ಕಲಬುರಗಿ: ಕನ್ನಡಿಗರು ಸಹೃದಯಿಗಳು, ಶಾಂತಿ ಪ್ರಿಯರು ಮತ್ತು ಧಾರ್ಮಿಕ ಸಹಿಷ್ಣುತೆವುಳ್ಳ ಪ್ರಜ್ಞಾವಂತರು. ಇಲ್ಲಿ ಪ್ರದೇಶಕ್ಕೊಂದು ವಿಭಿನ್ನ ಸಂಸ್ಕøತಿ, ಧರ್ಮ, ಸಂಪ್ರದಾಯಗಳು ಹಲವು. ಆದರೆ ಭಾವನೆ ಮಾತ್ರ ಒಂದೇ ನಾವೆಲ್ಲರೂ ಕನ್ನಡಿಗರು. ನಾಡಿನ ಕಲೆ, ಸಾಹಿತ್ಯ, ಸಂಸ್ಕøತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಸದೃಢ, ಸಮೃದ್ಧ ಹಾಗೂ ಸ್ವಾವಲಂಬಿ ಕರ್ನಾಟಕ ನಿರ್ಮಾಣ ಮಾಡಲು ಎಲ್ಲರು ಕೈಜೋಡಿಸಬೇಕು ಎಂದು ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಕರೆ ನೀಡಿದರು.
ಶುಕ್ರವಾರ ಕಲಬುರಗಿ ನಗರದ ಗಂಜ್ ಪ್ರದೇಶದ ನಗರೇಶ್ವರ ಶಾಲೆಯಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾದ 64ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕರ್ನಾಟಕದ ಏಕೀಕರಣಕ್ಕಾಗಿ ತೋರಿದ ಒಗ್ಗಟ್ಟನ್ನು ನಾವು ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ತೋರಬೇಕಿದೆ. ಇಂದು ಅಖಂಡ ಕರ್ನಾಟಕ ಅಸ್ಥಿತ್ವಕ್ಕೆ ಬಂದ ದಿನ. ಕರ್ನಾಟಕ ರಾಜ್ಯ ಏಕೀಕರಣಗೊಂಡು 63 ವರ್ಷಗಳು ಕಳೆದಿದ್ದು, ಇಂದು 64ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. 1956ನೇ ಇಸವಿಗೂ ಮೊದಲು ಕರ್ನಾಟಕವು ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿತ್ತು. ಅಖಂಡ ಕರ್ನಾಟಕ ರಾಜ್ಯ ಸ್ಥಾಪನೆಯ ಹೋರಾಟದ ಬೀಜ 19ನೇ ಶತಮಾನದಲ್ಲೇ ಮೊಳಕೆ ಒಡೆಯಿತು. ಏಕೀಕರಣದ ಕನಸನ್ನು ಡೆಪ್ಯೂಟಿ ಚೆನ್ನಬಸಪ್ಪ ಅವರು 1856ರಲ್ಲಿಯೆ ಕಂಡಿದ್ದರು.ಸುಮಾರು ಒಂದು ನೂರು ವರ್ಷಗಳ ನಂತರ ಅಂದರೆ ನವೆಂಬರ್ 1, 1956 ರಂದು ಏಕೀಕೃತ “ಮೈಸೂರು” ರಾಜ್ಯ ಉದಯವಾಯಿತು.
ಏಕೀಕೃತ ಕರ್ನಾಟಕ್ಕಾಗಿ ಹೋರಾಡಿದ ಆಚಾರ್ಯ ಬಿ.ಎಂ. ಶ್ರೀಕಂಠಯ್ಯ, ಕುವೆಂಪು, ಅ.ನ.ಕೃಷ್ಣರಾಯರು, ಆಲೂರು ವೆಂಕಟರಾಯರು, ಮಂಗಳವೇಡೆ ಶ್ರೀನಿವಾಸರಾಯರು, ಎಸ್. ನಿಜಲಿಂಗಪ್ಪ, ಕೆ.ಎಫ್. ಪಾಟೀಲ, ಗೋರೂರು ರಾಮಸ್ವಾಮಿ ಅಯ್ಯಂಗಾರ, ಹಾರನಹಳ್ಳಿ ರಾಮಸ್ವಾಮಿ, ಕಡಿದಾಳ ಮಂಜಪ್ಪ, ಕೆಂಗಲ್ ಹನುಮಂತಯ್ಯ, ಎಚ್.ಎಸ್. ದೊರೆಸ್ವಾಮಿ, ಬಳ್ಳಾರಿ ಸಿದ್ದಮ್ಮ, ಪಾಟೀಲ ಪುಟ್ಟಪ್ಪ ಮುಂತಾದವರನ್ನು, ಅಸಂಖ್ಯಾತ ಲೇಖಕ ಲೇಖಕಿಯರನ್ನು, ಸಂಘ ಸಂಸ್ಥೆಗಳನ್ನು, ಪತ್ರಿಕೋದ್ಯಮಿಗಳನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.ಮುಂದೆ 1973ರಲ್ಲಿ ಅಂದಿನ ಮುಖ್ಯಮಂತ್ರಿಗಳಾದ ದಿವಂಗತ ಡಿ. ದೇವರಾಜ ಅರಸರು ಮೈಸೂರು ರಾಜ್ಯಕ್ಕೆ ವಿಶಾಲಾರ್ಥದಲ್ಲಿ ‘ಕರ್ನಾಟಕ’ ಎಂದು ಮರುನಾಮಕರಣ ಮಾಡಿದ್ದು ಇದೀಗ ಇತಿಹಾಸ.
