ಕಲಬುರಗಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ನೇಮಕಗೊಂಡ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸುರೇಶ ಬಡಿಗೇರ ಅವರನ್ನು ಬುಧವಾರದಂದು ಸಹೃದಯಿ ಗೆಳೆಯರ ಬಳಗದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ನಂತರ ಮಾತನಾಡಿದ ಸುರೇಶ ಬಡಿಗೇರ, ಕನ್ನಡ ನಾಡು ನುಡಿಗಾಗಿ ನನ್ನ ಅವಧಿಯಲ್ಲಿ ಈ ಭಾಗದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದ ಅವರು, ಕನ್ನಡ ಭಾಷೆ ಉಳಿವು ಹಾಗೂ ಬೆಳೆಸಲು ಅಹರ್ನಿಷಿ ಶ್ರಮಿಸುವುದಾಗಿ ಹೇಳಿದರು.
ಪತ್ರಕರ್ತ-ಶರಣ ಸಾಹಿತಿ ಶಿವರಂಜನ್ ಸತ್ಯಂಪೇಟೆ, ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ತಮ್ಮ ಅಧಿಕಾರಾವಧಿಯಲ್ಲಿ ಈ ಭಾಗದ ಕನ್ನಡದ ಏಳ್ಗೆಗಾಗಿ ಅತ್ಯಂತ ಜವಾಬ್ದಾರಿಯಿಂದ ಕಾರ್ಯನುರ್ವಹಿಸುವಂತೆ ಮನವಿ ಮಾಡಿದರು.
ಪ್ರಮುಖರಾದ ಶ್ರೀಕಾಂತ ಪಾಟೀಲ ತಿಳಗೂಳ, ಬಿ ಎಂ.ಪಾಟೀಲ ಕಲ್ಲೂರ, ರಮೇಶ ಹಣಕುಣಿ, ರಾಘವೇಂದ್ರ ಮರತೂರ, ಬೆಳ್ಳಪ್ಪ ಮರತೂರ ಸೇರಿ ಅನೇಕರು ಉಪಸ್ಥಿತರಿದ್ದರು.