಿಗೆ ಸೆಪ್ಟೆಂಬರ್ 3, 2021 ಕ್ಕೆ ಕೇಂದ್ರ ಸರ್ಕಾರವೇ ಕಳುಹಿಸಿರುವ ಸುತ್ತೋಲೆ ಪ್ರಕಾರವೇ ರಾಜ್ಯಪಾಲರು ಪ್ರೊಸೀಜರ್ ಅನುಸರಿಸಿಲ್ಲ. ಸುತ್ತೋಲೆಯಲ್ಲಿರುವ ನಿರ್ದೇಶನಗಳನ್ನೇ ರಾಜ್ಯಪಾಲರು ಪಾಲಿಸಿಲ್ಲ. ಆದ್ದರಿಂದ ರಾಜ್ಯಪಾಲರ ನಿರ್ಣಯ ಕಾನೂನುಬಾಹಿರ. ಈ ಕಾನೂನುಬಾಹಿರ ತೀರ್ಮಾನದ ವಿರುದ್ಧ ಕಾನೂನು ಹೋರಾಟ ನಡೆಸಲು ಸಚಿವ ಸಂಪುಟ ಸಭೆ ನಿರ್ಣಯಿಸಿದೆ.ಚುನಾಯಿತ ಸರ್ಕಾರವನ್ನು ಕಿತ್ತಾಕುವ ಕೇಂದ್ರ ಸರ್ಕಾರದ ದುರುದ್ದೇಶದ ಪ್ರಯತ್ನಕ್ಕೆ ನಾವು ತಡೆಯೊಡ್ಡಬೇಕು ಎಂದು ನಿರ್ಣಯಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ನಮ್ಮ ಯಶಸ್ವೀ ಗ್ಯಾರಂಟಿ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಕೂಡ ವಿರೋಧಿಸಿದ್ದರು. ಹೀಗಾಗಿ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಕುಟಿಲತನವನ್ನು ಯಶಸ್ವಿಯಾಗಿ ವಿರೋಧಿಸಿ ಸತ್ಯವನ್ನು ಗೆಲ್ಲಿಸುತ್ತೇವೆ. ಅಬ್ರಹಾಂ ಎನ್ನುವವರು 26-7-2024 ರ ಬೆಳಗ್ಗೆ 11:30 ಗೆ ದೂರು ನೀಡಿದರೆ ಅದೇ ದಿನ 10 ಗಂಟೆಗೆ ರಾಜ್ಯಪಾಲರು ಶೋ ಕಾಸ್ ನೋಟಿಸ್ ರೆಡಿ ಮಾಡಿದ್ದರು. ಆದರೆ ಶಶಿಕಲಾ ಜೊಲ್ಲೆ, ಹೆಚ್.ಡಿ.ಕುಮಾರಸ್ವಾಮಿ ಅವರ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿ ದಾಖಲೆಗಳ ಸಮೇತ ರಾಜ್ಯಪಾಲರಿಗೆ ದೂರು ನೀಡಿದರೂ ಅವರ ವಿರುದ್ಧದ ತನಿಖೆಗೆ ಅನುಮತಿ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ ಅವರ ಪ್ರಕರಣದಲ್ಲಿ ತನಿಖೆ ನಡೆದು ಕುಮಾರಸ್ವಾಮಿ ತಪ್ಪಿತಸ್ಥ ಎಂದು ಉಲ್ಲೇಖವಾಗಿದ್ದರೂ, ತನಿಖೆಯ ದಾಖಲೆಗಳ ಸಮೇತ ರಾಜ್ಯಪಾಲರಿಗೆ ದೂರು ನೀಡಿದ್ದರೂ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿಲ್ಲ.ಹಾಗೆಯೇ ಮುರುಗೇಶ್ ನಿರಾಣಿ ಮತ್ತು ಜನಾರ್ಧನ ರೆಡ್ಡಿ ಅವರ ವಿರುದ್ಧ ತನಿಖೆ ನಡೆದು ತನಿಖೆಯಲ್ಲಿ ತಪ್ಪಿತಸ್ಥರು ಎಂದು ಸಾಬೀತಾಗಿ, ತನಿಖಾ ವರದಿ ಉಲ್ಲೇಖವಾಗಿದ್ದರೂ ಇದೇ ರಾಜ್ಯಪಾಲರು ಕ್ರಮಕ್ಕೆ ಅನುಮತಿ ನೀಡಿಲ್ಲ. ಆದರೆ ನನ್ನ ವಿಚಾರದಲ್ಲಿ ಮಾತ್ರ ತರಾತುರಿಯಲ್ಲಿ ಅನುಮತಿ ನೀಡಿದ್ದಾರೆ ಎಂದರು.

ನನ್ನ ವಿರುದ್ಧ ತನಿಖೆ ನಡೆದಿಲ್ಲ. ತನಿಖೆಯಲ್ಲಿ ನನ್ನ ಪಾತ್ರದ ಉಲ್ಲೇಖವಿಲ್ಲ. ನನ್ನ ಪಾತ್ರದ ಬಗ್ಗೆ ಯಾರೂ ಯಾವುದೇ ದಾಖಲೆ ಕೊಟ್ಟಿಲ್ಲ. ನನ್ನ ಸರ್ಕಾರದ ಅವಧಿಯಲ್ಲಿ ನಡೆದ ವಿಚಾರ ಇದಲ್ಲ. ನನ್ನಿಂದ ಒಂದೂ ಪತ್ರ ಹೋಗಿಲ್ಲ. ನನ್ನ ಸಹಿ ಎಲ್ಲೂ ಇಲ್ಲ. ನನ್ನಿಂದ ಒಂದೂ ಮನವಿ ಪತ್ರವೂ ಹೋಗಿಲ್ಲ. ಎಲ್ಲವೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವುದು.
ನಾನು ಏಕೆ ರಾಜೀನಾಮೆ ನೀಡಬೇಕು? ನನ್ನ ಪಾತ್ರದ ಬಗ್ಗೆ ಎಲ್ಲೂ, ಯಾರೂ ಹೇಳುತ್ತಿಲ್ಲ. ಆದರೂ ನಾನೇಕೆ ರಾಜೀನಾಮೆ ನೀಡಲಿ? ದೊಡ್ಡ ಷಡ್ಯಂತ್ರ ನಡೆಯುತ್ತಿರುವುದು ನಮಗೆ ಗೊತ್ತಿತ್ತು. ಅದಕ್ಕೆ ನಾವೂ ಹೋರಾಟದ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ-ಜೆಡಿಎಸ್ ರಾಜ್ಯದ ಜನರ ಮುಂದೆ ಬೆತ್ತಲಾಗುತ್ತಿದ್ದಾರೆ. ನಾವು ಸತ್ಯ ಮುಂದಿಟ್ಟು ಜನರ ನಡುವೆ ಮತ್ತಷ್ಟು ಗಟ್ಟಿ ಆಗುತ್ತೇವೆ.ನಮ್ಮ‌ ಸಮಾವೇಶಕ್ಕೆ ಒಂದೂವರೆ ಲಕ್ಷ ಜನ‌ ಸೇರಿದ್ದರು. ಬಿಜೆಪಿಗೆ 30 ಸಾವಿರ ಕೂಡ ಸೇರಿಲ್ಲ. ಜನ ನಮ್ಮ ಪರವಾಗಿ ಇರುವುದಕ್ಕೆ ಇದೇ ಸಾಕ್ಷಿ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here