ಕಲಬುರಗಿ: ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಯುವಕನೊಬ್ಬನಿಗೆ ಸುಮಾರು 45 ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ನೀಡುವುದರ ಜೊತೆಗೆ ಅಗತ್ಯವಿದ್ದ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಯನ್ನು ಮಾಡುವ ಮೂಲಕ ವ್ಯಕ್ತಿಯ ಜೀವ ಉಳಿಸಿದ ಟ್ರಾಮಾ ಕೇರ್ ಸೆಂಟರ್ ನ ವೈದ್ಯರ ತಂಡಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಶ್ಲಾಘಿಸಿದ್ದಾರೆ.
ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾ ( ಫೇಸ್ ಬುಕ್ ) ಖಾತೆಯಲ್ಲಿ ಬರೆದುಕೊಂಡಿರುವ ಸಚಿವರು ” ನಮ್ಮ ಕಲ್ಯಾಣ ಕರ್ನಾಟಕ ಭಾಗದ ಜನರ ಆರೋಗ್ಯ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ನಮ್ಮ ಕಲಬುರಗಿಯಲ್ಲಿ ಟ್ರಾಮಾ ಕೇರ್ ಸೆಂಟರ್ ಆರಂಭಿಸಬೇಕೆಂಬ ಬೇಡಿಕೆ ಬಹುದಿನಗಳಿಂದ ಇತ್ತು. ಜನರ ಭಾವನೆ ಅರಿತಿದ್ದ ನಮ್ಮ ಹಿಂದಿನ ಕಾಂಗ್ರೆಸ್ ಸರ್ಕಾರ ಟ್ರಾಮಾ ಕೇರ್ ಸೆಂಟರ್ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿತ್ತು. ಈ ಅತ್ಯಾಧುನಿಕ ಟ್ರಾಮಾ ಕೇರ್ ಸೆಂಟರ್ ಕಳೆದ ಫೆಬ್ರವರಿಯಲ್ಲಿ ಉದ್ಘಾಟನೆಗೊಂಡು ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿದೆ” ಎಂದು ಪ್ರಿಯಾಂಕ್ ಹೇಳಿದ್ದಾರೆ.
“ಇತ್ತೀಚೆಗೆ ಟ್ರಾಮಾ ಕೇರ್ ಸೆಂಟರ್ನ ವೈದ್ಯಾಧಿಕಾರಿಗಳ ತಂಡ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನಿಗೆ ಮೂರು ವಿವಿಧ ಶಸ್ತ್ರಚಿಕಿತ್ಸೆ ನಡೆಸಿ ಮರು ಜನ್ಮ ನೀಡಿದೆ. ಕಳೆದ ಜುಲೈ 29ರಂದು ಅಪಘಾತಕ್ಕೀಡಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕನಿಗೆ ಕಲಬುರಗಿ ಟ್ರಾಮಾ ಕೇರ್ ಸೆಂಟರ್’ನ ವೈದ್ಯರು 45 ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ನೀಡಿ, ಸುದೀರ್ಘ ನಾಲ್ಕು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ್ದರು. ಇದೀಗ ಅಪಘಾತಕ್ಕೆ ಈಡಾಗಿದ್ದ ಯುವಕ ಚೇತರಿಸಿಕೊಂಡು ಮನೆಗೆ ತೆರಳಿರುವ ಸುದ್ದಿ ತಿಳಿದು ಸಂತಸವಾಯಿತು.” ಎಂದರು ಅವರು ಹೇಳಿದ್ದಾರೆ.
“ಟ್ರಾಮಾ ಕೇರ್ ಸೆಂಟರ್ ನ ವೈದ್ಯಕೀಯ ತಂಡಕ್ಕೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಮ್ಮ ಕಲ್ಯಾಣ ಕರ್ನಾಟಕ ಭಾಗದ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕಲಬುರಗಿಯಲ್ಲಿ ಸ್ಥಾಪಿಸಲಾದ ಈ ಟ್ರಾಮಾ ಕೇರ್ ಸೆಂಟರ್ ಜನರ ನೆರವಿಗೆ ಬಂದಿರುವುದು ನನಗೆ ಸಂತೃಪ್ತಿ ನೀಡಿದೆ.” ಎಂದು ವೈದ್ಯರ ಕರ್ತವ್ಯನಿಷ್ಠೆಯನ್ನು ಕೊಂಡಾಡಿದ್ದಾರೆ.