ಸುರಪುರ: ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಕ್ಷೌರ ಮಾಡಿಸಿಕೊಳ್ಳಲು ಹೋದ ದಲಿತ ಸಮುದಾಯದ ಯುವಕನನ್ನು ಕೊಲೆ ಮಾಡಿದ ಕ್ಷೌರದ ಅಂಗಡಿ ವ್ಯಕ್ತಿಗೆ ಗಲ್ಲು ಶಿಕ್ಷೆ ನೀಡುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಘಟನೆಯ ಮುಖಂಡರು ಆಗ್ರಹಿಸಿದ್ದಾರೆ.
ಈ ಕುರಿತು ಸಂಘಟನೆಯ ಕಲಬುರ್ಗಿ ವಿಭಾಗಿಯ ಪ್ರಧಾನ ಸಂಚಾಲಕ ರಾಮಣ್ಣ ಕಲ್ಲದೇವನಹಳ್ಳಿ ಹಾಗೂ ಯಾದಗಿರಿ ಜಿಲ್ಲಾ ಉಪ ಪ್ರಧಾನ ಸಂಚಾಲಕ ಮಾಳಪ್ಪ ಕಿರದಳ್ಳಿ ಅವರು ಪತ್ರಿಕಾ ಹೇಳಿಕೆ ನೀಡಿ,ಸಂಗನಾಳ ಗ್ರಾಮದಲ್ಲಿ ಯಮನೂರಪ್ಪ ಬಂಡಿಹಾಳ ಎನ್ನುವ ದಲಿತ ಸಮುದಾಯದ ಯುವಕ ಅದೇ ಗ್ರಾಮದಲ್ಲಿ ಮುದಕಪ್ಪ ಎನ್ನುವ ವ್ಯಕ್ತಿಯ ಕ್ಷೌರದ ಅಂಗಡಿಗೆ ಹೋಗಿ ಕ್ಷೌರ ಮಾಡುವಂತೆ ಕೇಳಿಕೊಂಡಾಗ,ನೀನು ದಲಿತ ಸಮುದಾಯದವನು ಕ್ಷೌರ ಮಾಡುವುದಿಲ್ಲ ಎಂದು ಅಸ್ಪøಷ್ಯತೆ ತೋರಿದ್ದಾರೆ.
ಅಲ್ಲದೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಮುದುಕಪ್ಪ ಕ್ಷೌರ ಮಾಡಲು ಬಳಸುವ ತನ್ನ ಕೈಯಲ್ಲಿದ್ದ ಕತ್ತಿಯಿಂದ ಯಮನೂರಪ್ಪನ ಹೊಟ್ಟೆಗೆ ಇರಿದು ಕೊಲೆ ಮಾಡಿದ್ದಾನೆ.ಆದ್ದರಿಂದ ಕೊಲೆಗಾರ ಯಮನೂರಪ್ಪಗೆ ಗಲ್ಲು ಶಿಕ್ಷೆ ನೀಡಬೇಕು ಹಾಗೂ ರಾಜ್ಯದಲ್ಲಿ ಇನ್ನೂ ಅಸ್ಪøಷ್ಯತೆ ಜೀವಂತವಾಗಿದ್ದು ಇದರ ನಿರ್ಮೂಲನೆಗೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಈ ಘಟನೆಯ ಹೊಣೆ ಹೊತ್ತು ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಾಮಣ್ಣ ಕಲ್ಲದೇವನಹಳ್ಳಿ ಆಗ್ರಹಿಸಿದ್ದು ಇಬ್ಬರು ಮುಖಂಡರು ಪ್ರತ್ಯೇಕ ಹೇಳಿಕೆ ಮೂಲಕ ಘಟನೆಯನ್ನು ಖಂಡಿಸಿದ್ದಾರೆ.