ಇಲ್ಲಿನ ಜನರ ಭಾವನೆಗೆ ಬೆಲೆಕೊಟ್ಟು ಹೈದ್ರಾಬಾದ ಕರ್ನಾಟಕವನ್ನು “ಕಲ್ಯಾಣ ಕರ್ನಾಟಕ” ವೆಂದು ರಾಜ್ಯ ಸರ್ಕಾರ ಮರುನಾಮಕರಣ ಮಾಡಿದಲ್ಲದೆ ಈ ಭಾಗದ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಇದೂ ದಿಕ್ಸೂಚಿಯಾಗಲಿದೆ ಎಂದು ಡಿ.ಸಿ ವಿಶ್ವಾಸ ವ್ಯಕ್ತಪಡಿಸಿದರು.
371(ಜೆ) ಅನ್ವಯ ಸ್ಥಳೀಯರಿಗೆ ಒಟ್ಟು 32144 ಖಾಲಿ ಹುದ್ದೆಗಳನ್ನು ಗುರುತಿಸಲಾಗಿದೆ. ಇವುಗಳ ಪೈಕಿ ಜುಲೈ-2019ರ ಅಂತ್ಯಕ್ಕೆ 13659 ಹುದ್ದೆಗಳನ್ನು ಸ್ಥಳೀಯ ಅಭ್ಯರ್ಥಿಗಳಿಂದಲೆ ತುಂಬಲಾಗಿದೆ. ಇನ್ನೂ 10748 ಹುದ್ದೆಗಳು ನೇಮಕಾತಿ ಪ್ರಕ್ರಿಯೆಯು ವಿವಿಧ ಹಂತದಲ್ಲಿವೆ. ಪ್ರತಿ ವರ್ಷ 700ಕ್ಕೂ ಹೆಚ್ಚು ವೈದ್ಯಕೀಯ ಮತ್ತು ಸಾವಿರಾರು ಸಂಖ್ಯೆಯಲ್ಲಿ ಇಂಜಿನೀಯರಿಂಗ್ ಸೇರಿದಂತೆ ವೃತ್ತಿಪರ ಉನ್ನತ ಕೋರ್ಸುಗಳಲ್ಲಿ ಮೀಸಲಾತಿ ಪಡೆಯುತ್ತಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 2013-14ನೇ ಸಾಲಿನಿಂದ 2019-20ನೇ ಸಾಲಿನ ವರೆಗೆ ಒಟ್ಟು 6753.50 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಬಿಡುಗಡೆಯಾದ 4005 ಕೋಟಿ ರೂ. ಅನುದಾನ 3566.74 ಕೋಟಿ ರೂ. ಅನುದಾನ ಈ ಭಾಗಕ್ಕೆ ಖರ್ಚು ಮಾಡಲಾಗಿದ್ದು, ಅಭಿವೃದ್ಧಿಯ ಹೊಸ ಪರ್ವವನ್ನು ಇಲ್ಲಿ ಕಾಣಬಹುದಾಗಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ 6000 ರೂ.ಗಳ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 4000 ರೂ. ಹೆಚ್ಚುವರಿ ಮೊತ್ತ ನೀಡಲಾಗುತ್ತಿದೆ. ಈ ಯೋಜನೆಯಡಿ ಜಿಲ್ಲೆಯ 2,65,618 ರೈತರು ನೊಂದಣಿ ಮಾಡಿಕೊಂಡಿದ್ದು, ಇದೂವರೆಗೆ 1,78,759 ರೈತರಿಗೆ 61.06 ಕೋಟಿ ರೂ. ಹಣ ಅವರ ಖಾತೆಗೆ ಜಮಾ ಮಾಡಲಾಗಿದೆ. ಸಿರಿಧಾನ್ಯ ಬೆಳೆಯುವ ರೈತರಿಗೆ ಉತ್ತೇಜಿಸುವ ಸಲುವಾಗಿ 2019-20ನೇ ಸಾಲಿನಲ್ಲಿ “ರೈತ ಸಿರಿ” ಯೋಜನೆ ಸಹ ಅನುಷ್ಟಾನಗೊಳಿಸಿದೆ ಎಂದರು.